ಬೆಂಗಳೂರು: ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಐಪಿಎಲ್-9 ಫೈನಲ್ ಪಂದ್ಯದಲ್ಲಿ ಹೈದರಾಬಾದ್ ತಂಡ ನಾಯಕ ಡೇವಿಡ್ ವಾರ್ನರ್ ಹೀರೋ ಆಗಿ ಮಿಂಚಿದರೆ ವಿಲನ್ ಆಗಿದ್ದು ಮಾತ್ರ ನಿಜಕ್ಕೂ ಆಸಿಸ್ ದೈತ್ಯ ಶೇನ್ ವಾಟ್ಸನ್.
ಇಡೀ ಟೂರ್ನಿಯಲ್ಲಿ ಕಳಪೆ ಫಾರ್ಮ್ ನಿಂದ ಬಳಲುತ್ತಿದ್ದ ವಾಟ್ಸನ್ ಬ್ಯಾಟಿಂಗ್ ವಿಭಾಗದಲ್ಲಿ ವಿಫಲರಾಗಿದ್ದರು. ಆದರೆ ಬೌಲಿಂಗ್ ನಲ್ಲಿ ಒಂದಷ್ಟು ಗಮನಾರ್ಹ ಪ್ರದರ್ಶ ನೀಡಿದ್ದ ವಾಟ್ಸನ್ ಪ್ಲೇಆಫ್ ಹಂತದ ಮೊದಲ ಪಂದ್ಯದಲ್ಲಿ ಗುಜರಾತ್ ಲಯನ್ಸ್ ತಂಡದ ವಿರುದ್ಧ ವಾಟ್ಸನ್ ಗಳಿಸಿದ 29ಕ್ಕೆ 4 ವಿಕೆಟ್ ಪಡೆದು ಆರ್ ಸಿಬಿ ಗೆಲುವಿನಲ್ಲಿ ಪಾತ್ರಧಾರಿಯಾಗಿದ್ದರು. ಇದಕ್ಕೂ ಮೊದಲು ಲೀಗ್ ಹಂತದ ಪಂದ್ಯಗಳಲ್ಲಿ ಅಂದರೆ ಮೇ 7ರಂದು ಪುಣೆ ವಿರುದ್ಧದ ಪಂದ್ಯದಲ್ಲಿ 24ಕ್ಕೆ 3 ವಿಕೆಟ್ ಕಬಳಿಸಿದ್ದರು. ಇದೇ ಪ್ರದರ್ಶನ ಫೈನಲ್ ನಲ್ಲಿಯೂ ಮೂಡಬಹುದು ಎಂದು ನಾಯಕ ವಿರಾಟ್ ಕೊಹ್ಲಿ ಎಣಿಸಿದ್ದರು.
ಆದರೆ ಕ್ರೀಡಾಂಗಣದಲ್ಲಿ ಆಗಿದ್ದೇ ಬೇರೆ. ಫೈನಲ್ ಪಂದ್ಯದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಹಾಗೂ ಉತ್ತಮ ನಾಯಕತ್ವದಿಂದ ಗಮನ ಸೆಳೆದ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್ ಗಮನ ಸೆಳೆದರೆ ಕೊನೆಯ ಒವರ್ ನಲ್ಲಿ ಬರೊಬ್ಬರಿ 24 ರನ್ ಚಚ್ಚಿಸಿಕೊಳ್ಳುವ ಮೂಲಕ ವಾಟ್ಸನ್ ನಿಜಕ್ಕೂ ಆರ್ ಸಿಬಿ ಪಾಲಿಗೆ ವಿಲನ್ ಆಗಿ ಮಾರ್ಪಟ್ಟಿದ್ದರು. ಆ ಒಂದು ಓವರ್ ನಲ್ಲಿ ವಾಟ್ಸನ್ ಹೈದರಾಬಾದ್ ರನ್ ವೇಗಕ್ಕೆ ಕಡಿವಾಣ ಹಾಕಿದ್ದರೆ ಬಹುಶಃ ಪಂದ್ಯದ ಫಲಿತಾಂಶ ಬೇರೆಯಾಗಿರುತ್ತಿತ್ತು.
ಕೊನೆಯ ಓವರ್ ನಲ್ಲಿ ಹೈದರಾಬಾದ್ ಕೆಳ ಕ್ರಮಾಂಕದ ಆಟಗಾರ ಕಟ್ಟಿಂಗ್ ಸಿಡಿಸಿದ 3 ಸಿಕ್ಸರ್, ಒಂದು ಬೌಂಡರಿ ನಿಜಕ್ಕೂ ಆರ್ ಸಿಬಿ ಪಾಲಿಗೆ ಈ ಮಟ್ಟಿಗೆ ದುಬಾರಿಯಾಗುತ್ತದೆ ಎಂದು ಯಾರೂ ಎಣಿಸಿರಲಿಲ್ಲ. ಸತತ 8 ಸರಣಿಗಳ ಬಳಿಕ 9ನೇ ಸರಣಿಯಲ್ಲಿ ಆರ್ ಸಿಬಿ ಐಪಿಎಲ್ ಟ್ರೋಫಿ ಎತ್ತಿಹಿಡಿಯುವ ಕನಸು ಇದೀಗ ಮತ್ತೆ ಭಗ್ನವಾಗಿದೆ.
Advertisement