ತಮಿಳು ಚಿತ್ರರಂಗಕ್ಕೆ ಆಘಾತ: ಖ್ಯಾತ ನಿರ್ದೇಶಕ-ನಟ ಕೆ. ಭಾಗ್ಯರಾಜ್ ನಿಧನ

ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿದ್ದ ಭಾಗ್ಯರಾಜ್, ಕೆಲವೇ ದಿನಗಳ ಹಿಂದೆ ನಟಿ-ರಾಜಕಾರಣಿ ಖುಷ್ಬು ಸುಂದರ್ ಅವರ ಪುತ್ರಿಯ ವಿವಾಹ ಸಮಾರಂಭದಲ್ಲಿ ಭಾಗವಹಿಸಿದ್ದರು.
Veteran Tamil filmmaker K Bhagyaraj
ಖ್ಯಾತ ನಿರ್ದೇಶಕ-ನಟ ಕೆ. ಭಾಗ್ಯರಾಜ್
Updated on

ಚೆನ್ನೈ: ತಮಿಳು ಚಿತ್ರರಂಗದ ಹಿರಿಯ ನಿರ್ದೇಶಕ, ನಟ, ಕಥೆಗಾರ ಹಾಗೂ ಚಿತ್ರಕಥೆಗಾರ ಕೆ. ಭಾಗ್ಯರಾಜ್ (73) ಅವರು ಶನಿವಾರ ಚೆನ್ನೈನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದು, ಅವರ ಅಗಲಿಕೆಯಿಂದ ತಮಿಳು ಚಿತ್ರರಂಗಕ್ಕೆ ತುಂಬಲಾರದ ನಷ್ಟ ಉಂಟಾಗಿದೆ.

ಕೆ. ಭಾಗ್ಯರಾಜ್ ಅವರು, ಪತ್ನಿ ನಟಿ ಪೂರ್ಣಿಮಾ ಭಾಗ್ಯರಾಜ್, ಪುತ್ರ ನಟ ಶಾಂತನು ಭಾಗ್ಯರಾಜ್ ಹಾಗೂ ಪುತ್ರಿ ಸಾರಣ್ಯಾ ಭಾಗ್ಯರಾಜ್ ಅವರನ್ನು ಅಗಲಿದ್ದಾರೆ.

ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿದ್ದ ಭಾಗ್ಯರಾಜ್, ಕೆಲವೇ ದಿನಗಳ ಹಿಂದೆ ನಟಿ-ರಾಜಕಾರಣಿ ಖುಷ್ಬು ಸುಂದರ್ ಅವರ ಪುತ್ರಿಯ ವಿವಾಹ ಸಮಾರಂಭದಲ್ಲಿ ಭಾಗವಹಿಸಿದ್ದರು.

ತಮಿಳುನಾಡಿನ ಈರೋಡ್ ಜಿಲ್ಲೆಯಲ್ಲಿ ಕೃಷ್ಣಸ್ವಾಮಿ ಭಾಗ್ಯರಾಜ್ ಎಂಬ ಹೆಸರಿನಲ್ಲಿ ಜನಿಸಿದ ಅವರು, ಖ್ಯಾತ ನಿರ್ದೇಶಕ ಭಾರಥಿರಾಜಾ ಅವರ ಸಹಾಯಕರಾಗಿ ಚಿತ್ರರಂಗ ಪ್ರವೇಶಿಸಿದರು. ಬಳಿಕ ತಮ್ಮದೇ ವಿಶಿಷ್ಟ ಕಥೆ, ನಿರ್ದೇಶನ ಮತ್ತು ಅಭಿನಯದ ಮೂಲಕ ತಮಿಳು ಚಿತ್ರರಂಗದ ಪ್ರಮುಖ ಸೃಜನಶೀಲ ನಿರ್ದೇಶಕರಾಗಿ ಗುರುತಿಸಿಕೊಂಡರು.

1980 ಮತ್ತು 1990ರ ದಶಕಗಳಲ್ಲಿ ಹಾಸ್ಯ, ಭಾವನಾತ್ಮಕತೆ ಮತ್ತು ಸಾಮಾಜಿಕ ಮೌಲ್ಯಗಳನ್ನು ಒಳಗೊಂಡ ಕಥೆಗಳ ಮೂಲಕ ಅಪಾರ ಜನಪ್ರಿಯತೆ ಗಳಿಸಿದರು. ತಮ್ಮ ವೃತ್ತಿಜೀವನದಲ್ಲಿ 25ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದ್ದು, 75ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.

Veteran Tamil filmmaker K Bhagyaraj
'ಕೆಲಸ ಮಾಡಿ ಮುಗಿಸು ಎಂದಿದ್ದರು.. ಹೋಗಿ ಬಾ ಗೀತಮ್ಮ': ನಿರ್ದೇಶಕ ಪವನ್ ಒಡೆಯರ್ ತಾಯಿ ನಿಧನ, ಭಾವುಕ ಪೋಸ್ಟ್!

ಭಾಗ್ಯರಾಜ್ ಅವರು ಮುಂದಾನೈ ಮುಡಿಚು (Mundhanai Mudichu), ಅಂಧ 7 ನಾಟ್ಕಲ್ (Andha 7 Naatkal), ಚಿನ್ನ ವೀಡು (Chinna Veedu), ಸುಂದರ ಕಾಂಡಂ (Sundara Kandam), ಎಂಗ ಚಿನ್ನ ರಾಸಾ (Enga Chinna Rasa) ಹಾಗೂ ಡಾರ್ಲಿಂಗ್ ಡಾರ್ಲಿಂಗ್ ಡಾರ್ಲಿಂಗ್ (Darling Darling Darling) ಸೇರಿದಂತೆ ಹಲವು ಸೂಪರ್‌ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಇವುಗಳಲ್ಲಿ ಅನೇಕ ಚಿತ್ರಗಳು ಇಂದಿಗೂ ತಮಿಳು ಸಿನಿರಸಿಕರ ಅಚ್ಚುಮೆಚ್ಚಿನ ಸಿನಿಮಾಗಳಾಗಿವೆ.

ಭಾಗ್ಯರಾಜ್ ಅವರು ನಟಿಯರಾದ ಊರ್ವಶಿ ಮತ್ತು ಕಲ್ಪನಾ ಅವರನ್ನು ತಮಿಳು ಚಿತ್ರರಂಗಕ್ಕೆ ಪರಿಚಯಿಸುವಲ್ಲೂ ಪ್ರಮುಖ ಪಾತ್ರವಹಿಸಿದ್ದರು. ಅವರ ಪ್ರತಿಭೆಯನ್ನು ಮೆಚ್ಚಿದ್ದ ಮಾಜಿ ಮುಖ್ಯಮಂತ್ರಿ ಹಾಗೂ ನಟ ಎಂ.ಜಿ. ರಾಮಚಂದ್ರನ್ (ಎಂಜಿಆರ್) ಅವರು ಭಾಗ್ಯರಾಜ್ ಅವರನ್ನು ತಮ್ಮ "ಚಿತ್ರರಂಗದ ಉತ್ತರಾಧಿಕಾರಿ" ಎಂದು ಹೊಗಳಿದ್ದರು.

ಭಾಗ್ಯರಾಜ್ ಅವರು 1986ರಲ್ಲಿ ಬಿಡುಗಡೆಯಾದ ಹಿಂದಿ ಸಿನಿಮಾ 'ಆಖ್ರಿ ರಾಸ್ತ' (Aakhree Raasta) ಮೂಲಕ ಬಾಲಿವುಡ್‌ನಲ್ಲೂ ತಮ್ಮ ಪ್ರತಿಭೆ ಪ್ರದರ್ಶಿಸಿದ್ದರು. ಅಮಿತಾಭ್ ಬಚ್ಚನ್ ದ್ವಿಪಾತ್ರದಲ್ಲಿ ನಟಿಸಿದ್ದ ಈ ಚಿತ್ರದಲ್ಲಿ ಜಯಾ ಪ್ರದಾ, ಶ್ರೀದೇವಿ ಹಾಗೂ ಅನುಪಮ್ ಖೇರ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದರು. ಈ ಸಿನಿಮಾ ದೊಡ್ಡ ಯಶಸ್ಸು ಕಂಡಿತ್ತು.

ಭಾಗ್ಯರಾಜ್ ಅವರ ನಿಧನಕ್ಕೆ ತಮಿಳು ಚಿತ್ರರಂಗದ ಗಣ್ಯರು, ರಾಜಕೀಯ ನಾಯಕರು ಹಾಗೂ ಅಭಿಮಾನಿಗಳು ತೀವ್ರ ಸಂತಾಪ ವ್ಯಕ್ತಪಡಿಸುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಶ್ರದ್ಧಾಂಜಲಿಗಳ ಮಹಾಪೂರವೇ ಹರಿದುಬರುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com