ಆಸಕ್ತಿದಾಯಕ ಚಿತ್ರಗಳಲ್ಲಿ ನಟಿಸುವ ಕಾಂತಾರ ಖ್ಯಾತಿಯ ನಟಿ ಸಪ್ತಮಿ ಗೌಡ ಇದೀಗ ರೋರಿಂಗ್ ಸ್ಟಾರ್ ಶ್ರೀಮುರಳಿ ಜೊತೆ ತೆರೆಹಂಚಿಕೊಳ್ಳುತ್ತಿದ್ದಾರೆ. ಶ್ರೀಮುರಳಿ ನಟನೆಯ 'ಉಗ್ರಾಯುಧಂ' ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಚಿತ್ರವು ಸದ್ಯ ನಿರ್ಮಾಣ ಹಂತದಲ್ಲಿದೆ. ಪುನೀತ್ ರುದ್ರನಾಗ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಸ್ಯಾಂಡಲ್ವುಡ್ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಸುರಮ್ ಮೂವೀಸ್ ಬ್ಯಾನರ್ ಅಡಿಯಲ್ಲಿ ಜಯರಾಮ್ ದೇವಸಮುದ್ರ ನಿರ್ಮಿಸಿರುವ ಈ ಚಿತ್ರವು ದೊಡ್ಡ ಮಟ್ಟದಲ್ಲಿ ನಿರ್ಮಾಣವಾಗುತ್ತಿದೆ.
ಅಧಿಕೃತ ಘೋಷಣೆ ಇನ್ನೂ ಬಾಕಿ ಉಳಿದಿದ್ದರೂ, ಮೂಲಗಳು ಸೂಚಿಸುವಂತೆ ಸಪ್ತಮಿ ಗೌಡ ನಾಯಕಿಯಾಗಿ ಚಿತ್ರತಂಡ ಸೇರಿಕೊಂಡಿದ್ದಾರೆ. ಶ್ರೀಮುರಳಿ ಮತ್ತು ಸಪ್ತಮಿ ಇದೇ ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಉಗ್ರಾಯುಧಂ ಸುಮಾರು 500 ವರ್ಷಗಳ ಹಿಂದಿನ ಕಥೆಯನ್ನು ಆಧರಿಸಿದೆ.
ಉಗ್ರಾಯುಧಂ ಚಿತ್ರದಲ್ಲಿ ಶ್ರೀಮುರಳಿ ಐತಿಹಾಸಿಕ ಸನ್ನಿವೇಶಕ್ಕೆ ಅನುಗುಣವಾಗಿ ಹೊಸ ಲುಕ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಪ್ತಮಿ ಕೂಡ ರಾಜಮನೆತನದ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಆರಂಭಿಕ ಸೂಚನೆಗಳಿದ್ದರೂ, ಅವರ ಪಾತ್ರದ ಬಗ್ಗೆ ಹೆಚ್ಚಿನ ಮಾಹಿತಿ ಇನ್ನೂ ಲಭ್ಯವಾಗಬೇಕಿದೆ.
ಸೂರಿ ನಿರ್ದೇಶನದ, ಡಾಲಿ ಧನಂಜಯ್ ನಟನೆಯ 'ಪಾಪ್ಕಾರ್ನ್ ಮಂಕಿ ಟೈಗರ್' ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಪದಾರ್ಪಣೆ ಮಾಡಿದ ಸಪ್ತಮಿ, ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿದ ರಿಷಬ್ ಶೆಟ್ಟಿ ಅವರ ಕಾಂತಾರ ಚಿತ್ರದ ಮೂಲಕ ಖ್ಯಾತಿ ಗಳಿಸಿದರು. ಅಂದಿನಿಂದ ನಟಿ ಹಿಂದಿ ಮತ್ತು ತೆಲುಗು ಭಾಷೆಗಳಿಗೂ ಪದಾರ್ಪಣೆ ಮಾಡಿದ್ದಾರೆ. ಇತ್ತೀಚೆಗೆ 'ದಿ ರೈಸ್ ಆಫ್ ಅಶೋಕ' ಚಿತ್ರದಲ್ಲಿ ಸಪ್ತಮಿ ನಟಿಸಿದ್ದರು.
ಉಗ್ರಾಯುಧಂ ಚಿತ್ರಕ್ಕೆ ಸಂಕೇತ್ (ಮೈಸ್) ಛಾಯಾಗ್ರಹಣ ಮತ್ತು ಅಮರ್ ಅವರ ಕಲಾ ನಿರ್ದೇಶನವಿದ್ದರೆ, ಸಲಾರ್ ಚಿತ್ರಕ್ಕೆ ಹೆಸರುವಾಸಿಯಾದ ನಿರ್ಮಲ್ ಕುಮಾರ್ ದೃಶ್ಯ ಪರಿಣಾಮಗಳನ್ನು ನಿರ್ವಹಿಸುತ್ತಿದ್ದಾರೆ.
ಈಮಧ್ಯೆ, ಸಪ್ತಮಿ ಧನಂಜಯ್ ಜೊತೆಗೆ 'ಹಲಗಲಿ' ಚಿತ್ರದಲ್ಲೂ ಕೆಲಸ ಮಾಡುತ್ತಿದ್ದು, ಸುಕೇಶ್ ನಾಯಕ್ ನಿರ್ದೇಶನದ ಮತ್ತೊಂದು ಐತಿಹಾಸಿಕ ಚಿತ್ರ ಚಿತ್ರೀಕರಣದ ಹಂತದಲ್ಲಿದೆ.
Advertisement