

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ರಾಜಸ್ಥಾನದ ಉದಯಪುರದಲ್ಲಿ ಮದುವೆಯಾಗಿ ಮಾರ್ಚ್ 4ಕ್ಕೆ ಹೈದರಾಬಾದ್ ನಲ್ಲಿ ಆರತಕ್ಷತೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ತಮಗೆ ದೇಶಾದ್ಯಂತ ಅಭಿಮಾನಿಗಳಿದ್ದು, ಪ್ರೀತಿ ಸಾಕಷ್ಟು ಕೊಟ್ಟಿದ್ದಾರೆ ಎಂದು ಅಭಿಮಾನಿಗಳಿಗೆ ಸಿಹಿ ಹಂಚಿ, ಹಲವು ರಾಜ್ಯಗಳ ದೇವಸ್ಥಾನಗಳಲ್ಲಿ ಅನ್ನದಾನ ಮಾಡಲು ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮುಂದಾಗಿದ್ದಾರೆ. ಇದನ್ನು ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಈ ದೇಶದ ಸುಂದರ ಜನರೇ, ನಮ್ಮ ಈ ಪ್ರೀತಿ ಮತ್ತು ಪಯಣದಲ್ಲಿ ನೀವು ಯಾವಾಗಲೂ ಜೊತೆಯಾಗಿದ್ದೀರಿ. ನಿಮ್ಮೆಲ್ಲರ ಜೊತೆ ನಮ್ಮ ಮದುವೆಯನ್ನು ಸಂಭ್ರಮಿಸುವುದು ನಮಗೆ ಖುಷಿ ನೀಡುತ್ತದೆ. ಸಿಹಿ ಮತ್ತು ಆಹಾರದ ಜೊತೆ ಭಾರತ ಎಲ್ಲವನ್ನೂ ಸಂಭ್ರಮಿಸುತ್ತದೆ. ಹಾಗಾಗಿ ಮಾರ್ಚ್ 1ರಂದು ನಾವು ಮಿಠಾಯಿ ತುಂಬಿದ ಟ್ರಕ್ಗಳನ್ನು ದೇಶಾದ್ಯಂತ ಕಳಿಸುತ್ತಿದ್ದೇವೆ ಎಂದು ಸೋಷಿಯಲ್ ಮೀಡಿಯಾಗಳಲ್ಲಿ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಬರೆದುಕೊಂಡಿದ್ದಾರೆ.
ದೇಶದ ವಿವಿಧ ದೇವಸ್ಥಾನದಲ್ಲಿ ನಾವು ಅನ್ನದಾನ ಮಾಡಲು ದೇಣಿಗೆ ನೀಡುತ್ತಿದ್ದೇವೆ. ನಿಮ್ಮೆಲ್ಲರ ಆಶೀರ್ವಾದ ಬಯಸುತ್ತಿದ್ದೇನೆ’ ಎಂದು ಪೋಸ್ಟ್ ಮಾಡಿರುವ ಅವರು, ಯಾವ ದೇವಸ್ಥಾನಗಳಲ್ಲಿ ಅನ್ನದಾನ ನಡೆಯಲಿದೆ ಎಂಬ ಮಾಹಿತಿ ನೀಡಿದ್ದಾರೆ. ಕರ್ನಾಟಕದಲ್ಲಿ ಬೆಂಗಳೂರಿನ ಶಿವೋಹಂ ದೇವಸ್ಥಾನ, ಕೊಡಗಿನ ಪಾದಿ ಇಗ್ಗುತ್ತಪ್ಪ ದೇವಸ್ಥಾನ, ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನ, ಬೆಂಗಳೂರಿನ ರಾಧಾಕೃಷ್ಣ ದೇವಸ್ಥಾನದಲ್ಲಿ ಅನ್ನದಾನ ಮಾಡಲಾಗುವುದು.
ಕರ್ನಾಟಕದ ಮೈಸೂರು, ಕೊಡಗು ಮತ್ತು ಬೆಂಗಳೂರಿನಲ್ಲಿ ಸಿಹಿ ವಿತರಣೆ ಮಾಡಲಾಗುವುದು. ಅದೇ ರೀತಿ ಬೇರೆ ಬೇರೆ ರಾಜ್ಯಗಳ ಕೆಲವು ದೇವಸ್ಥಾನಗಳಲ್ಲಿ ಅನ್ನದಾನ ಮತ್ತು ಪ್ರಮುಖ ನಗರಗಳಲ್ಲಿ ಸಿಹಿ ಹಂಚಲಾಗುವುದು ಎಂದು ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರು ಮಾಹಿತಿ ನೀಡಿದ್ದಾರೆ.
Advertisement