

ಬೆಂಗಳೂರು: ಕನ್ನಡ ಚಿತ್ರರಂಗ ಇತ್ತೀಚೆಗೆ ಸಿನಿಮಾಗಿಂತ ಸಿನಿಮೇತರ ವಿಚಾರಗಳಿಗೆ ಹೆಚ್ಚು ಸುದ್ದಿಯಾಗುತ್ತಿದ್ದು, ಕರಾವಳಿ ಚಿತ್ರದ ವಿವಾದ ಬೆನ್ನಲ್ಲೇ ಇದೀಗ ಪರಾಕ್ ಚಿತ್ರದ ಕಾರ್ಯಕ್ರಮದಲ್ಲಿ ನಟ ಶ್ರೀಮುರಳಿ ಬೇರಾರೋ ಮಾಡಿದ ತಪ್ಪಿಗೆ ತಾವು ಕ್ಷಮೆ ಕೇಳಿದ ಘಟನೆ ನಡೆದಿದೆ.
ಹೌದು.. ಇಂದು ನಟ ಶ್ರೀಮುರಳಿ ಅಭಿನಯ ಬಹುನಿರೀಕ್ಷಿತ ಪರಾಕ್ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಇದೇ ಚಿತ್ರದ ಕಾರ್ಯಕ್ರಮದಲ್ಲಿ ನಟ ಶ್ರೀಮುರಳಿ ತಮ್ಮದಲ್ಲದ ತಪ್ಪಿಗೆ ಕ್ಷಮೆ ಕೇಳಿದ್ದಾರೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದ್ದು, ಶ್ರೀಮುರಳಿ ಕ್ಷಮೆ ಕೇಳಿದ್ದೇಕೆ? ಆಗಿದ್ದೇನು ಎಂಬಿತ್ಯಾದಿ ಪ್ರಶ್ನೆಗಳು ಉದ್ಭವಿಸುತ್ತಿವೆ.
ಇತ್ತೀಚಿನ ಕೆಲವು ಬೆಳವಣಿಗೆಗಳಿಂದ ಮಾಧ್ಯಮಗಳಿಗೆ ಉಂಟಾದ ಅಸಮಾಧಾನದ ಕುರಿತು ವಿಷಾದ ವ್ಯಕ್ತಪಡಿಸಿ, ತಮ್ಮಿಂದ ಅಥವಾ ತಮ್ಮ ತಂಡದಿಂದ ಯಾವುದೇ ರೀತಿಯ ನೋವಾಗಿದ್ದರೆ ಕ್ಷಮೆ ಕೋರುವುದಾಗಿ ಹೇಳಿದರು.
ನನ್ನ ಸಿನಿಮಾ ಬದುಕಿನಲ್ಲಿ ನಿಮ್ಮ ಪಾತ್ರ ಬಹಳ ದೊಡ್ಡದು
ಮಾಧ್ಯಮಗಳು ಚಿತ್ರರಂಗದ ಅವಿಭಾಜ್ಯ ಅಂಗವಾಗಿದ್ದು, ತಮ್ಮ ಸಿನಿಮಾ ಪಯಣದಲ್ಲಿ ಪತ್ರಕರ್ತರ ಬೆಂಬಲವನ್ನು ಎಂದಿಗೂ ಮರೆಯುವುದಿಲ್ಲ. ಯಾವುದೇ ತಪ್ಪು ತಿಳುವಳಿಕೆ ಅಥವಾ ಸಂವಹನದ ಕೊರತೆಯಿಂದ ಮಾಧ್ಯಮ ಸ್ನೇಹಿತರ ಮನಸ್ಸಿಗೆ ನೋವಾಗಿದ್ದರೆ ಅದಕ್ಕಾಗಿ ವಿಷಾದ ವ್ಯಕ್ತಪಡಿಸುವುದಾಗಿ ಹೇಳಿದರು.
"ಮಾಧ್ಯಮಗಳು ನಮ್ಮನ್ನು ಸದಾ ಬೆಂಬಲಿಸಿವೆ. ನನ್ನ ಸಿನಿಮಾ ಬದುಕಿನಲ್ಲಿ ನಿಮ್ಮ ಪಾತ್ರ ಬಹಳ ದೊಡ್ಡದು. ಇತ್ತೀಚಿನ ಬೆಳವಣಿಗೆಗಳಿಂದ ಯಾರಿಗಾದರೂ ಬೇಸರವಾಗಿದ್ದರೆ ನಾನು ವೈಯಕ್ತಿಕವಾಗಿ ಕ್ಷಮೆ ಕೇಳುತ್ತೇನೆ. ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯ ಇರಬಾರದು. ಮುಂದೆಯೂ ಇದೇ ಪ್ರೀತಿ ಮತ್ತು ಸಹಕಾರ ಮುಂದುವರಿಯಲಿ ಎಂಬುದು ನನ್ನ ಆಶಯ," ಎಂದು ಶ್ರೀಮುರಳಿ ಹೇಳಿದರು.
ಆಗಿದ್ದೇನು?
ಪರಾಕ್ ಚಿತ್ರ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳದಲ್ಲಿ ಚಿತ್ರತಂಡದ ಕೆಲ ಸದಸ್ಯರು ಮಾಧ್ಯಮಗಳ ಕುರಿತು ನಕಾರಾತ್ಮಕವಾಗಿ ಮಾತನಾಡಿದ್ದು, ಈ ವಿಚಾರವನ್ನು ಸುದ್ದಿಗಾರರೊಬ್ಬರು ಚಿತ್ರದ ಕಾರ್ಯಕ್ರಮದ ವೇಳೆ ಪ್ರಶ್ನಿಸಿದರು. ಈ ವೇಳೆ ಮಾತನಾಡಿದ ಶ್ರೀಮುರಳಿ ತಮ್ಮ ತಂಡದ ಸದಸ್ಯರಿಂದಾದ ತಪ್ಪಿಗೆ ನಾನು ಕ್ಷಮೆ ಕೋರುವುದಾಗಿ ಹೇಳಿ ಪರಿಸ್ಥಿತಿ ತಿಳಿಗೊಳಿಸಿದರು.
ಶ್ರೀಮುರಳಿ ಅವರ ಈ ಮಾತಿಗೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮಾಧ್ಯಮ ಪ್ರತಿನಿಧಿಗಳು ಹಾಗೂ ಅಭಿಮಾನಿಗಳು ಚಪ್ಪಾಳೆ ತಟ್ಟಿ ಸ್ವಾಗತಿಸಿದರು.
'ಪರಾಕ್' ಮಾತು
ಇದೇ ವೇಳೆ 'ಪರಾಕ್' ಚಿತ್ರದ ಕುರಿತು ಮಾತನಾಡಿದ ಶ್ರೀಮುರಳಿ, ಇದು ತಮ್ಮ ವೃತ್ತಿಜೀವನದ ಮಹತ್ವದ ಚಿತ್ರಗಳಲ್ಲಿ ಒಂದಾಗಿದ್ದು, ಚಿತ್ರಕ್ಕಾಗಿ ಇಡೀ ತಂಡ ಸಾಕಷ್ಟು ಶ್ರಮಪಟ್ಟಿದೆ ಎಂದು ಹೇಳಿದರು.
ಪ್ರೇಕ್ಷಕರು ಚಿತ್ರವನ್ನು ಚಿತ್ರಮಂದಿರದಲ್ಲೇ ವೀಕ್ಷಿಸಿ ಬೆಂಬಲಿಸಬೇಕು ಎಂದು ಮನವಿ ಮಾಡಿದರು.
'ಪರಾಕ್' ಚಿತ್ರದ ಕಾರ್ಯಕ್ರಮದಲ್ಲಿ ಚಿತ್ರತಂಡದ ಸದಸ್ಯರು, ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದ್ದರು.