

ಹೈದರಾಬಾದ್: ಸಿನಿಮಾ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ನಟಿ ಶ್ರೀಲೀಲಾ ತಮ್ಮ ಹಿಂದೆ ನಿಂತಿದ್ದ ಸಹನಟನನ್ನು ಬೈದಿದ್ದಾರೆ ಎಂಬ ವಿಡಿಯೋವೊಂದು ವ್ಯಾಪಕ ವೈರಲ್ ಆಗಿರುವಂತೆಯೇ ಈ ಕುರಿತು ಸ್ವತಃ ನಟನೇ ಸ್ಪಷ್ಟನೆ ನೀಡಿದ್ದಾರೆ.
ನಟ ಪವನ್ ಕಲ್ಯಾಣ್ ಮತ್ತು ಶ್ರೀಲೀಲಾ ಅಭಿನಯದ ಬಹು ನಿರೀಕ್ಷಿತ 'ಉಸ್ತಾದ್ ಭಗತ್ ಸಿಂಗ್' ಚಿತ್ರದ ಪ್ರಿ ರಿಲೀಸ್ ಈವೆಂಟ್ ನಲ್ಲಿ ನಡೆದ ಘಟನೆಯೊಂದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿತ್ತು. ಇದೀಗ ಇದೇ ವೈರಲ್ ವಿಡಿಯೋ ಕುರಿತು ನಟ ಮಹೇಶ್ ಅಚಂತಾ ಸ್ಪಷ್ಟನೆ ನೀಡಿದ್ದಾರೆ.
ಆಗಿದ್ದೇನು?
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನಟಿ ಶ್ರೀಲೀಲಾ ವೇದಿಕೆ ಮೇಲೆ ನಿಂತಿದ್ದರು. ನಟ ಪವನ್ ಕಲ್ಯಾಣ್, ನಿರ್ದೇಶಕ ಹರೀಶ್ ಶಂಕರ್ ಸೇರಿದಂತೆ ಹಲವರು ಕೂಡ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ವೇಳೆ ನಟಿ ಶ್ರೀಲೀಲಾ ತಮ್ಮ ಹಿಂದೆ ನಿಂತಿದ್ದ ನಟ ಮಹೇಶ್ ರತ್ತ ತಿರುಗಿ ನೋಡಿದ್ದರು.
ಇದೇ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ತರಹೇವಾರಿ ಹೆಡ್ ಲೈನ್ ಗಳನ್ನು ನೀಡಿ ವ್ಯಾಪಕ ವೈರಲ್ ಮಾಡಲಾಗುತ್ತಿತ್ತು. ನಟಿ ಶ್ರೀಲೀಲಾರನ್ನು ನಟ ಮಹೇಶ್ ಮುಟ್ಟಿದ್ದು ಇದರಿಂದ ಆಕೆ ಕೋಪದಿಂದ ನೋಡಿದ್ದಾರೆ ಎಂದು ಕಮೆಂಟ್ ಮಾಡಲಾಗುತ್ತಿತ್ತು.
ನಟ ಸ್ಪಷ್ಟನೆ
ಈ ವಿಡಿಯೋ ವೈರಲ್ ಆಗುತ್ತಲೇ ಈ ಕುರಿತು ಸ್ಪಷ್ಟನೆ ನೀಡಿರುವ ನಟ ಮಹೇಶ್ ಅಚಂತಾ, 'ಅಂತಹುದೇನೂ ಆಗಿಲ್ಲ.. ಶ್ರೀಲೀಲಾ ಫೋನ್ ಕೊಟ್ಟಿದ್ರು.. ಹಿಡ್ಕೊಂಡಿದ್ದೆ ಅಷ್ಟೇ.. ಅಲ್ಲೇನೂ ಆಗಿಲ್ಲ.. ನಾನೇನೂ ಮಾಡಿಲ್ಲ..' ಎಂದು ಪೋಸ್ಟ್ ಮಾಡಿದ್ದಾರೆ.
'ವೇದಿಕೆ ಮೇಲಿದ್ದಾಗ ನಟಿ ಶ್ರೀಲೀಲಾ ಅವರು ತಮ್ಮ ಮೊಬೈಲ್ ಅನ್ನು ನನ್ನ ಕೈಗೆ ಕೊಟ್ಟಿದ್ದರು. ವೇದಿಕೆಯಲ್ಲಿ ಎಲ್ಲರೂ ಸೇರಿದ್ದಾಗ ನಾನು ಹಿಂದೆ ಇದ್ದೆ. ಹೀಗಾಗಿ ಅವರಿಗೆ ಕಾಣಿಸಲಿಲ್ಲ. ಅವರ ಮೊಬೈಲ್ ನನ್ನ ಬಳಿ ಇದ್ದಿದ್ದರಿಂದ ಶ್ರೀಲೀಲಾ ಅವರು ನನ್ನನ್ನು ಹುಡುಕುತ್ತಾ ಹಿಂದೆ ತಿರುಗಿದರು. ಆಗ ನಾನು ಇಲ್ಲಿಯೇ ಇದ್ದೇನೆ.. ಮೊಬೈಲ್ ನನ್ನ ಬಳಿಯೇ ಇದೆ ಎಂದು ಸನ್ಹೆ ಮಾಡಿದೆ ಅಷ್ಟೇ ಎಂದು ನಟ ಮಹೇಶ್ ಸ್ಪಷ್ಟಪಡಿಸಿದ್ದಾರೆ.
ಆದರೆ ಇದೇ ವಿಚಾರವಾಗಿ ನಟಿ ಶ್ರೀಲೀಲಾ ಮಾತ್ರ ಈ ವರೆಗೂ ಯಾವುದೇ ರೀತಿಯ ಸ್ಪಷ್ಟನೆ ನೀಡಿಲ್ಲ.
Advertisement