

ಮಂಗಳವಾರ ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು 32 ರನ್ಗಳಿಂದ ಸೋಲಿಸಿ, ಮುಖ್ಯ ಕೋಚ್ ಅಭಿಷೇಕ್ ನಾಯರ್ ಅವರ ಕಳಪೆ ಯೋಜನೆ ಮತ್ತು ನಾಯಕ ಅಜಿಂಕ್ಯ ರಹಾನೆ ಅವರ ಪ್ರಾಚೀನ ವಿಧಾನವನ್ನು ಬಹಿರಂಗಪಡಿಸಿತು. ಪವರ್ಪ್ಲೇನಲ್ಲಿ 72 ರನ್ಗಳನ್ನು ಗಳಿಸಿದ ನಂತರ ಸಿಎಸ್ಕೆ ತಂಡವು ಅಂತಿಮವಾಗಿ ಐದು ವಿಕೆಟ್ ನಷ್ಟಕ್ಕೆ 192 ರನ್ಗಳನ್ನು ಕಲೆಹಾಕಿತು. ಈ ಗುರಿ ಬೆನ್ನತ್ತಿದ ಕೆಕೆಆರ್ ತಂಡವು ನಿಗದಿತ 20 ಓವರ್ಗಳಲ್ಲಿ ಏಳು ವಿಕೆಟ್ ಕಳೆದುಕೊಂಡು ಕೇವಲ 160 ರನ್ ಗಳಿಸಲು ಮಾತ್ರ ಸಾಧ್ಯವಾಯಿತು. ಈ ಮೂಲಕ ಟೂರ್ನಿಯಲ್ಲಿ ಸತತ ಐದನೇ ಸೋಲು ಕಂಡಿತು.
ಸ್ಪಿನ್ನರ್ ನೂರ್ ಅಹ್ಮದ್ (ನಾಲ್ಕು ಓವರ್ಗಳಲ್ಲಿ 3/21) ಕೆಕೆಆರ್ನ ಮಧ್ಯಮ ಕ್ರಮಾಂಕವನ್ನು ತರಾಟೆಗೆ ತೆಗೆದುಕೊಂಡರು. ಕೆಕೆಆರ್ನ ಯಾವೊಬ್ಬ ಬ್ಯಾಟರ್ ಸಿಎಸ್ಕೆ ಬೌಲಿಂಗ್ ದಾಳಿಯನ್ನು ಎದುರಿಸಿ ನಿಲ್ಲಲು ಸಾಧ್ಯವಾಗಲಿಲ್ಲ. ಈ ಬೆನ್ನಲ್ಲೇ ಸಿಎಸ್ಕೆ ಆರಾಮದಾಯಕ ಗೆಲುವು ಸಾಧಿಸಿತು.
ನೂರ್ ಅಹ್ಮದ್ ಅವರು ಅಜಿಂಕ್ಯ ರಹಾನೆ, ರಿಂಕು ಸಿಂಗ್ (6) ಮತ್ತು ಕ್ಯಾಮರೂನ್ ಗ್ರೀನ್ (0) ಅವರನ್ನು ಔಟ್ ಮಾಡುವ ಮೂಲಕ ಉತ್ತಮ ಪ್ರದರ್ಶನ ನೀಡಿದರು. 79 ರನ್ಗಳಿಸಿದ್ದಾಗ 2 ವಿಕೆಟ್ ಕಳೆದುಕೊಂಡಿದ್ದ ಕೆಕೆಆರ್, 90 ರನ್ ಕಲೆಹಾಕುವ ವೇಳೆಗೆ ಆರು ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಎಡಗೈ ಸ್ಪಿನ್ನರ್ ಅಕೇಲ್ ಹೊಸೈನ್ (ನಾಲ್ಕು ಓವರ್ಗಳಲ್ಲಿ 1/26) ಸಹ ಉತ್ತಮವಾಗಿ ಬೌಲಿಂಗ್ ಮಾಡಿದರು ಮತ್ತು ಎದುರಾಳಿ ಬ್ಯಾಟರ್ಗಳನ್ನು ನಿಯಂತ್ರಣದಲ್ಲಿಟ್ಟುಕೊಂಡರು.
ಶಾರುಖ್ ಖಾನ್ ಒಡೆತನದ ಕೆಕೆಆರ್ ತಂಡವು ಈ ಆವೃತ್ತಿಯಲ್ಲಿ ಈವರೆಗೂ ಒಂದೇ ಒಂದು ಗೆಲುವು ಕಂಡಿಲ್ಲ. ತಾನು ಆಡಿರುವ ಐದಕ್ಕೆ ಐದು ಪಂದ್ಯಗಳನ್ನು ಸೋತು ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಕೆಕೆಆರ್ನ ಹೀನಾಯ ಪ್ರದರ್ಶನದ ಹೆಚ್ಚಿನ ಜವಾಬ್ದಾರಿ ಕೋಚ್ ಅಭಿಷೇಕ್ ನಾಯರ್ ಅವರ ಮೇಲಿದೆ.
ಈಮಧ್ಯೆ, ರುತುರಾಜ್ ಗಾಯಕ್ವಾಡ್ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ಆಡಿರುವ ಐದು ಪಂದ್ಯಗಳಲ್ಲಿ ಸತತ ಎರಡು ಗೆಲುವಿನೊಂದಿಗೆ ಮತ್ತೆ ಹಾದಿಗೆ ಮರಳಿದೆ.
ಐಪಿಎಲ್ 2026ರ ಅಂಕಪಟ್ಟಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಆಡಿರುವ 5 ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆಲುವು ಸಾಧಿಸುವ ಮೂಲಕ 8 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ಶ್ರೇಯಸ್ ಅಯ್ಯರ್ ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡ 7 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೂರು ಮತ್ತು ಸನ್ರೈಸರ್ಸ್ ಹೈದರಾಬಾದ್ ತಂಡ ನಾಲ್ಕನೇ ಸ್ಥಾನದಲ್ಲಿವೆ.
ಕೆಕೆಆರ್ ವಿರುದ್ಧದ ಗೆಲುವಿನೊಂದಿ ಸಿಎಸ್ಕೆ ತಂಡವು ಮುಂಬೈ ಇಂಡಿಯನ್ಸ್ ತಂಡಕ್ಕಿಂತ ಒಂದು ಸ್ಥಾನ ಮೇಲೇರಿದೆ. ಮುಂಬೈ ಇಂಡಿಯನ್ಸ್ ತಂಡವು ಆಡಿರುವ ನಾಲ್ಕು ಪಂದ್ಯಗಳಲ್ಲಿ ಕೇವಲ ಒಂದರಲ್ಲಿ ಗೆಲುವು ಸಾಧಿಸಿ ಒಂಬತ್ತನೇ ಸ್ಥಾನದಲ್ಲಿದ್ದರೆ, ಕೆಕೆಆರ್ ಪಟ್ಟಿಯ ಕೊನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
Advertisement