ಲಾಸ್ಟ್ ಓವರ್ ರಹಸ್ಯ ಬಿಚ್ಚಿಟ್ಟ ಬ್ರಾಥ್ ವೇಟ್..!
ಕೋಲ್ಕತಾ: ಆ ನಾಲ್ಕು ಸಿಕ್ಸರ್ ಗಳು ವಿಶ್ವ ಚುಟುಕು ಕ್ರಿಕೆಟ್ ನಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಸಾಮ್ರಾಟರನ್ನಾಗಿ ಮಾಡಿತು. ಕೊನೆಯ ಓವರ್ ನಲ್ಲಿ ವಿಂಡೀಸ್ ತಂಡ ಕಾರ್ಲೋಸ್ ಬ್ರಾಥ್ ವೇಟ್ ತಾವು ಸಿಡಿಸಿದ ಆ ನಾಲ್ಕು ಆಮೋಘ ಸಿಕ್ಸರ್ ಗಳ ಕುರಿತು ತಮ್ಮ ಅಭಿಪ್ರಾಯಹಂಚಿಕೊಂಡಿದ್ದಾರೆ.
ಟಿ20 ವಿಶ್ವಕಪ್ ಫೈನಲ್ ಪಂದ್ಯದ ಚೇಸಿಂಗ್ ವೇಳೆ ಕೊನೆಯ ಓವರ್ ನಲ್ಲಿ 24 ರನ್ ಸಿಡಿಸುವ ಮೂಲಕ ವೆಸ್ಟ್ ಇಂಡೀಸ್ ತಂಡ ವಿಶ್ವಕಪ್ ಮಾತ್ರವನ್ನಲ್ಲದೇ ಒಂದು ಅಮೋಘ ದಾಖಲೆಯನ್ನು ಕೂಡ ಬರೆದಿದೆ. ಅದು ಈ ವರೆಗೂ ಚೇಸಿಂಗ್ ವೇಳೆ ಅದರಲ್ಲಿಯೂ ಪ್ರಮುಖವಾಗಿ ಫೈನಲ್ ಪಂದ್ಯದಲ್ಲಿ ವಿಶ್ವದ ಯಾವುದೇ ತಂಡ 24 ರನ್ ಸಿಡಿಸಿಲ್ಲ. ಆದರೆ ಆ ಸಾಧನೆಯನ್ನು ಮಾಡಿದ ಮೊದಲ ತಂಡ ಎಂಬ ಕೀರ್ತಿಗೆ ವೆಸ್ಟ್ ಇಂಡೀಸ್ ಭಾಜನಾವಾಗಿದೆ. ಈ ಎಲ್ಲ ಶ್ರೇಯ ಸಲ್ಲಬೇಕಿರುವುದು ಆ ನಾಲ್ಕು ಸಿಕ್ಸರ್ ಸಿಡಿಸಿದ ಬ್ರಾಥ್ ವೇಟ್ ಗೆ.
ಇಷ್ಟಕ್ಕೂ ತಮ್ಮ ಅಮೋಘ ನಾಲ್ಕು ಸಿಕ್ಸರ್ ಗಳ ಮೂಲಕ ವಿಂಡೀಸ್ ತಂಡವನ್ನು ಚಾಂಪಿಯನ್ ತಂಡವಾಗಿ ಮಾಡಿದ ಕಾರ್ಲೋಸ್ ಬ್ರಾಥ್ ವೇಟ್ ತಮ್ಮ ಅದ್ಭುತ ಇನ್ನಿಂಗ್ಸ್ ಬಗ್ಗೆ ಹೇಳಿದ್ದೇನು. ಇಲ್ಲಿದ ಅವರ ಹೇಳಿಕೆಯ ಪೂರ್ಣಪಾಠ..
"ಕ್ರೀಸ್ ಗೆ ಬರವು ಮುನ್ನ ನಾಯಕ ಸಮಿ ಕೇವಲ ಸ್ವಿಂಗ್ ಎಸೆತಗಳ ಮೇಲೆ ಹರಿಸಿ ಬಾರಿಸಲು ಹೇಳಿದ್ದರು. ಅದರಂತೆ ನಾನು ಸ್ವಿಂಗ್ ಎಸೆತಗಳ ಮೇಲೆ ಗಮನ ಹರಿಸಿದೆ. ಪ್ರಮುಖವಾದಿ 19ನೇ ಓವರ್ ನಲ್ಲಿ ಇಂಗ್ಲೆಂಡ್ ನ ಕ್ರಿಸ್ ಜೋರ್ಡಾನ್ ನಮ್ಮ ಮೇಲೆ ಸಾಕಷ್ಟು ಒತ್ತಡ ಹೇರಿದ್ದರು. ಅದಾಗಲೇ 80 ರನ್ ಸಿಡಿಸಿದ್ದ ಸ್ಯಾಮುಯೆಲ್ಸ್ ಜೋರ್ಡಾನ್ ಬೌಲಿಂಗ್ ನಲ್ಲಿ ಬೌಂಡರಿಗಾಗಿ ಕಳಪೆ ಎಸೆತವನ್ನು ನಿರೀಕ್ಷಿಸುತ್ತಿದ್ದರು. ಆದರೆ ಕ್ರಿಸ್ ಜೋರ್ಡಾನ್ ನಿಜಕ್ಕೂ ಅದ್ಭುತವಾಗಿ ಬೌಲಿಂಗ್ ಮಾಡಿದರು. 19ನೇ ಓವರ್ ನ ಐದನೇ ಎಸೆತದಲ್ಲಿ ಸ್ಯಾಮುಯೆಲ್ಸ್ ಬೌಂಡರಿ ಬಾರಿಸುವ ಮೂಲಕ ಒತ್ತಡ ಕಡಿಮೆ ಮಾಡುತ್ತಾರೆ ಎಂದು ಭಾವಿಸಿದ್ದೆ. ಆದರೆ ಸ್ಯಾಮುಯೆಲ್ಸ್ ಗೆ ಜೋರ್ಡಾನ್ ಯಾರ್ಕರ್ ಎಸೆಯುವ ಮೂಲಕ ಒತ್ತಡ ಹೇರಿದರು.
ಹೀಗಾಗಿ 20ನೇ ಓವರ್ ನಲ್ಲಿ ಕ್ರೀಸ್ ಗೆ ಬಂದ ನಾನು ಮೊದಲ ಎಸೆತದಲ್ಲಿ 1 ರನ್ ಕದಿಯುವ ಮೂಲಕ ಸ್ಯಾಮುಯೆಲ್ಸ್ ಮೇಲೆ ಒತ್ತಡ ಹೇರಲು ಬಯಸಿರಲಿಲ್ಲ. ಸ್ಯಾಮುಯೆಲ್ಸ್ ಅದ್ಭುತ ಆಟಗಾರ ಪಂದ್ಯವನ್ನು ಅವರೇ ಪೂರ್ಣಗೊಳಿಸುತ್ತಾರೆ ಎನ್ನುವ ವಿಶ್ವಾಸ ನನ್ನಲ್ಲಿತ್ತು. ಆದರೆ ಅವರ ಮೇಲೆ ಒತ್ತಡ ಹೇರಬಾರದು ಎನ್ನುವ ಒಂದೇ ಆಲೋಚನೆಯಿಂದ ನಾನೇ ದೊಡ್ಡ ಹೊಡೆತಕ್ಕೆ ಮುಂದಾದೆ. ಸ್ಯಾಮ್ಯುಯೆಲ್ಸ್ಗೆ ಸ್ಟ್ರೈಕ್ ಬಿಟ್ಟುಕೊಟ್ಟು ಅವರನ್ನು ಒತ್ತಡಕ್ಕೆ ಸಿಲುಕಿಸಲು ನನಗೆ ಇಷ್ಟವಿರಲಿಲ್ಲ. ಗಮನವಿಟ್ಟು ಚೆಂಡನ್ನು ಬಾರಿಸಲು ಬಯಸಿದ್ದೆ. ಸ್ಯಾಮ್ಯುಯೆಲ್ಸ್ ಕೂಡ ಅಂತಿಮ ಓವರ್ಗೆ ಮುನ್ನ ಪ್ರತಿ ಎಸೆತದಲ್ಲೂ ಸಾಧ್ಯವಾದಷ್ಟು ರನ್ ಕಸಿಯೋಣ ಎಂದಿದ್ದರು. ಅಲ್ಲದೆ 4ನೇ ಎಸೆತದಲ್ಲಿ ಸಿಂಗಲ್ಸ್ ಕಸಿದು ಗೆಲುವು ತರುವ ಅವಕಾಶವಿದ್ದರೂ 3 ಸಿಕ್ಸರ್ ಬಳಿಕ ವಿಶ್ವಾಸ ವೃದ್ಧಿಯಾಗಿದ್ದರಿಂದ ದೊಡ್ಡ ಹೊಡೆತಕ್ಕೆ ಕೈಹಾಕಿದೆ ಎಂದು ಬ್ರಾಥ್ ವೇಟ್ ಹೇಳಿದ್ದಾರೆ.
ಅಂತೆಯೇ ತಮ್ಮ ಬ್ಯಾಟ್ ತಯಾರಕರಿಗೂ ಬೌಲರ್ ವೇಟ್ ಕೃತಜ್ಞತೆ ಸಲ್ಲಿಸಿದ್ದು, ಇಂಗ್ಲೆಂಡ್ ಬೌಲರ್ ಬೆನ್ ಸ್ಟೋಕ್ಸ್ ಗೆ ತಮ್ಮ ವಿಷಾಧ ತಿಳಿಸಿದ್ದಾರೆ."ನಿಜಕ್ಕೂ ಕ್ರಿಕೆಟ್ ಎಂತಹ ಕ್ರೂರ ಆಟವೆಂದರೆ ಒಂದು ಕೆಟ್ಟ ಪಂದ್ಯ ಅಥವಾ ಕೆಟ್ಟ ಎಸೆತ ನಮ್ಮ ಹಿಂದಿನ ಎಲ್ಲ ದಾಖಲೆಗಳನ್ನು ಸಾಧನೆಗಳನ್ನು ಮಣ್ಣುಪಾಲು ಮಾಡುತ್ತದೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಇಂಗ್ಲೆಂಡ್ ನ ಸ್ಟುವರ್ಟ್ ಬ್ರಾಡ್, ಅವರ ಓವರ್ ನಲ್ಲಿ ಭಾರತ ಯುವರಾಜ್ ಸಿಂಗ್ ಸಿಡಿಸಿದ ಆರು ಸಿಕ್ಸರ್ ಗಳು ಬ್ರಾಡ್ ಅವರ ಕ್ರಿಕೆಟ್ ಜೀವನವನ್ನೇ ಬಲಿ ತೆಗೆದುಕೊಂಡಿತು. ಇದೀಗ ಬೆನ್ ಸ್ಟೋಕ್ಸ್ ಕೂಡ ಅದೇ ಪರಿಸ್ಥಿತಿಯಲ್ಲಿದ್ದಾರೆ. ಓರ್ವ ಕ್ರಿಕೆಟಿಗನಾಗಿ ಅವರ ನೋವನ್ನು ನಾನು ಅರಿಯಬಲ್ಲೆ ಎಂದು ಬ್ರಾಥ್ವೇಟ್ ಹೇಳಿದ್ದಾರೆ.