ಕೊಹ್ಲಿ
ಕೊಹ್ಲಿ

ವೈಯುಕ್ತಿಕ ತುರ್ತುಪರಿಸ್ಥಿತಿ: ಟೀಂ ಇಂಡಿಯಾ ಕ್ಯಾಂಪ್ ಬಿಟ್ಟು ಮುಂಬೈಗೆ ದೌಡಾಯಿಸಿದ ವಿರಾಟ್ ಕೊಹ್ಲಿ

ಐಸಿಸಿ ವಿಶ್ವಕಪ್ ಟೂರ್ನಿಯ ವಾರ್ಮಪ್ ಮ್ಯಾಚ್ ನಲ್ಲಿ ತೊಡಗಿರುವ ಭಾರತ ಕ್ರಿಕೆಟ್ ತಂಡದ ಆಟಗಾರ ರನ್ ಮೆಷಿನ್ ವಿರಾಟ್ ಕೊಹ್ಲಿ ವೈಯುಕ್ತಿಕ ತುರ್ತುಪರಿಸ್ಥಿತಿಯಿಂದಾಗಿ ಕ್ಯಾಂಪ್ ತೊರೆದು ದಿಢೀರನೆ ಮುಂಬೈಗೆ ವಾಪಸಾಗಿದ್ದಾರೆ.

ತಿರುವನಂತಪುರಂ: ಐಸಿಸಿ ವಿಶ್ವಕಪ್ ಟೂರ್ನಿಯ ವಾರ್ಮಪ್ ಮ್ಯಾಚ್ ನಲ್ಲಿ ತೊಡಗಿರುವ ಭಾರತ ಕ್ರಿಕೆಟ್ ತಂಡದ ಆಟಗಾರ ರನ್ ಮೆಷಿನ್ ವಿರಾಟ್ ಕೊಹ್ಲಿ ವೈಯುಕ್ತಿಕ ತುರ್ತುಪರಿಸ್ಥಿತಿಯಿಂದಾಗಿ ಕ್ಯಾಂಪ್ ತೊರೆದು ದಿಢೀರನೆ ಮುಂಬೈಗೆ ವಾಪಸಾಗಿದ್ದಾರೆ.

ಇದೇ ಅಕ್ಟೋಬರ್ 5 ರಂದು ಬಹು ನಿರೀಕ್ಷಿತ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಚಾಲನೆ ಸಿಗಲಿದೆ. ಇದಕ್ಕೂ ಮುನ್ನ ಎಲ್ಲ ತಂಡಗಳು ಅಭ್ಯಾಸ ಪಂದ್ಯ ಆಡುತ್ತಿದೆ. ಭಾರತ ತನ್ನ ಎರಡನೇ ವಾರ್ಮ್-ಅಪ್ ಮ್ಯಾಚ್ ಅ. 3 ರಂದು ಅಂದರೆ ನಾಳೆ ಮಂಗಳವಾರ ನೆದರ್ಲೆಂಡ್ಸ್ ವಿರುದ್ಧ ತಿರುವನಂತಪುರಂನಲ್ಲಿ ಆಡಲಿದೆ. ಈಗಾಗಲೇ ಟೀಮ್ ಇಂಡಿಯಾ ತಿರುವನಂತಪುರಂ ತಲುಪಿದ್ದು, ತರಬೇತಿಯಲ್ಲಿ ಆಟಗಾರರು ನಿರತರಾಗಿದ್ದಾರೆ. ಆದರೆ ಇದೇ ಕ್ಯಾಂಪ್ ನಲ್ಲಿದ್ದ ವಿರಾಟ್ ಕೊಹ್ಲಿ ಮಾತ್ರ ಮುಂಬೈಗೆ ವಾಪಸಾಗಿದ್ದಾರೆ. 

ರೋಹಿತ್ ಶರ್ಮಾ, ಕೋಚ್ ದ್ರಾವಿಡ್, ಹಾರ್ದಿಕ್ ಪಾಂಡ್ಯ ಸೇರಿದಂತೆ ವಿಶ್ವಕಪ್​ ತಂಡದಲ್ಲಿರುವ ಎಲ್ಲ ಆಟಗಾರರು ಭಾನುವಾರ ಅಕ್ಟೋಬರ್ 1ರಂದೇ ತಿರುವನಂತಪುರಕ್ಕೆ ಪ್ರಯಾಣ ಬೆಳೆಸಿದರು. ಆದರೆ, ಭಾರತ ತಂಡದ ಬ್ಯಾಟಿಂಗ್ ಸೂಪರ್‌ಸ್ಟಾರ್ ವಿರಾಟ್ ಕೊಹ್ಲಿ ಮಾತ್ರ ತಂಡದ ಭಾಗವಾಗಿರಲಿಲ್ಲ. ಕೌಟುಂಬಿಕ ತುರ್ತು ಪರಿಸ್ಥಿತಿಯಿಂದಾಗಿ ಕೊಹ್ಲಿ ಮುಂಬೈಗೆ ತೆರಳಲು ತಂಡದ ಮ್ಯಾನೇಜ್‌ಮೆಂಟ್‌ಗೆ ಅನುಮತಿ ಕೋರಿದ್ದಾರೆ. ಬಿಸಿಸಿಐ ಕೂಡ ಅನುಮತಿ ನೀಡಿದೆ ಎಂದು ಹೇಳಲಾಗಿದೆ.

“ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಯ ಮೂಲವೊಂದು, ವಿರಾಟ್ ಕೊಹ್ಲಿ ವೈಯಕ್ತಿಕ ಕಾರಣಗಳಿಗಾಗಿ ಮುಂಬೈಗೆ ತೆರಳಿದ್ದಾರೆ ಎಂದು ಖಚಿತಪಡಿಸಿದೆ. ವಿರಾಟ್ ಶೀಘ್ರದಲ್ಲೇ ತಂಡವನ್ನು ಸೇರಿಕೊಳ್ಳುತ್ತಾರೆ ಎಂದು ಕ್ರಿಕ್‌ಬಜ್ ಪ್ರಕಾರ ತಂಡದ ವಕ್ತಾರರು ವರದಿ ಮಾಡಿದ್ದಾರೆ. ಈ ವರದಿಯ ಪ್ರಕಾರ, ಸೋಮವಾರ ತಿರುವನಂತಪುರದಲ್ಲಿ ಕೊಹ್ಲಿ ತಂಡವನ್ನು ಮತ್ತೆ ಸೇರಿಕೊಳ್ಳುವ ನಿರೀಕ್ಷೆಯಿದೆ. ಅಲ್ಲಿ ಭಾರತವು ಮಂಗಳವಾರ ನೆದರ್ಲೆಂಡ್ಸ್ ವಿರುದ್ಧ ಎರಡನೇ ಮತ್ತು ಅಂತಿಮ ಅಭ್ಯಾಸ ಪಂದ್ಯವನ್ನು ಆಡಲಿದೆ. 

ಗುವಾಹಟಿಯಲ್ಲಿ ಭಾರೀ ಮಳೆಯಿಂದಾಗಿ ಇಂಗ್ಲೆಂಡ್ ವಿರುದ್ಧದ ಭಾರತದ ಮೊದಲ ಅಭ್ಯಾಸ ಪಂದ್ಯ ರದ್ದುಗೊಳಿಸಲಾಗಿತ್ತು. ಅಕ್ಟೋಬರ್ 3 ರಂದು ತಿರುವನಂತಪುರಂನಲ್ಲಿ ನೆದರ್ಲೆಂಡ್ಸ್ ವಿರುದ್ಧ ನಡೆಯಲ್ಲಿರುವ ಎರಡನೇ ಅಭ್ಯಾಸ ಪಂದ್ಯಕ್ಕೂ ಮಳೆ ಭೀತಿ ಎದುರಾಗಿದೆ. ತಿರುವನಂತಪುರಂನಲ್ಲಿ ಕೆಲವು ದಿನಗಳಿಂದ ಮಳೆಯಾಗುತ್ತಿರುವ ಕಾರಣ ಈ ಪಂದ್ಯಕ್ಕೂ ಮಳೆ ಅಡ್ಡಿಪಡಿಸುವ ಸಾಧ್ಯತೆಗಳು ಹೆಚ್ಚಿವೆ. ತಿರುವನಂತಪುರಂ ಮೈದಾನದಲ್ಲಿ ಶುಕ್ರವಾರದಂದು ನಡೆಯಬೇಕಿದ್ದ ದಕ್ಷಿಣ ಆಫ್ರಿಕಾ ಮತ್ತು ಅಫ್ಘಾನಿಸ್ತಾನ ನಡುವಿನ ಪಂದ್ಯ ಕೂಡ ಆರಂಭವಾಗದೆ ರದ್ದಾಗಿದ್ದರೆ, ಆಸ್ಟ್ರೇಲಿಯಾ ಮತ್ತು ನೆದರ್ಲೆಂಡ್ಸ್ ನಡುವಿನ ಪಂದ್ಯವೂ ಹಾಗೆಯೇ ರದ್ದಾಯಿತು.

ಭಾರತ-ನೆದರ್ಲೆಂಡ್ಸ್ ನಡುವಿನ ಅಭ್ಯಾಸ ಪಂದ್ಯವು ಮಧ್ಯಾಹ್ನ 2 ಗಂಟೆಗೆ ಶುರುವಾಗಲಿದೆ. 1:30ಕ್ಕೆ ಟಾಸ್ ಪ್ರಕ್ರಿಯೆ ನಡೆಯಲಿದೆ. ಸ್ಟಾರ್ ಸ್ಪೋರ್ಟ್ಸ್ ಚಾನೆಲ್‌ಗಳಲ್ಲಿ ನೇರ ಪ್ರಸಾರ ವೀಕ್ಷಿಸಬಹುದು. ಹಾಗೆಯೆ ಹಾಟ್‌ಸ್ಟಾರ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲೈವ್ ಸ್ಟ್ರೀಮ್ ಇರಲಿದೆ.
 

Related Stories

No stories found.

Advertisement

X
Kannada Prabha
www.kannadaprabha.com