

ಇಂಗ್ಲೆಂಡ್ vs ಭಾರತ 3ನೇ ಟಿ20ಐ ಪಂದ್ಯಕ್ಕೂ ಮುನ್ನ ಸೋಮವಾರ ನೆಟ್ಸ್ನಲ್ಲಿ ಬ್ಯಾಟಿಂಗ್ ಮಾಡುವಾಗ ಭಾರತ ಕ್ರಿಕೆಟ್ ತಂಡದ ತಾರೆ ವೈಭವ್ ಸೂರ್ಯವಂಶಿ ಗಾಯದ ಭೀತಿ ಎದುರಿಸಿದ್ದಾರೆ. 15 ವರ್ಷದ ಆಟಗಾರ ಎರಡನೇ ಟಿ20ಐನಲ್ಲಿ ಬಹುನಿರೀಕ್ಷಿತ ಚೊಚ್ಚಲ ಪಂದ್ಯವನ್ನು ಆಡಿದರು ಮತ್ತು ಸೀನಿಯರ್ ತಂಡದಲ್ಲಿ ಭಾರತ ಪರ ಆಡಿದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡರು. ನೆಟ್ಸ್ನಲ್ಲಿ ಬ್ಯಾಟಿಂಗ್ ಮಾಡುವಾಗ ಚೆಂಡು ಅವರಿಗೆ ತಗುಲಿದ್ದು, ಕೊಂಡ ಸುಧಾರಿಸಿಕೊಂಡ ನಂತರ ಮತ್ತೆ ತಮ್ಮ ಅಭ್ಯಾಸವನ್ನು ಪೂರ್ಣಗೊಳಿಸಿದ್ದಾರೆ.
ವೈಭವ್ ಸೂರ್ಯವಂಶಿ ಎದೆಗೆ ಬಡಿದ ಚೆಂಡು
ನಾಟಿಂಗ್ಹ್ಯಾಮ್ನಲ್ಲಿ ನಡೆದ ನೆಟ್ಸ್ ಸೆಷನ್ನಲ್ಲಿ ತಜ್ಞ ರಘು ಅವರ ಥ್ರೋಡೌನ್ಗಳನ್ನು ಎದುರಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. 15 ವರ್ಷದ ವೈಭವ್ ಸೂರ್ಯವಂಶಿ ಪುಲ್-ಶಾಟ್ ಹೊಡೆಯಲು ಪ್ರಯತ್ನಿಸಿದಾಗ ಚೆಂಡು ಅವರ ಎದೆಗೆ ಬಡಿದಿದೆ. ಬಳಿಕ ಅಲ್ಲೇ ಕೆಲಕಾಲ ಕುಳಿತುಕೊಂಡ ವೈಭವ್, ಅಲ್ಲಿಂದ ಹೊರಟು ಟೀಂ ಇಂಡಿಯಾದ ವೈದ್ಯಕೀಯ ತಂಡದಿಂದ ಚಿಕಿತ್ಸೆ ಪಡೆದಿದ್ದಾರೆ. ಸ್ಟ್ರೆಂತ್ ಮತ್ತು ಕಂಡೀಷನಿಂಗ್ ತರಬೇತುದಾರ ಆಡ್ರಿಯನ್ ಲೆ ರೂಕ್ಸ್ ಅವರೊಂದಿಗೆ ಮಾತನಾಡಿದ ನಂತರ ತಮ್ಮ ಸೆಷನ್ ಅನ್ನು ಪೂರ್ಣಗೊಳಿಸಲು ನೆಟ್ಸ್ಗೆ ಮರಳಿದ್ದಾರೆ.
ಐರ್ಲೆಂಡ್ ವಿರುದ್ಧದ ಎರಡು ಪಂದ್ಯಗಳ ಸರಣಿಯಲ್ಲಿ ಮತ್ತು ಇಂಗ್ಲೆಂಡ್ ವಿರುದ್ಧದ ಮೊದಲ ಟಿ20ಐನಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯಲು ವಿಫಲವಾದ ನಂತರ, ಸೂರ್ಯವಂಶಿಗೆ ಮ್ಯಾಂಚೆಸ್ಟರ್ನಲ್ಲಿ ನಡೆದ ಇಂಗ್ಲೆಂಡ್ vs ಭಾರತದ ಎರಡನೇ ಟಿ20ಐನಲ್ಲಿ ಅವಕಾಶ ನೀಡಲಾಯಿತು. ಫಾರ್ಮ್ನಲ್ಲಿಲ್ಲದ ಸಂಜು ಸ್ಯಾಮ್ಸನ್ ಬದಲಿಗೆ ಪ್ಲೇಯಿಂಗ್ ಇಲೆವೆನ್ನಲ್ಲಿ ವೈಭವ್ ಸ್ಥಾನ ಪಡೆದರು. ವೈಭವ್ ತಮ್ಮ ಚೊಚ್ಚಲ ಪಂದ್ಯದಲ್ಲಿ ಕೇವಲ 14 ರನ್ ಗಳಿಸಿ ಸ್ಟಂಪೌಟ್ ಆದರು. ಇದರಲ್ಲಿ ಎರಡು ಸಿಕ್ಸರ್ಗಳು (ಜೋಫ್ರಾ ಆರ್ಚರ್ ಮತ್ತು ಜೋಶ್ ಟಂಗ್ ವಿರುದ್ಧ ತಲಾ ಒಂದು) ಸೇರಿವೆ. ಮೆನ್ ಇನ್ ಬ್ಲೂ ಪರ ತಮ್ಮ ಚೊಚ್ಚಲ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿದ ಹೊರತಾಗಿಯೂ, ಸೂರ್ಯವಂಶಿಗೆ ಭವಿಷ್ಯದಲ್ಲಿ ಹೆಚ್ಚಿನ ಅವಕಾಶಗಳು ಸಿಗುವ ನಿರೀಕ್ಷೆಯಿದೆ.
ವೈಭವ್ ಸೂರ್ಯವಂಶಿ ಕಳೆದ ಎರಡು ವರ್ಷಗಳಿಂದ ಅದ್ಭುತ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ತಮ್ಮ ಚೊಚ್ಚಲ ಐಪಿಎಲ್ ಸೀಸನ್ನಲ್ಲಿ ಎಲ್ಲರ ಗಮನ ಸೆಳೆದಿದ್ದರು. ಭಾರತ U19 ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ ನಂತರ, ಸೂರ್ಯವಂಶಿ ಬ್ಯಾಟಿಂಗ್ನಲ್ಲಿ ಪ್ರಾಬಲ್ಯ ಸಾಧಿಸುತ್ತಲೇ ಇದ್ದರು. 2026ರ ಐಪಿಎಲ್ನಲ್ಲಿ 237.30ರ ಸ್ಟ್ರೈಕ್ ರೇಟ್ನಲ್ಲಿ 776 ರನ್ ಗಳಿಸಿದ್ದಾರೆ. ಇದು ಅವರನ್ನು ಆರೆಂಜ್ ಕ್ಯಾಪ್ ವಿಜೇತರನ್ನಾಗಿ ಮಾತ್ರವಲ್ಲದೆ, ಅತಿ ಹೆಚ್ಚು ಸಿಕ್ಸರ್ಗಳನ್ನು ಹೊಡೆದ ಪ್ರಶಸ್ತಿ, ಅತ್ಯಮೂಲ್ಯ ಆಟಗಾರ, ಆವೃತ್ತಿಯ ಉದಯೋನ್ಮುಖ ಆಟಗಾರ ಮತ್ತು 2026ರ ಐಪಿಎಲ್ನ ಸೂಪರ್ ಸ್ಟ್ರೈಕರ್ ಪ್ರಶಸ್ತಿಗಳನ್ನೂ ಗಳಿಸಿದರು.