ಬೆಂಗಳೂರು: ಐಪಿಎಲ್ ಟೂರ್ನಿಯ ನಿನ್ನೆಯ ನಿರ್ಣಾಯಕ ಪಂದ್ಯದಲ್ಲಿ ಚೆನ್ನೈ ವಿರುದ್ಧ ಆರ್ ಸಿಬಿ ಜಯ ಸಾಧಿಸಿದ ಬಳಿಕ ಚೆನ್ನೈ ತಂಡದ ಎಂಎಸ್ ಧೋನಿ ಹಸ್ತಲಾಘವ ಮಾಡದೇ ಡ್ರೆಸಿಂಗ್ ರೂಂಗೆ ವಾಪಸ್ ಆಗಿರುವ ಘಟನೆ ನಡೆದಿದೆ.
ಹೌದು.. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧದ ಪಂದ್ಯವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ 27 ರನ್ಗಳಿಂದ ಗೆದ್ದುಕೊಂಡಿತು. ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿದ್ದ ಈ ಪಂದ್ಯದಲ್ಲಿ ಗೆದ್ದು ಬೀಗುವ ಮೂಲಕ ಆರ್ಸಿಬಿ ಪ್ಲೇಆಫ್ಗೆ ಎಂಟ್ರಿ ಕೊಟ್ಟಿದೆ.
ಈ ಗೆಲುವಿನ ಬಳಿಕ ಸಿಎಸ್ಕೆ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಆರ್ಸಿಬಿ ಆಟಗಾರರೊಂದಿಗೆ ಹಸ್ತಲಾಘವ ಮಾಡದೇ ಪೆವಿಲಿಯನ್ ಗೆ ವಾಪಸ್ ಆಗಿದ್ದಾರೆ ಎಂಬ ವಿಚಾರ ಇದೀಗ ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿದೆ.
ಪಂದ್ಯ ಮುಗಿದ ಬಳಿಕ ಸಿಎಸ್ಕೆ ಆಟಗಾರರು ಹಸ್ತಲಾಘವ ನೀಡಲು ಸರದಿ ಸಾಲಿನಲ್ಲಿ ಸಾಗಿದ್ದರು. ಈ ಸಾಲಿನಲ್ಲಿ ಮಹೇಂದ್ರ ಸಿಂಗ್ ಧೋನಿ ಮುಂಚೂಣಿಯಲ್ಲಿದ್ದರು. ಆದರೆ ಅತ್ತ ರಣರೋಚಕ ಪಂದ್ಯದಲ್ಲಿ ಗೆದ್ದ ಖುಷಿಯಲ್ಲಿದ್ದ ಆರ್ಸಿಬಿ ಆಟಗಾರರು ಸಂಭ್ರಮದಲ್ಲಿ ತೊಡಗಿಸಿಕೊಂಡಿದ್ದರು. ಒಂದಷ್ಟು ಹೊತ್ತು ಕಾದು ನಿಂತ ಧೋನಿ ಆಟಗಾರರು ಸಂಭ್ರಮಾಚರಣೆಯಲ್ಲಿ ತಲ್ಲೀನರಾಗಿರುವುದನ್ನು ನೋಡಿ ಪೆವಿಲಿಯನ್ ಗೆ ವಾಪಸ್ ಆಗಿದ್ದಾರೆ.
ಈ ವೇಳೆ ಎದುರಿಗೆ ಸಿಕ್ಕ ಆರ್ಸಿಬಿ ಸಿಬ್ಬಂದಿಗಳಿಗೆ ಹಸ್ತಲಾಘವ ನೀಡುವ ಮೂಲಕ ಧೋನಿ ಡ್ರೆಸ್ಸಿಂಗ್ ರೂಮ್ಗೆ ಹೋಗಿದ್ದಾರೆ. ಇದೀಗ ಆರ್ಸಿಬಿ ಆಟಗಾರರಿಗೆ ಧೋನಿ ಶೇಕ್ ಹ್ಯಾಂಡ್ ನೀಡದೇ ತೆರಳಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಧೋನಿ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಐದು ಟ್ರೋಫಿ ಗೆದ್ದ ನಾಯಕನಿಗೆ ಒಂದು ತಂಡದ ಸಂಭ್ರಮ ಮುಗಿಯುವವರೆಗೆ ಕಾಯುವ ಸಹನೆಯಿಲ್ಲವೇ ಎಂದು ಅನೇಕರು ಪ್ರಶ್ನಿಸಿದ್ದಾರೆ.
ಚೆನ್ನೈ ಡ್ರೆಸಿಂಗ್ ರೂಂಗೆ ಹುಡುಕಿಕೊಂಡು ತೆರಳಿದ Kohli!
ಅತ್ತ ಧೋನಿ ಡ್ರೆಸಿಂಗ್ ರೂಂಗೆ ತೆರಳುತ್ತಲೇ ಮೈದಾನದಲ್ಲಿದ್ದ ಆರ್ ಸಿಬಿ ಆಟಗಾರ ವಿರಾಟ್ ಕೊಹ್ಲಿ ಸಂಭ್ರಮದ ಬಳಿಕ ಮಹೇಂದ್ರ ಸಿಂಗ್ ಧೋನಿ ಅವರನ್ನು ಹುಡುಕಿದ್ದಾರೆ. ಬಳಿಕ ಧೋನಿ ಎಲ್ಲಿದ್ದಾರೆ ಎಂದು ಚೆನ್ನೈ ಸಿಬ್ಬಂದಿಗಳ ಕೇಳಿದ್ದು ಅವರು ಡ್ರೆಸಿಂಗ್ ರೂನಲ್ಲಿದ್ದ ವಿಚಾರ ತಿಳಿಯುತ್ತಲೇ ಚೆನ್ನೈ ತಂಡದ ಡ್ರೆಸಿಂಗ್ ರೂಂಗೇ ತೆರಳಿ ಮಾತನಾಡಿದ್ದಾರೆ.
ಕೊಹ್ಲಿ ಅವರ ಕ್ರೀಡಾ ಮನೋಭಾವ ಮತ್ತು ಗೌರವದ ಈ ಕಾರ್ಯ ಕ್ರಿಕೆಟ್ ಅಭಿಮಾನಿಗಳ ಮನಗೆದ್ದಿದೆ.
Advertisement