
ನ್ಯೂಜಿಲೆಂಡ್ ವಿರುದ್ಧ ವೈಟ್ವಾಷ್ ಮುಖಭಂಗ ಮತ್ತು ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿ ಸೋಲಿನ ಬಳಿಕ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರ ನಾಯಕತ್ವ ಸೇರಿದಂತೆ ಅವರ ಟೆಸ್ಟ್ ಕ್ರಿಕೆಟ್ ಭವಿಷ್ಯದ ಸುತ್ತಲೂ ಹಲವು ಮಾತುಗಳು ಕೇಳಿಬರುತ್ತಿವೆ. ಈ ಬೆನ್ನಲ್ಲೇ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ರೋಹಿತ್ ಶರ್ಮಾ ಬೆಂಬಲಕ್ಕೆ ನಿಂತಿದ್ದಾರೆ.
2024ರ ಟಿ20 ವಿಶ್ವಕಪ್ನಿಂದ ಭಾರತದ ಕಳಪೆ ಪ್ರದರ್ಶನದ ಆಧಾರದ ಮೇಲೆ ರೋಹಿತ್ ಶರ್ಮಾ ಅವರನ್ನು ನಾಯಕ ಸ್ಥಾನದಿಂದ ಕೆಳಗಿಳಿಸಬೇಕು ಎಂಬುದನ್ನು ತೀರ್ಮಾನಿಸಲು ಸಾಧ್ಯವಿಲ್ಲ. ಈ ಮೂಲಕ ಅವರ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡುವುದು ಅನ್ಯಾಯ ಎಂದು ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಹೇಳಿದ್ದಾರೆ. ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಭಾರತವು ಆಸ್ಟ್ರೇಲಿಯಾ ವಿರುದ್ಧ 3-1 ಅಂತರದ ಸೋಲು ಕಂಡಿದ್ದು, ಭಾರತದ ಮುಖ್ಯ ಕೋಚ್ ಗೌತಮ್ ಗಂಭೀರ್ ಕೂಡ ಟೀಕೆಗೆ ಗುರಿಯಾಗಿದ್ದಾರೆ. ಇದೀಗ 43 ವರ್ಷದ ಯುವಿ ತಮ್ಮ ಮಾಜಿ ಸಹ ಆಟಗಾರ ಮತ್ತು ಗಂಭೀರ್ ಅವರನ್ನು ಸಮರ್ಥಿಸಿಕೊಂಡಿದ್ದಾರೆ.
'ನಾನು ಯಾವಾಗಲೂ ಐದು ವರ್ಷ ಅಥವಾ ಮೂರು ವರ್ಷಗಳ ಅವಧಿಯಲ್ಲಿ ತಂಡದ ಗ್ರಾಫ್ ಅನ್ನು ನೋಡುತ್ತೇನೆ. ಗೌತಮ್ ಗಂಭೀರ್ ಅವರು ಈಗಷ್ಟೇ ತಂಡದ ಮುಖ್ಯ ಕೋಚ್ ಆಗಿ ಆಯ್ಕೆಯಾಗಿದ್ದಾರೆ. ಅವರಿಗೆ ಹೆಚ್ಚಿನ ಸಮಯ ಬೇಕಾಗಿದೆ. ರೋಹಿತ್ ಶರ್ಮಾ ನಾಯಕನಾಗಿ T20 ವಿಶ್ವಕಪ್ ಗೆದ್ದಿದ್ದಾರೆ, ಭಾರತ ODI ಆಡಿದಾಗಲೂ ಅವರು ನಾಯಕರಾಗಿದ್ದರು. ಅವರು ಎಂಐ (ಮುಂಬೈ ಇಂಡಿಯನ್ಸ್) ತಂಡವನ್ನು ಐದು ಐಪಿಎಲ್ ಪ್ರಶಸ್ತಿ ಪಡೆಯಲು ಮುನ್ನಡೆಸಿದರು' ಎಂದು ಯುವರಾಜ್ ಕಾರ್ಯಕ್ರಮವೊಂದರಲ್ಲಿ ಹೇಳಿದರು.
ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಕಡಿಮೆ ರನ್ ಗಳಿಸಿದ್ದ ರೋಹಿತ್ ಶರ್ಮಾ ಅವರು ಕೊನೆಯ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದರು. 'ಆ ವ್ಯಕ್ತಿ ಕಳೆದ ಪಂದ್ಯದಿಂದ ಕೆಳಗಿಳಿದಿದ್ದರು ಮತ್ತು ಬೇರೆಯವರಿಗೆ ಅವಕಾಶ ನೀಡಿದ್ದಾರೆ. ಈ ಹಿಂದೆ ಎಷ್ಟು ನಾಯಕರು ಇದನ್ನು ಮಾಡಿದ್ದಾರೆ? ದಯವಿಟ್ಟು ಹೇಳಿ' ಎಂದು ಅವರು ಪ್ರಶ್ನಿಸಿದರು.
ಆಸ್ಟ್ರೇಲಿಯಾ ವಿರುದ್ಧದ ಸೋಲಿಗಿಂತ ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ 3-0 ಅಂತರದ ಸೋಲು ಆಘಾತಕಾರಿ ಫಲಿತಾಂಶವಾಗಿದೆ. ಅದನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಭಾರತವು ಬಿಜಿಟಿ ಸರಣಿಯನ್ನು ಕಳೆದುಕೊಂಡಿತು. ಆದರೆ, ಮೆಲ್ಬೋರ್ನ್ ಟೆಸ್ಟ್ನಲ್ಲಿ ಸ್ಮರಣೀಯ ಶತಕ ಸಿಡಿಸಿದ ಯಶಸ್ವಿ ಜೈಸ್ವಾಲ್ ಮತ್ತು ನಿತೀಶ್ ರೆಡ್ಡಿ ಅವರಿಂದ ಉತ್ತಮ ಪ್ರದರ್ಶನಗಳು ಬಂದವು ಎಂದಿದ್ದಾರೆ.
'ನಿತೀಶ್ ತಮ್ಮ ಮೊದಲ ವಿದೇಶಿ ಪ್ರವಾಸದಲ್ಲಿ ಶತಕ ಗಳಿಸಿದರು, ಇದು ಅದ್ಭುತವಾಗಿದೆ. ಎಷ್ಟು ಮಂದಿ ಉತ್ತಮ ಪ್ರದರ್ಶನ ನೀಡಿದ್ದಾರೆ ಎಂಬುದು ಖಚಿತವಾಗಿಲ್ಲ. ಆಸ್ಟ್ರೇಲಿಯಾದಲ್ಲಿ ಅವರ ಮೊದಲ ಟೆಸ್ಟ್ನಲ್ಲಿ ಜೈಸ್ವಾಲ್ 150 ಪ್ಲಸ್ ರನ್ ಗಳಿಸಿದ್ದಾರೆ, ಇದು ಅತ್ಯಂತ ಶ್ಲಾಘನೀಯ. ನಾವು ಈ ಪ್ರದರ್ಶನಗಳ ಬಗ್ಗೆ ಹೆಚ್ಚು ಮಾತನಾಡಬೇಕು' ಎಂದು ಯುವರಾಜ್ ಹೇಳಿದ್ದಾರೆ.
Advertisement