

ನವದೆಹಲಿ: ಭಾರತ ತಂಡಕ್ಕೆ ಅಫ್ಘಾನಿಸ್ತಾನ ವಿರುದ್ಧ ಇನ್ನೂ ಎರಡು ಏಕದಿನ ಪಂದ್ಯಗಳು ಬಾಕಿಯಿದ್ದರೂ, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯ ಭವಿಷ್ಯದ ಬಗ್ಗೆ ಚರ್ಚೆಗಳು ನಿಲ್ಲುತ್ತಿಲ್ಲ.
ಹೌದು.. 2027ರ ಏಕದಿನ ವಿಶ್ವಕಪ್ ಟೂರ್ನಿಗೆ ತಂಡವನ್ನು ಸಿದ್ಧಪಡಿಸುತ್ತಿರುವ ಬಿಸಿಸಿಐಗೆ ತಂಡದ ಹಿರಿಯ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಆಯ್ಕೆ ವಿಚಾರ ಕಬ್ಬಿಣದ ಕಡಲೆಯಾಗಿ ಮಾರ್ಪಟ್ಟಿದೆ.
ವಯಸ್ಸಿನ ಕಾರಣ ನೀಡಿ ತಂಡಕ್ಕೆ ಉದಯೋನ್ಮುಖ ಆಟಗಾರರನ್ನು ಆಯ್ಕೆ ಮಾಡಲು ಸಾಧ್ಯವೇ ಇಲ್ಲ. ಕಾರಣ ಇಬ್ಬರೂ ಸ್ಟಾರ್ ಆಟಗಾರರು ಪ್ರಸ್ತುತ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಏತನ್ಮಧ್ಯೆ ಕಿರಿಯ ಆಟಗಾರರ ನಡುವೆಯೂ ತಂಡದ ಆಯ್ಕೆಗಾಗಿ ತೀವ್ರ ಪೈಪೋಟಿ ನಡೆಯುತ್ತಿದೆ.
ಇವೆಲ್ಲದರ ನಡುವೆ ಬಿಹಾರ ಮೂಲದ ಕಿರಿಯ ವೈಭವ್ ಸೂರ್ಯವಂಶಿ ಕುರಿತ ಚರ್ಚೆಗಳೂ ಕೂಡ ವ್ಯಾಪಕವಾಗಿ ಕೇಳಿಬರುತ್ತಿದೆ. ವೈಭವ್ ನಂತಹ ಆಟಗಾರರಿಗೆ ಜಾಗ ಮಾಡಿಕೊಡಲು ಬಿಸಿಸಿಐ ಕೆಲ ಕಠಿಣ ನಿರ್ಧಾರಗಳನ್ನು ತಳೆಯಲೇ ಬೇಕು ಎನ್ನುವ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಈ ಪಟ್ಟಿಗೆ ಇದೀಗ ಇಂಗ್ಲೆಂಡ್ ಮಾಜಿ ಸ್ಪಿನ್ನರ್ ಗ್ರೇಮ್ ಸ್ವಾನ್ ಸೇರ್ಪಡೆಯಾಗಿದ್ದಾರೆ.
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾಗೆ ವೈಭವ್ ಸೂರ್ಯವಂಶಿಯಿಂದಲೇ ಕಂಟಕ
ಇಂಗ್ಲೆಂಡ್ನ ಮಾಜಿ ಸ್ಪಿನ್ನರ್ ಗ್ರೇಮ್ ಸ್ವಾನ್ ಅವರ ಅಭಿಪ್ರಾಯದಲ್ಲಿ, ವೃತ್ತಿಜೀವನದ ಅಂತಿಮ ಹಂತದಲ್ಲಿರುವ ಯಾವುದೇ ಮಹಾನ್ ಆಟಗಾರನಿಗೂ ಇಂತಹ ಪ್ರಶ್ನೆಗಳು ಸಹಜ. ಅವರ ನಂತರ ಯಾರು ಬರುತ್ತಾರೆ ಎಂಬ ಕುತೂಹಲ ಯಾವಾಗಲೂ ಇರುತ್ತದೆ ಎಂದು ಅವರು ಹೇಳಿದ್ದಾರೆ.
ಜುಲೈನಲ್ಲಿ ಭಾರತ ತಂಡ ಮೂರು ಪಂದ್ಯಗಳ ಏಕದಿನ ಸರಣಿಗಾಗಿ ಇಂಗ್ಲೆಂಡ್ಗೆ ಪ್ರವಾಸ ಕೈಗೊಳ್ಳಲಿದ್ದು, ಹೊಸ ತಲೆಮಾರಿನ ಆಟಗಾರರು ಹೊರಹೊಮ್ಮುತ್ತಿರುವುದರಿಂದ ರೋಹಿತ್ ಮತ್ತು ಕೊಹ್ಲಿ ಮೇಲಿನ ಗಮನ ಹೆಚ್ಚಾಗಿರುವುದು ಸಹಜ. ಖಂಡಿತವಾಗಿಯೂ. ಯಾವುದೇ ಆಟಗಾರ ತನ್ನ ವೃತ್ತಿಜೀವನದ ಎರಡನೇ ಭಾಗಕ್ಕೆ ಬಂದಾಗ, ಜನರು ಸಹಜವಾಗಿಯೇ ಅವರ ಉತ್ತರಾಧಿಕಾರಿಯನ್ನು ಹುಡುಕಲು ಆರಂಭಿಸುತ್ತಾರೆ. ನೀವು ಎಷ್ಟೇ ಚೆನ್ನಾಗಿ ಆಡಿದರೂ ಇದು ನಡೆಯುತ್ತದೆ" ಎಂದು ಸ್ವಾನ್ ಹೇಳಿದ್ದಾರೆ.
"ನೀವು ಇನ್ನೂ ಶ್ರೇಷ್ಠ ಫಾರ್ಮ್ನಲ್ಲಿದ್ದರೂ, 'ಮುಂದಿನ ವಿರಾಟ್ ಯಾರು? ಮುಂದಿನ ರೋಹಿತ್ ಯಾರು?' ಎಂಬ ಪ್ರಶ್ನೆ ಬರುತ್ತದೆ. ಇದು ತುಂಬಾ ಸಹಜ. ಒಂದು ಅಥವಾ ಎರಡು ಕಡಿಮೆ ಸ್ಕೋರ್ಗಳು ಬಂದ ತಕ್ಷಣ, ಎಲ್ಲರೂ ನಿಮ್ಮ ನಂತರ ಯಾರು ಎಂದು ನೋಡಲು ಪ್ರಾರಂಭಿಸುತ್ತಾರೆ. ಈಗ ವೈಭವ್ ಸೂರ್ಯವಂಶಿ ಮತ್ತು ಇತರ ಯುವ ಪ್ರತಿಭೆಗಳು ಹೊರಹೊಮ್ಮುತ್ತಿರುವುದರಿಂದ, ವಿಶೇಷವಾಗಿ ಭಾರತದ ಅಗ್ರ ಕ್ರಮಾಂಕದ ಬ್ಯಾಟರ್ಗಳ ಮೇಲೆ ಇನ್ನಷ್ಟು ಒತ್ತಡ ಬಂದಿದೆ ಎಂದು ಹೇಳಿದರು.
ರೋಹಿತ್ಗೆ ಮುಂದಿನ ಆರು ವಾರಗಳು ಮಹತ್ವವಾದದ್ದು
ಸ್ವಾನ್ ಅವರ ಪ್ರಕಾರ, ಭಾರತದ ಹಿರಿಯ ಆಟಗಾರರು ಮತ್ತು ಯುವ ಪ್ರತಿಭೆಗಳ ನಡುವಿನ ಸಮತೋಲನವನ್ನು ಕಾಯ್ದುಕೊಳ್ಳುವ ಈ ಸಂದರ್ಭದಲ್ಲಿ ರೋಹಿತ್ ಶರ್ಮಾಗೆ ಮುಂದಿನ ಆರು ವಾರಗಳು ಬಹಳ ಪ್ರಮುಖವಾಗಿವೆ. ರೋಹಿತ್ಗೆ ಇದು ಅತ್ಯಂತ ಮಹತ್ವದ ಆರು ವಾರಗಳಾಗಿವೆ. ಆದರೆ ಐಪಿಎಲ್ನಲ್ಲಿ ಅವರು ಅದ್ಭುತ ಫಾರ್ಮ್ನಲ್ಲಿದ್ದರು. ಅವರು ಇನ್ನೂ ವಿಶ್ವದ ಅತ್ಯುತ್ತಮ ಬ್ಯಾಟರ್ಗಳಲ್ಲಿ ಒಬ್ಬರು. ನಾನು ಇಂಗ್ಲೆಂಡ್ ಬೌಲರ್ ಆಗಿದ್ದರೆ, ತನ್ನ ಸ್ಥಾನವನ್ನು ಉಳಿಸಿಕೊಳ್ಳಲು ಮತ್ತು ಟೀಕಾಕಾರರಿಗೆ ಉತ್ತರ ನೀಡಲು ಉತ್ಸುಕನಾಗಿರುವ ರೋಹಿತ್ ಶರ್ಮಾಗೆ ಬೌಲಿಂಗ್ ಮಾಡಲು ಬಯಸುವುದಿಲ್ಲ. ಅವರು ಈಗ ಅಷ್ಟು ಅಪಾಯಕಾರಿ ಎಂದು ಹೇಳಿದರು.
ಕೊಹ್ಲಿ ಮತ್ತು ರೋಹಿತ್ ಇನ್ನೂ ಅಪಾಯಕಾರಿ
ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಬಗ್ಗೆ ಮಾತನಾಡಿದ ಸ್ವಾನ್, ಇದು ಮತ್ತೊಮ್ಮೆ ಕ್ರಿಕೆಟ್ನ ಇಬ್ಬರು ದಿಗ್ಗಜರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರತ್ತ ಗಮನ ಸೆಳೆಯಲಿದೆ ಎಂದು ಹೇಳಿದರು. ಮುಂದಿನ ವರ್ಷ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಹಿನ್ನೆಲೆಯಲ್ಲಿ ಯಾರ ಮೇಲೆ ಹೆಚ್ಚು ಗಮನವಿರುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದ ಸ್ವಾನ್, 2026ರ ಐಪಿಎಲ್ನಲ್ಲಿ 16 ಪಂದ್ಯಗಳಲ್ಲಿ 675 ರನ್ ಗಳಿಸಿರುವ ವಿರಾಟ್ ಕೊಹ್ಲಿಯ ಅದ್ಭುತ ಪ್ರದರ್ಶನವನ್ನು ಉಲ್ಲೇಖಿಸಿದರು.
ಆದರೆ ಇಂಗ್ಲೆಂಡ್ ಸರಣಿಯನ್ನು ಭಾರತದ ಹಿರಿಯ ಬ್ಯಾಟರ್ಗಳಿಗೆ "ಮಾಡು ಅಥವಾ ಮಡಿ" ಸರಣಿ ಎಂದು ಕರೆಯಲು ಅವರು ನಿರಾಕರಿಸಿದರು. "ಇಂಗ್ಲೆಂಡ್ ದೃಷ್ಟಿಯಿಂದ ನೋಡಿದರೆ, ರೋಹಿತ್ ಮತ್ತು ವಿರಾಟ್ ವಿಶ್ವಕಪ್ ಬಗ್ಗೆ ಹೆಚ್ಚು ಯೋಚಿಸಿ ಗಮನ ಕಳೆದುಕೊಳ್ಳುತ್ತಾರೆ ಎಂದು ಅವರು ಆಶಿಸಬಹುದು. ಆದರೆ ಅದು ಅವರ ಪ್ರದರ್ಶನದ ಮೇಲೆ ಪರಿಣಾಮ ಬೀರುತ್ತದೆ. ಭಾರತವು ಹಾಗಾಗದಂತೆ ನೋಡಿಕೊಳ್ಳಬೇಕು. ಆದರೆ ಇವರು ರೋಹಿತ್ ಮತ್ತು ವಿರಾಟ್. ಅವರಿಗೆ ಏನು ಮಾಡಬೇಕೆಂದು ಚೆನ್ನಾಗಿ ಗೊತ್ತಿದೆ. ಆ ಸಮಯದಲ್ಲಿ ಇಂಗ್ಲೆಂಡ್ನಲ್ಲಿ ಹವಾಮಾನ ಒಣಗಿರುತ್ತದೆ. ಬಿಳಿ ಚೆಂಡು ಕೆಂಪು ಚೆಂಡಿನಷ್ಟು ಸ್ವಿಂಗ್ ಆಗುವುದಿಲ್ಲ. ಹೀಗಾಗಿ ಇಬ್ಬರಿಗೂ ಬ್ಯಾಟಿಂಗ್ ಮಾಡಲು ಉತ್ತಮ ಪರಿಸ್ಥಿತಿಗಳು ಸಿಗಬಹುದು. ಇದು ಇಂಗ್ಲೆಂಡ್ಗೆ ಒಳ್ಳೆಯ ಸುದ್ದಿ ಅಲ್ಲ ಎಂದರು.
ವೈಭವ್ ಸೂರ್ಯವಂಶಿ ವಿಶೇಷ ಪ್ರತಿಭೆ
15 ವರ್ಷದ ವೈಭವ್ ಸೂರ್ಯವಂಶಿ ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿರುವ ಹಿನ್ನೆಲೆಯಲ್ಲಿ ಸ್ವಾನ್ ಅವರನ್ನು ಹೊಗಳಿದರು. ಹೌದು, ಅವನು ವಿಶೇಷ ಪ್ರತಿಭೆ. ನಾನು ಈಗಲೂ ಬೌಲಿಂಗ್ ಮಾಡುತ್ತಿದ್ದರೆ ಅವನಿಗೆ ಬೌಲಿಂಗ್ ಮಾಡಲು ಇಷ್ಟಪಡುವುದಿಲ್ಲ. ಅವನು ಇನ್ನೂ ವೈಫಲ್ಯವನ್ನು ಹೆಚ್ಚು ನೋಡದ ವಯಸ್ಸಿನಲ್ಲಿದ್ದಾನೆ. ಆದ್ದರಿಂದ ಸಂಪೂರ್ಣ ನಿರ್ಭಯವಾಗಿ ಆಡುತ್ತಾನೆ. ಅಂಡರ್-19 ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ನೀಡಿದ ಬಳಿಕ ಐಪಿಎಲ್ಗೆ ಬಂದ. ಆರಂಭದಲ್ಲಿ ಕೆಲವರು ಯಾರ್ಕರ್ ಬೌಲಿಂಗ್ ಮಾಡಿ ಅವನನ್ನು ನಿಯಂತ್ರಿಸಬಹುದು ಎಂದರು.
ಆದರೆ ವಿಶ್ವಮಟ್ಟದ ಬೌಲರ್ಗಳ ವಿರುದ್ಧ ಪದೇ ಪದೇ ರನ್ ಗಳಿಸುವುದು ಸುಲಭವಲ್ಲ. ಆದರೂ ಐಪಿಎಲ್ ಮುಂದುವರಿದಂತೆ ಅವನು ಇನ್ನಷ್ಟು ಉತ್ತಮನಾದ. ಪ್ಲೇಆಫ್ನಲ್ಲಿ ಆಡಿದ ಎರಡು 90+ ರನ್ಗಳ ಇನ್ನಿಂಗ್ಸ್ಗಳು ಅಸಾಧಾರಣವಾಗಿದ್ದವು. ಚಂಡೀಗಢದಲ್ಲಿ ಆಡಿದ ಒಂದು ಇನ್ನಿಂಗ್ಸ್ ನಾನು ನೋಡಿದ್ದೆ. 15 ವರ್ಷದ ಹುಡುಗನಿಂದ ಅಂತಹ ಧೈರ್ಯಶಾಲಿ ಬ್ಯಾಟಿಂಗ್ ನಾನು ನೋಡಿರಲಿಲ್ಲ. ಅವನು ವಿಶ್ವಮಟ್ಟದ ಆಟಗಾರ. ನಾನು ಈಗ ಕ್ರಿಕೆಟ್ ಆಡುತ್ತಿಲ್ಲ ಎಂಬುದಕ್ಕೆ ಖುಷಿಯಾಗುತ್ತಿದೆ ಎಂದು ಸ್ವಾನ್ ಹೇಳಿದರು.
Advertisement