ಐರ್ಲೆಂಡ್ ವಿರುದ್ಧ ವಿರಾಟ್ ಕೊಹ್ಲಿ ಕಳಪೆ ಪ್ರದರ್ಶನ; ಮತ್ತೊಂದು ಸವಾಲೆಸೆದ ಸುನೀಲ್ ಗವಾಸ್ಕರ್!
ಟಿ20 ವಿಶ್ವಕಪ್ 2024ರ ಆರಂಭಿಕ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಬುಧವಾರ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಐದು ಎಸೆತಗಳಲ್ಲಿ ಕೇವಲ ಒಂದು ರನ್ ಗಳಿಸಿ ಪೆವಿಲಿಯನ್ ಸೇರಿದರು. ಇದು ಪಂದ್ಯಾವಳಿಯ ಇತಿಹಾಸದಲ್ಲಿಯೇ ಅತ್ಯಂತ ಕಳಪೆ ಪ್ರದರ್ಶನ ಎಂಬ ಅಪಖ್ಯಾತಿಗೆ ಗುರಿಯಾಯಿತು. ತಮ್ಮ ಸ್ಟ್ರೈಕ್ ರೇಟ್ ಕಾರಣದಿಂದಾಗಿ ಪದೇ ಪದೆ ಟೀಕೆಗೆ ಗುರಿಯಾಗುವ ವಿರಾಟ್ ಕೊಹ್ಲಿ ಅವರಿಗೆ ಭಾರತದ ದಂತಕಥೆ ಸುನೀಲ್ ಗವಾಸ್ಕರ್ ಮತ್ತೊಂದು ಸವಾಲೆಸೆದಿದ್ದಾರೆ.
ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ವಿಫಲವಾಗಿದ್ದರೂ ಕೂಡ ವಿರಾಟ್ ಕೊಹ್ಲಿ ಅವರಂತಹ ಶ್ರೇಷ್ಠ ಬ್ಯಾಟರ್ಗಳು ಮುಂಬರುವ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಹೆಚ್ಚಿನ ರನ್ ಗಳಿಸಲು ಬಯಸುತ್ತಾರೆ ಮತ್ತು ಐರ್ಲೆಂಡ್ ವಿರುದ್ಧ ಕಳೆದುಕೊಂಡ ಅವಕಾಶವನ್ನು ಆ ಪಂದ್ಯದಲ್ಲಿ ಸರಿದೂಗಿಸುತ್ತಾರೆ ಎಂದಿದ್ದಾರೆ.
'ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿನ ಪ್ರದರ್ಶನವನ್ನು ನಾನು ನೋಡುವ ವಿಧಾನವೆಂದರೆ, ಸ್ಟೀವ್ ಸ್ಮಿತ್, ವಿರಾಟ್ ಕೊಹ್ಲಿ, ಬಾಬರ್ ಅಜಮ್ ಮತ್ತು ಜೋ ರೂಟ್ ಅವರಂತಹ ಶ್ರೇಷ್ಠ ಆಟಗಾರರು ಒಂದು ಪಂದ್ಯದಲ್ಲಿ ವಿಫಲರಾಗಿದ್ದರೂ ಕೂಡ ಅವರು ಮುಂದಿನ ಪಂದ್ಯದಲ್ಲಿ ಅದನ್ನು ಸರಿದೂಗಿಸಲು ಬಯಸುತ್ತಾರೆ. ಮುಂದಿನ ಪಂದ್ಯದಲ್ಲಿ ಅವರು ಡಬಲ್ ರನ್ ಗಳಿಸಲು ಬಯಸುತ್ತಾರೆ. ಆದ್ದರಿಂದ ಅವರು (ವಿರಾಟ್ ಕೊಹ್ಲಿ) ಈಗ ಯಾವುದೇ ರನ್ ಗಳಿಸದಿರಬಹುದು, ಆದರೆ ಮುಂಬರುವ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಉತ್ತಮ ರನ್ ಗಳಿಸಲು ಬಯಸುತ್ತಾರೆ' ಎಂದು ಗವಾಸ್ಕರ್ ಹೇಳಿದ್ದಾರೆ.
ನಾಯಕ ರೋಹಿತ್ ಶರ್ಮಾ ಅವರ ಅರ್ಧಶತಕ, ರಿಷಬ್ ಪಂತ್ ಅವರ ಉತ್ತಮ ಫಿನಿಶಿಂಗ್ ಮತ್ತು ಹಾರ್ದಿಕ್ ಪಾಂಡ್ಯ ಮತ್ತು ಜಸ್ಪ್ರೀತ್ ಬುಮ್ರಾ ಅವರ ಅತ್ಯುತ್ತಮ ಸ್ಪೆಲ್ಗಳಿಂದಾಗಿ ಐರ್ಲೆಂಡ್ ಅನ್ನು ಎಂಟು ವಿಕೆಟ್ಗಳಿಂದ ಸೋಲಿಸುವ ಮೂಲಕ ಭಾರತವು ಐಸಿಸಿ ಟಿ20 ವಿಶ್ವಕಪ್ ಅಭಿಯಾನದಲ್ಲಿ ಗೆಲುವಿನ ಖಾತೆ ತೆರೆದಿದೆ.
13ನೇ ಓವರ್ನ ಎರಡನೇ ಎಸೆತದಲ್ಲಿ ವಿಕೆಟ್ಕೀಪರ್-ಬ್ಯಾಟರ್ ಪಂತ್ ಅವರು ಸಿಕ್ಸರ್ ಸಿಡಿಸುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು. ಈ ಗೆಲುವಿನೊಂದಿಗೆ ಭಾರತ ಟಿ20ಯಲ್ಲಿ ಐರ್ಲೆಂಡ್ ವಿರುದ್ಧ ಎಂಟನೇ ಜಯ ಸಾಧಿಸಿತು. ಅಲ್ಲದೆ, 2009 ರಿಂದ 2018 ರವರೆಗೆ ಬಾಂಗ್ಲಾದೇಶ ವಿರುದ್ಧವೂ ಎಂಟು ಗೆಲುವು ಸಾಧಿಸಿದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ