

ಫಿಟ್ನೆಸ್, ಫಾರ್ಮ್ ಮತ್ತು ವೃತ್ತಿಜೀವನದ ಭವಿಷ್ಯದ ಬಗ್ಗೆ ದೀರ್ಘಾವಧಿಯ ಸಂದೇಹಗಳು ಮತ್ತು ಚರ್ಚೆಯ ನಂತರ, 35 ವರ್ಷದ ವೇಗದ ಬೌಲರ್ ಮೊಹಮ್ಮದ್ ಶಮಿ ಅವರನ್ನು ಮತ್ತೊಮ್ಮೆ ಆಯ್ಕೆದಾರರು ಪರಿಗಣಿಸುತ್ತಿದ್ದಾರೆ. 2027ರ ಏಕದಿನ ವಿಶ್ವಕಪ್ ಅನ್ನು ಈಗ ಪ್ರಮುಖ ಗುರಿಯಾಗಿ ನೋಡಲಾಗುತ್ತಿದೆ. ಅದರ ಸುತ್ತ ಅವರು ತಂಡಕ್ಕೆ ಮರಳುವ ಸಾಧ್ಯತೆಯನ್ನು ಯೋಜಿಸಲಾಗುತ್ತಿದೆ. ಬಿಸಿಸಿಐ ಮೂಲದೊಂದಿಗೆ ಎನ್ಡಿಟಿವಿ ನಡೆಸಿದ ಸಂಭಾಷಣೆಯ ಪ್ರಕಾರ, ಶಮಿ ಅವರ ದೇಶೀಯ ಪ್ರದರ್ಶನಗಳನ್ನು 'ನಿಕಟವಾಗಿ ಟ್ರ್ಯಾಕ್ ಮಾಡಲಾಗುತ್ತಿದೆ' ಮತ್ತು ಮತ್ತೆ ತಂಡಕ್ಕೆ ಮರಳುವುದು ಇನ್ನು ಮುಂದೆ ದೂರವಲ್ಲ ಎನ್ನಲಾಗಿದೆ.
'ಮೊಹಮ್ಮದ್ ಶಮಿ ಬಗ್ಗೆ ನಿಯಮಿತವಾಗಿ ಚರ್ಚೆಯಾಗುತ್ತಿದೆ. ಅವರು ಲೆಕ್ಕಾಚಾರದಿಂದ ಹೊರಗಿಲ್ಲ. ಅವರ ಫಿಟ್ನೆಸ್ ಬಗ್ಗೆ ಮಾತ್ರ ಕಾಳಜಿ ಇದೆ. ಅವರ ಸಾಮರ್ಥ್ಯದಿಂದ ಅವರು ವಿಕೆಟ್ ಪಡೆಯುವ ಬೌಲರ್ ಆಗಿದ್ದಾರೆ. ಅವರು ಆಯ್ಕೆಗಾರರ ಗಮನದಿಂದ ಹೊರಗಿದ್ದಾರೆ ಎಂದು ಹೇಳುವುದು ತಪ್ಪು. ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಅವರು ಉತ್ತಮವಾಗಿ ಕಾಣುತ್ತಿದ್ದಾರೆ. ಅವರ ಅನುಭವ ಮತ್ತು ಇಚ್ಛೆಯಂತೆ ವಿಕೆಟ್ ಪಡೆಯುವ ಸಾಮರ್ಥ್ಯವನ್ನು ಗಮನಿಸಿದರೆ, ಅವರನ್ನು ಆಯ್ಕೆ ಮಾಡಿದರೆ ಆಶ್ಚರ್ಯಪಡಬೇಡಿ. 2027ರ ವಿಶ್ವಕಪ್ ಕೂಡ ಒಂದು ಸಾಧ್ಯತೆ' ಎಂದು ಮೂಲಗಳು ತಿಳಿಸಿವೆ.
2025ರ ಮಾರ್ಚ್ನಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ನಂತರ ಶಮಿ ಅವರು ಭಾರತದ ಪರ ಆಡಿಲ್ಲ. ಆದರೆ, ಆ ಪಂದ್ಯಾವಳಿಯನ್ನು ಒಂಬತ್ತು ವಿಕೆಟ್ಗಳೊಂದಿಗೆ ಭಾರತದ ಜಂಟಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ಶಮಿ ಹೊರಹೊಮ್ಮಿದರು. ಅವರ ಕೊನೆಯ ಏಕದಿನ ಪಂದ್ಯವು ಆ ಸ್ಪರ್ಧೆಯಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದಿತ್ತು. ಅವರ ಕೊನೆಯ ಟೆಸ್ಟ್ ಪಂದ್ಯವು 2023ರ ಜೂನ್ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಆಗಿತ್ತು.
ಶಮಿ ಅವರು ತಮ್ಮ ಕೊನೆಯ ಆರು ಪಂದ್ಯಗಳಲ್ಲಿ 17 ವಿಕೆಟ್ಗಳನ್ನು (ಮೂರು ವಿಜಯ್ ಹಜಾರೆ ಟ್ರೋಫಿ ಪಂದ್ಯಗಳು ಮತ್ತು ಮೂರು ಸೈಯದ್ ಮುಷ್ತಾಕ್ ಅಲಿ ಟ್ರೋಫಿ) ಕಬಳಿಸಿದ್ದಾರೆ. ರಣಜಿ ಟ್ರೋಫಿಯಲ್ಲಿ, ಅವರು ಈ ಆವೃತ್ತಿಯಲ್ಲಿ ಕೇವಲ ನಾಲ್ಕು ಪಂದ್ಯಗಳಲ್ಲಿ 20 ವಿಕೆಟ್ಗಳನ್ನು ಕಬಳಿಸಿದ್ದಾರೆ.
ಭಾರತದ ಮಾಜಿ ಕ್ರಿಕೆಟಿಗರು ಕೂಡ ಶಮಿ ಅವರನ್ನು ತಂಡದಿಂದ ಹೊರಗಿಡುವುದನ್ನು ಪ್ರಶ್ನಿಸಿದ್ದಾರೆ. ಇತ್ತೀಚಿನ ಏಕದಿನ ತಂಡಗಳಿಂದ ಶಮಿ ಅವರನ್ನು ಕೈಬಿಟ್ಟಿದ್ದಕ್ಕೆ, ವಿಶೇಷವಾಗಿ ಹಿರಿಯ ವೇಗಿಗಳಾದ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಅವರಿಗೆ ವಿಶ್ರಾಂತಿ ನೀಡಿದಾಗ, ಮೊಹಮ್ಮದ್ ಕೈಫ್ ಸಾರ್ವಜನಿಕವಾಗಿ ಆಶ್ಚರ್ಯ ವ್ಯಕ್ತಪಡಿಸಿದ್ದರು. ಭಾರತವು ತನ್ನ ವೇಗದ ವಿಭಾಗದಲ್ಲಿ ಪ್ರಯೋಗ ಮಾಡುತ್ತಿರುವುದರಿಂದ, ಹೆಚ್ಚಿನ ಒತ್ತಡದ ಪಂದ್ಯಾವಳಿಗಳಲ್ಲಿ ಶಮಿ ಅವರನ್ನು ಪರಿಗಣಿಸಬೇಕಿತ್ತು. ಅವರ ಅನುಪಸ್ಥಿತಿಯು ಹೆಚ್ಚು ಎದ್ದು ಕಾಣುತ್ತಿದೆ ಎಂದು ಚರ್ಚೆಯಾಗಿತ್ತು. ಆದರೆ, ಸಮಸ್ಯೆ ಎಂದಿಗೂ ಕೌಶಲ್ಯದ್ದಾಗಿರಲಿಲ್ಲ; ಅದು ಶಮಿ ಅವರ ಫಿಟ್ನೆಸ್ ಆಗಿತ್ತು.
2023ರ ವಿಶ್ವಕಪ್ ನಂತರ ಶಮಿ ಪದೇ ಪದೆ ಗಾಯಗಳಿಂದ ಬಳಲುತ್ತಿದ್ದಾರೆ. ಶಸ್ತ್ರಚಿಕಿತ್ಸೆ ಮತ್ತು ದೀರ್ಘ ಪುನರ್ವಸತಿ ಅವಧಿಗಳಿಗೆ ಒಳಗಾಗಿದ್ದಾರೆ. ಇದು ಅವರ ಲಯ ಮತ್ತು ಲಭ್ಯತೆಯನ್ನು ಅಡ್ಡಿಪಡಿಸಿತು. ಅದನ್ನು ಆಯ್ಕೆದಾರರು ಮುಖ್ಯವಾಗಿ ಪರಿಗಣಿಸಿದ್ದರೂ, ಶಮಿ ರಣಜಿ ಟ್ರೋಫಿಯಲ್ಲಿ ಬಂಗಾಳಕ್ಕೆ ತಮ್ಮ ಲಭ್ಯತೆಯನ್ನು ಸೂಚಿಸುತ್ತಾ, ಆಯ್ಕೆದಾರರಿಗೆ ತಿರುಗೇಟು ನೀಡಿದ್ದರು.
ಈ ವರ್ಷದ ಆರಂಭದಲ್ಲಿ ಭಾರತದ ಆಸ್ಟ್ರೇಲಿಯಾ ಪ್ರವಾಸಕ್ಕೆ ಶಮಿ ಅವರನ್ನು ಕಡೆಗಣಿಸಿದ ನಂತರ ಆಯ್ಕೆ ಸಮಿತಿಯ ವಿರುದ್ಧ ಸಾರ್ವಜನಿಕವಾಗಿಯೇ ಟೀಕಾಪ್ರಹಾರ ನಡೆಸಿದಾಗ ಆ ಉದ್ವಿಗ್ನತೆ ಮತ್ತೆ ಬೆಳಕಿಗೆ ಬಂದಿತು. ದೇಶೀಯ ಕ್ರಿಕೆಟ್ ಆಡುತ್ತಿರುವಾಗಲೂ, ತಮ್ಮ ಫಿಟ್ನೆಸ್ ಬಗ್ಗೆ ಆಯ್ಕೆದಾರರಿಗೆ ಮಾಹಿತಿ ನೀಡುವುದು ತಮ್ಮ ಜವಾಬ್ದಾರಿಯಲ್ಲ ಎಂದು ಅವರು ವಾದಿಸಿದರು.
Advertisement