ದೈತ್ಯ ಗೇಯ್ಲ್ ಕಟ್ಟಿ ಹಾಕಲು ಕೈಫ್ ಕೊಟ್ಟ ಸಲಹೆ ಏನು?

2016ನೇ ಸಾಲಿನ ಟಿ20 ಸರಣಿಯ ಸೆಮಿಫೈನಲ್ ನಲ್ಲಿ ಭಾರತಕ್ಕೆ ತಲೆನೋವಾಗಬಲ್ಲ ಕ್ರಿಸ್ ಗೇಯ್ಲ್ ರನ್ನು ಹಣಿಯಲು ಭಾರತದ ಮಾಜಿ ಆಟಗಾರ ಮಹಮದ್ ಕೈಫ್ ಒಂದಷ್ಟು ಟಿಪ್ಸ್ ನೀಡಿದ್ದಾರೆ.
ಮಹಮದ್ ಕೈಫ್ ಮತ್ತು ಕ್ರಿಸ್ ಗೇಯ್ಲ್ (ಸಂಗ್ರಹ ಚಿತ್ರ)
ಮಹಮದ್ ಕೈಫ್ ಮತ್ತು ಕ್ರಿಸ್ ಗೇಯ್ಲ್ (ಸಂಗ್ರಹ ಚಿತ್ರ)

ಮುಂಬೈ: 2016ನೇ ಸಾಲಿನ ಟಿ20 ಸರಣಿಯ ಸೆಮಿಫೈನಲ್ ನಲ್ಲಿ ಭಾರತಕ್ಕೆ ತಲೆನೋವಾಗಬಲ್ಲ ಕ್ರಿಸ್ ಗೇಯ್ಲ್ ರನ್ನು ಹಣಿಯಲು ಭಾರತದ ಮಾಜಿ ಆಟಗಾರ ಮಹಮದ್ ಕೈಫ್ ಒಂದಷ್ಟು ಟಿಪ್ಸ್  ನೀಡಿದ್ದಾರೆ.

ಭಾರತ ಮಾಜಿ ಆಟಗಾರ ಮಹಮದ್ ಕೈಫ್ ಅವರ ಪ್ರಕಾರ ದೈತ್ಯ ಕ್ರಿಸ್ ಗೇಯ್ಲ್ ರನ್ನು ಕಟ್ಟಿ ಹಾಕಲು ಒಂದೇ ಒಂದು ದಾರಿ ಇದೆಯಂತೆ. ಅದು ಭಾರತದ ಸ್ಪಿನ್ ಅಸ್ತ್ರ ಆರ್ ಅಶ್ವಿನ್ ಮಾತ್ರ.  ಸಾಮಾನ್ಯದಂತೆಯೇ ಕ್ರಿಸ್ ಗೇಯ್ಲ್ ಆರಂಭಿಕರಾಗಿ ಕಣಕ್ಕಿಳಿದರೆ ಆಗ ಭಾರತ ಮೊದಲ ಓವರ್ ಎಸೆಯಲು ಆರ್ ಅಶ್ವಿನ್ ಗೆ ಅವಕಾಶ ನೀಡಬೇಕು. ಅಶ್ವಿನ್ ಎಸೆತಗಳು ತೀವ್ರವಾಗಿ  ತಿರುಗುವುದರಿಂದ ಅದು ಕ್ರಿಸ್ ಗೇಯ್ಲ್ ರ ಕಂಗೆಡಿಸುವಲ್ಲಿ ಸಫಲವಾಗುತ್ತದೆ ಎಂದು ಕೈಫ್ ಅಭಿಪ್ರಾಯಪಟ್ಟಿದ್ದಾರೆ.

"ಸಾಮಾನ್ಯವಾಗಿ ಕ್ರಿಸ್ ಗೇಯ್ಲ್ ಅಂಗಳದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾಗ ಹೆಚ್ಚು ಬೌಂಡರಿ ಮತ್ತು ಸಿಕ್ಸರ್ ಗಳತ್ತ ಗಮನ ಹರಿಸುತ್ತಾರೆ. ಇದಕೆ ಪ್ರಮುಖ ಕಾರಣ ಅವರ ಫುಟ್ ವರ್ಕ್, ಕ್ರಿಸ್ ಗೇಯ್ಲ್  ಕ್ರೀಸ್ ನಲ್ಲಿದ್ದಾಗ ಹೆಚ್ಚಾಗಿ ಒಂದು ರನ್ ಗಳತ್ತ ಗಮನ ಹರಿಸುವುದೇ ಇಲ್ಲ. ಇದನ್ನು ಭಾರತ ಪರಿಣಾಮಕಾರಿಯಾಗಿ ಬಳಸಿಕೊಂಡು ಆರಂಭದಲ್ಲೇ ಅವರ ವಿಕೆಟ್ ಪಡೆಯಬಹುದು. ಇನ್ನು ಗೇಯ್ಲ್  ಗಿರುವ ಮತ್ತೊಂದು ದೊಡ್ಡ ಕೆಟ್ಟ ಗುಣ ಎಂದರೆ ಸಾಮಾನ್ಯವಾಗಿ ಅವರು ಆಫ್ ಸ್ಟಂಪ್ ನಿಂದ ದೂರ ಹೋಗುವ ಎಸೆತಗಳನ್ನು ಸುಖಾಸುಮ್ಮನೆ ಕೆಣಕುತ್ತಾರೆ. ಇದರಿಂದ ಎದುರಾಳಿ ತಂಡಗಳು  ಅವರ ವಿಕೆಟ್ ಪಡೆಯುವ ಸಂಭವ ಜಾಸ್ತಿ ಇರುತ್ತದೆ.

ಇನ್ನು ವಿಂಡೀಸ್ ತಂಡದಲ್ಲಿ ಗೇಯ್ಲ್ ರನ್ನು ಹೊರತು ಪಡಿಸಿಯೂ ಸ್ಫೋಟಕವಾಗಿ ಬ್ಯಾಟಿಂಗ್ ಮಾಡಬಲ್ಲ ಅಟಗಾರರು ಹೇರಳವಾಗಿದ್ದಾರೆ. ಟಿ20 ಮಾದರಿ ಕ್ರಿಕೆಟ್ ಗೆ ಈ ಆಟಗಾರರು  ಹೇಳಿಮಾಡಿಸಿದಂತಿದ್ದು, ಟಿ20 ವಿಶ್ವಕಪ್ ಗೂ ಮುನ್ನ ದೇಶ ವಿದೇಶಗಳಲ್ಲಿ ಸಾಕಷ್ಟು ಟಿ20 ಪಂದ್ಯಗಳನ್ನು ಆಡಿದ್ದಾರೆ. ಬ್ರಾವೋ, ರಸೆಲ್, ಸ್ಯಾಮುಯೆಲ್ಸ್ ಮತ್ತು ಡರೇನ್ ಸಾಮಿಯಂತಹ  ಆಟಗಾರರು ದೊಡ್ಡ ಹೊಡೆತಗಳನ್ನು ಸಿಡಿಸಬಲ್ಲರು. ಸೋಲುವ ಪಂದ್ಯಗಳಿಗೆ ಈ ಆಟಗಾರರು ತಮ್ಮ ದೊಡ್ಡ ಹೊಡೆತಗಳ ಮುಖಾಂತರ ಕೆಲವೇ ನಿಮಿಷಗಳಲ್ಲಿ ತಿರುವು ನೀಡಬಲ್ಲರು. ಇನ್ನು  ವೆಸ್ಟ್ ಇಂಡೀಸ್ ಗೆ ಅನುಕೂಲವಾಗುವ ಮತ್ತೊಂದು ಅಂಶ ಎಂದರೆ ವಾಂಖೆಡೆ ಕ್ರೀಡಾಂಗಣದಲ್ಲಿ ಈಗಾಗಲೇ ವಿಂಡೀಸ್ ತಂಡ ಒಂದು ಪಂದ್ಯವನ್ನು ಆಡಿ ಗೆಲುವು ಸಾಧಿಸಿದೆ. ಪಿಚ್ ಗುಣ  ಅರಿಯಲು ಇದು ಅವರಿಗೆ ನೆರವಾಗಬಲ್ಲದು. ಇನ್ನು ವಿಂಡೀಸ್ ತಂಡ ನಾಯಕ ಡಾರೆನ್ ಸಮಿಗೆ ಎಂತಹ ಪರಿಸ್ಥಿತಿಯಲ್ಲಿ ತಮ್ಮ ಬ್ಯಾಟ್ಸಮನ್ ಗಳನ್ನು ಹೇಗೆ ರೊಟೇಟ್ ಮಾಡಬೇಕು ಎಂಬ ಉಪಾಯ ಚೆನ್ನಾಗಿಯೇ ತಿಳಿದಿದೆ. ಹೀಗಾಗಿ ವಿಂಡೀಸ್ ವಿರುದ್ಧ ಭಾರತ ಆಕ್ರಮಣಕಾರಿಯೊಂದಿಗೆ ಸಮಯೋಚಿತ ಆಟದ ಪ್ರದರ್ಶನ ಮಾಡಿದರೆ ಮಾತ್ರ ಗೆಲುವು ಸಾಧಿಸಬಹುದು ಎಂದು ಕೈಫ್  ಅಭಿಪ್ರಾಯಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com