
ನವದೆಹಲಿ: ಐಪಿಎಲ್ ಟೂರ್ನಿಯ ಇಂದಿನ ಮಹತ್ವದ ಪಂದ್ಯದಲ್ಲಿ ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಆರಂಭವಾಗಿರುವ ಪಂದ್ಯದಲ್ಲಿ ಟಾಸ್ ಗೆದ್ದ ಆರ್ ಸಿಬಿ ನಾಯಕ ರಜತ್ ಪಾಟಿದಾರ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು.
ಈ ಹಿಂದೆ ಆರ್ ಸಿಬಿ ಮತ್ತು ಡೆಲ್ಲಿ ಬೆಂಗಳೂರಿನಲ್ಲಿ ಮುಖಾಮುಖಿಯಾಗಿತ್ತು. ಅಂದು ಕೆಎಲ್ ರಾಹುಲ್ ರ ಅಮೋಘ ಬ್ಯಾಟಿಂಗ್ ಪ್ರದರ್ಶನದಿಂದಾಗಿ ಡೆಲ್ಲಿ ಗೆದ್ದು ಬೀಗಿತ್ತು. ಇದೀಗ ದೆಹಲಿ ಆಂಗಣದಲ್ಲಿ ಆರ್ ಸಿಬಿ ಟಾಸ್ ಗೆದ್ದಿದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.
ಆರ್ಸಿಬಿ ಒಂದು ಬದಲಾವಣೆ
ಇನ್ನು ಆರ್ ಸಿಬಿ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ಫಿಲ್ ಸಾಲ್ಟ್ ಬದಲಿಗೆ ಸ್ಫೋಟಕ ಆಟಗಾರ ಜೇಕಬ್ ಬೆಥೆಲ್ ತಂಡ ಸೇರಿಕೊಂಡಿದ್ದಾರೆ. ಈ ಬಗ್ಗೆ ಟಾಸ್ ಬಳಿಕ ಮಾತನಾಡಿದ ಆರ್ ಸಿಬಿ ನಾಯಕ ರಜತ್ ಪಾಟಿದಾರ್, ಪಿಚ್ ಬ್ಯಾಟಿಂಗ್ ಗೆ ಉತ್ತಮವಾಗಿದ್ದು, ರನ್ ಚೇಸಿಂಗ್ ವೇಳೆ ಪಿಚ್ ಬದಲಾಗುತ್ತದೆ ಎಂದು ನನಗೆ ಅನ್ನಿಸುತ್ತಿಲ್ಲ.
ಹೀಗಾಗಿ ಮೊದಲು ಬೌಲಿಂಗ್ ಆಯ್ಕೆ ಮಾಡಿದ್ದೇನೆ. ಹಾಲಿ ಟೂರ್ನಿಯಲ್ಲಿ ತವರಿನಲ್ಲಿ ನಾವು ಮೊದಲ ಜಯ ಕಂಡಿದ್ದು, ಅದನ್ನೇ ಇಲ್ಲಿಯೂ ಮುಂದುವರೆಸಲು ಬಯಸುತ್ತೇವೆ. ಉತ್ತಮ ಕ್ರಿಕೆಟ್ ಆಡುವುದು ನಮ್ಮ ಗುರಿಯಾಗಿದೆ ಎಂದರು.
ಗೆದ್ದವರೇ ನಂಬರ್ 1
ಇನ್ನು ಈ ಪಂದ್ಯ ಉಭಯ ತಂಡಗಳಿಗೂ ಮಹತ್ವದ್ದಾಗಿದ್ದು, ಇಂದು ಗೆದ್ದವರು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲಿದ್ದಾರೆ. ಆರ್ ಸಿಬಿ 9 ಪಂದ್ಯಗಳ ಪೈಕಿ 6 ಗೆಲುವು ಮತ್ತು 3 ಸೋಲಿನೊಂದಿಗೆ 3ನೇ ಸ್ಥಾನದಲ್ಲಿದ್ದು, ಇಂದಿನ ಪಂದ್ಯ ಗೆದ್ದರೆ ತನ್ನ ಅಂಕಗಳನ್ನು 14 ಏರಿಸಿಕೊಂಡು ಅಗ್ರಸ್ಥಾನಕ್ಕೇರಲಿದೆ. ಅಂತೆಯೇ ಡೆಲ್ಲಿ ಕೂಡ 8 ಪಂದ್ಯಗಳಲ್ಲಿ 6 ಗೆಲುವು ಮತ್ತು 3 ಸೋಲಿನೊಂದಿಗೆ 12 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದೆ. ಡೆಲ್ಲಿ ಕೂಡ ಇಂದು ಗೆದ್ದರೆ 14 ಅಂಕಗಳೊಂದಿಗೆ ಅಗ್ರಸ್ಥಾನಕ್ಕೇರಲಿದೆ. ಹೀಗಾಗಿ ಉಭಯ ತಂಡಗಳಿಗೆ ಇಂದಿನ ಪಂದ್ಯ ಮಹತ್ವದ್ದಾಗಿದೆ.
ತಂಡಗಳು ಇಂತಿವೆ
ಡೆಲ್ಲಿ ಕ್ಯಾಪಿಟಲ್ಸ್: ಫಾಫ್ ಡು ಪ್ಲೆಸಿಸ್, ಅಭಿಷೇಕ್ ಪೊರೆಲ್, ಕರುಣ್ ನಾಯರ್, ಕೆಎಲ್ ರಾಹುಲ್(ವಿಕೆಟ್ ಕೀಪರ್), ಅಕ್ಷರ್ ಪಟೇಲ್(ನಾಯಕ), ಟ್ರಿಸ್ಟಾನ್ ಸ್ಟಬ್ಸ್, ವಿಪ್ರಜ್ ನಿಗಮ್, ಮಿಚೆಲ್ ಸ್ಟಾರ್ಕ್, ದುಷ್ಮಂತ ಚಮೀರಾ, ಕುಲದೀಪ್ ಯಾದವ್, ಮುಖೇಶ್ ಕುಮಾರ್
ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ, ಜಾಕೋಬ್ ಬೆಥೆಲ್, ರಜತ್ ಪಾಟಿದಾರ್ (ನಾಯಕ), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ರೊಮಾರಿಯೊ ಶೆಫರ್ಡ್, ಭುವನೇಶ್ವರ್ ಕುಮಾರ್, ಸುಯಾಶ್ ಶರ್ಮಾ, ಜೋಶ್ ಹ್ಯಾಜಲ್ವುಡ್, ಯಶ್ ದಯಾಳ್
Advertisement