
ಬೆಂಗಳೂರು: ಹಾಲಿ ಐಪಿಎಲ್ ಟೂರ್ನಿಯ ನಿನ್ನೆಯ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ 2 ರನ್ ಗಳ ವಿರೋಚಿತ ಗೆಲುವು ಸಾಧಿಸಿದ RCB ಈ ಬಾರಿ ಟ್ರೋಫಿ ಗೆಲ್ಲುವ ಶಪಥ ಮಾಡಿದೆ.
ಹೌದು.. ನಿನ್ನೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 2 ರನ್ ಗಳ ವಿರೋಚಿತ ಗೆಲುವು ಸಾಧಿಸಿತು.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ ನಿಗಧಿತ 20 ಓವರ್ ನಲ್ಲಿ ಜೇಕಬ್ ಬೆಥೆಲ್ (55 ರನ್), ವಿರಾಟ್ ಕೊಹ್ಲಿ (62 ರನ್) ಮತ್ತು ರೊಮಾರಿಯೋ ಶೆಫರ್ಡ್ (ಅಜೇಯ 53 ರನ್) ಅರ್ಧಶತಕಗಳ ನೆರವಿನಿಂದ 213 ರನ್ ಗಳ ಬೃಹತ್ ಮೊತ್ತ ಪೇರಿಸಿತು.
ಈ ಗುರಿಯನ್ನು ಬೆನ್ನುಹತ್ತಿದ ಚೆನ್ನೈ ಸೂಪರ್ ಕಿಂಗ್ಸ್ ಆಯುಶ್ ಮ್ಹಾತ್ರೆ (94 ರನ್), ರವೀಂದ್ರ ಜಡೇಜಾ (77 ರನ್) ಭರ್ಜರಿ ಬ್ಯಾಟಿಗ್ ಹೊರತಾಗಿಯೂ ನಿಗಧಿತ 20 ಓವರ್ ನಲ್ಲಿ 5 ನವಿಕೆಟ್ ನಷ್ಟಕ್ಕೆ 211 ರನ್ ಗಳಿಸಿ ಕೇವಲ 2 ರನ್ ಗಳ ಅಂತರದಲ್ಲಿ ವಿರೋಚಿತ ಗೆಲುವು ಸಾಧಿಸಿತು.
ಈ ಪಂದ್ಯದ ಗೆಲುವಿನೊಂದಿಗೆ ಆರ್ ಸಿಬಿ ತನ್ನ ಅಂಕಗಳಿಕೆಯನ್ನು 16ಕ್ಕೆ ಏರಿಸಿಕೊಂಡಿದ್ದು, ಆ ಮೂಲಕ ಪ್ಲೇಆಫ್ ನಲ್ಲಿ ಬಹುತೇಕ ತನ್ನ ಸ್ಥಾನ ಖಚಿತಪಡಿಸಿಕೊಂಡಿದೆ.
ಚಿನ್ನಸ್ವಾಮಿ ಹೊರಗೆ ಅಭಿಮಾನಿಗಳ ಸಾಗರ, ಅಚ್ಚರಿಯಾದ ಆಟಗಾರರು
ಇನ್ನು ಸಿಎಸ್ ಕೆ ವಿರುದ್ಧ ಗೆಲುವಿನ ಬಳಿಕ ಚಿನ್ನಸ್ವಾಮಿ ಕ್ರೀಡಾಂಗಣದಿಂದ ಆರ್ ಸಿಬಿ ಆಟಗಾರರು ಹೊಟೆಲ್ ಗೆ ವಾಪಸ್ ಆಗುವ ವೇಳೆ ಮಾರ್ಗಮಧ್ಯೆ ಆರ್ ಸಿಬಿ ಅಭಿಮಾನಿಗಳ ಜನಸಾಗರವೇ ನೆರೆದಿತ್ತು. ರಸ್ತೆಯ ಎರಡೂ ಬದಿಗಳಲ್ಲಿ ಸಾವಿರಾರು ಅಭಿಮಾನಿಗಳು ಕಿಕ್ಕಿರಿದು ತುಂಬಿದ್ದರು. ಆರ್ ಸಿಬಿ ಆಟಗಾರರು ಚಿನ್ನಸ್ವಾಮಿ ಕ್ರೀಡಾಂಗಣದ ಗೇಟ್ ನಿಂದ ಹೊರ ಬರುತ್ತಲೇ ಅಭಿಮಾನಿಗಳು RCB.. RCB.. ಎಂದು ಕೂಗಿದರು. ಈ ವೇಳೆ ಅಪಾರ ಪ್ರಮಾಣದ ಅಭಿಮಾನಿಗಳ ಕಂಡ ಆರ್ ಸಿಬಿ ಆಟಗಾರರು ಪುಳಕಿತರಾದರು.
ಕೃನಾಲ್ ಪಾಂಡ್ಯ ಶಪಥ
ಇನ್ನು ಇದೇ ವೇಳೆ ಅಭಿಮಾನಿಗಳ ನೋಡಿ ಖುಷಿಗೊಂಡ ಆರ್ ಸಿಬಿ ಆಲ್ರೌಂಡರ್ ಕೃನಾಲ್ ಪಾಂಡ್ಯ.. ಸಹ ಆಟಗಾರರನ್ನು ಉದ್ದೇಶಿಸಿ 'ಈಗಾಗಲೇ ಮಧ್ಯರಾತ್ರಿ 1 ಗಂಟೆಯಾಗಿದೆ. ಇನ್ನೂ ಎಷ್ಟೊಂದು ಜನ ಇದ್ದಾರೆ. ಎಂತಹ ಅಭಿಮಾನ ಇದು.. ನಿಜಕ್ಕೂ ಇಂತಹ ಅಭಿಮಾನ ಪಡೆದ ನಾವೇ ಅದೃಷ್ಟವಂತರು. ಇವರಿಗಾಗಿ ನಾವು ಟ್ರೋಫಿ ಗೆಲ್ಲಲೇಬೇಕು.. ಸುಮ್ಮನೆ ಊಹಿಸಿಕೊಳ್ಳಿ ಒಂದು ಪಂದ್ಯ ಗೆದ್ದಿದ್ದಕ್ಕೇ ಹೀಗಾದರೆ ಇನ್ನು ಟ್ರೋಫಿ ಗೆದ್ದರೆ ಏನಾಗಬಹುದು' ಎಂದು ಹೇಳಿದರು. ಈ ವಿಡಿಯೋವನ್ನು ಆರ್ ಸಿಬಿ ಎಕ್ಸ್ ನಲ್ಲಿ ಹಂಚಿಕೊಂಡಿದ್ದು ಈ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
Advertisement