ಕೋಲ್ಕತಾ: ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿ ಪಂದ್ಯ ಗೆಲ್ಲಿಸಿಕೊಟ್ಟ ವಿರಾಟ್ ಕೊಹ್ಲಿ ಹೀರೋ ಆಗಿರಬಹುದು. ಆದರೆ ಪಂದ್ಯದ ನಿಜವಾದ ಹೀರೋ ಮಾತ್ರ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ.
ಏಕೆಂದರೆ ಬೆಳಗಿನಿಂದ ಒಂದೇ ಸಮನೆ ಸುರಿದ ಭಾರಿ ಮಳೆಯಿಂದಾಗಿ ಕೋಲ್ಕತಾದ ಈಡನ್ ಗಾರ್ಡನ್ ಮೈದಾನ ತೊಯ್ದು ತೊಪ್ಪೆಯಾಗಿತ್ತು. ಕ್ರೀಡಾಂಗಣದ ಪೂರ್ತಿ ನೀರು ತುಂಬಿ ಕೊಂಡು ಪಂದ್ಯ ನಡೆಸಲು ಅಸಾಧ್ಯವೆನ್ನುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಈಡನ್ ಗಾರ್ಡನ್ಸ್ ಮೈದಾನ ದೊಡ್ಡ ಕ್ರೀಡಾಂಗಣ ಎನ್ನುವ ನಿಟ್ಟಿನಲ್ಲಿ ನಮ್ಮ ದೇಶದ ಹೆಮ್ಮೆ ಆಗಿದ್ದರೂ, ಮೈದಾನದ ಒಳಚರಂಡಿ ವ್ಯವಸ್ಥೆ ಅಷ್ಟೇ ಕೆಟ್ಟದಾಗಿದೆ. ಆದರೆ ಪಶ್ಚಿಮ ಬಂಗಾಳ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರು ಕೂಡ ಆಗಿರುವ ಸೌರವ್ ಗಂಗೂಲಿ ಮಾತ್ರ ಬೆಳಗಿನಿಂದ ಪಂದ್ಯ ಮುಗಿಯುವವರೆಗೂ ಕ್ರೀಡಾಂಗಣದಲ್ಲಿಯೇ ಇದ್ದು, ಎಲ್ಲ ವಿಚಾರಗಳ ಮೇಲ್ವಿಚಾರಣೆ ನಡೆಸಿದ್ದರು.
ತಾವೇ ಖುದ್ದು ಹೆಚ್ಚುವರಿ ಸೂಪರ್ ಸಾಪರ್ ಹಾಗೂ ಕವರ್ಗಳನ್ನು ಮೈದಾನದಲ್ಲಿ ವ್ಯವಸ್ಥೆ ಮಾಡುವಂತೆ ಸಿಬ್ಬಂದಿಗಳು ಸೂಚಿಸಿದ್ದಷ್ಟೇ ಅಲ್ಲದೇ ಅದರ ಸಂಪೂರ್ಣ ಕಾರ್ಯವನ್ನು ಕ್ರೀಡಾಂಗಣದಲ್ಲಿಯೇ ಇದ್ದು ವೀಕ್ಷಿಸಿದರು. ಮಳೆ ಆಗಮನದ ನಿರೀಕ್ಷೆ ಮಾಡಿದ್ದ ಗಂಗೂಲಿ ಕಳೆದ ಭಾನುವಾರವೇ ಕ್ರೀಡಾಂಗಣಕ್ಕೆ ಹೆಚ್ಚುವರಿ ಸೂಪರ್ ಸಾಪರ್ ಯಂತ್ರಗಳನ್ನು ತರಿಸಿದ್ದರು. ಒಂದು ವೇಳೆ ಗಂಗೂಲಿ ತುರ್ತು ಕ್ರಮಗಳನ್ನು ತೆಗೆದುಕೊಳ್ಳದೇ ಹೋಗಿದ್ದರೆ ಪಂದ್ಯ ಖಂಡಿತಾ ಇನ್ನಷ್ಟು ವಿಳಂಬವಾಗಿ ಮತ್ತಷ್ಟು ಓವರ್ ಗಳು ಖಡಿತವಾಗುವ ಅಪಾಯವಿತ್ತು.
ಇನ್ನು ಪಂದ್ಯಕ್ಕೂ ಮುನ್ನ ನಡೆದ ಮಾಜಿ ಕ್ರಿಕೆಟಿಗರ ಸನ್ಮಾನ ಕಾರ್ಯಕ್ರಮಕ್ಕೂ ಖುದ್ದು ಗಂಗೂಲಿ ಅಹ್ವಾನ ಪತ್ರಿಕೆಗೆ ಹೆಸರುಗಳನ್ನು ಸೂಚಿಸಿದ್ದರು. ಪಾಕಿಸ್ತಾನದ ಮಾಜಿ ನಾಯಕ ಇಮ್ರಾನ್ ಖಾನ್, ಸಚಿನ್ ತೆಂಡೂಲ್ಕರ್, ನಟ ಅಮಿತಾಬ್ ಬಚ್ಚನ್ ಸೇರಿದಂತೆ ಹಲವು ಗಣ್ಯರಿಗೆ ಗಂಗೂಲಿ ಆಹ್ವಾನ ನೀಡಿದ್ದರು.
Advertisement