

ಬೆಂಗಳೂರು: ಮೇ 31ರಂದು ನಡೆಯಲಿರುವ ಐಪಿಎಲ್ 2026ರ ಫೈನಲ್ ಪಂದ್ಯದ ನಂತರ ಅಭಿಮಾನಿಗಳ ಸಂಭ್ರಮಾಚರಣೆ ಬೆಂಗಳೂರು ಪೊಲೀಸರು ಕೆಲ ಬ್ರೇಕ್ ಹಾಕಿದ್ದಾರೆ. ಪಟಾಕಿ ಸಿಡಿಸುವುದು, ರಸ್ತೆಗಳಲ್ಲಿ ಕೂಗಾಡುತ್ತ ಆಚರಣೆಗಳನ್ನು ಮಾಡುವುದು, ವಾಗ್ವಾದ, ಜಗಳದಲ್ಲಿ ತೊಡಗದಂತೆ ಬೆಂಗಳೂರು ನಗರ ಪೊಲೀಸರು ಸಾರ್ವಜನಿಕರನ್ನು ಒತ್ತಾಯಿಸಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಟಾಟಾ ಐಪಿಎಲ್ 2026 ಕ್ರಿಕೆಟ್ ಪಂದ್ಯಾವಳಿಯ ಫೈನಲ್ ತಲುಪಿರುವುದರಿಂದ, ಸಾರ್ವಜನಿಕರು ಸುರಕ್ಷತಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ. ಪಂದ್ಯ ಮುಕ್ತಾಯದ ಬಳಿಕ ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ರೀತಿಯ ಆಚರಣೆಗಳಲ್ಲಿ ತೊಡಗಬಾರದು ಎಂದು ಪೊಲೀಸರು ಸೂಚಿಸಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆ, ಸಾರ್ವಜನಿಕ ಶಾಂತಿ ಮತ್ತು ಸುರಕ್ಷತೆಯನ್ನು ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ ಎಂದರು.
ಸಂಬಂಧಪಟ್ಟ ಅಧಿಕಾರಿಗಳ ಪೂರ್ವಾನುಮತಿ ಇಲ್ಲದೆ ರಸ್ತೆಗಳಲ್ಲಿ ಎಲ್ಇಡಿ ಪರದೆಗಳನ್ನು ಅಳವಡಿಸಬಾರದು. ಫೈನಲ್ ಪಂದ್ಯ ವೀಕ್ಷಿಸಲು ಮಾಲ್ಗಳು, ಪಬ್ಗಳು ಅಥವಾ ಇತರ ಸಂಸ್ಥೆಗಳ ಹೊರಗೆ ಸಾರ್ವಜನಿಕರಿಗೆ ಕಾಣುವ ರೀತಿಯಲ್ಲಿ ಪರದೆಗಳನ್ನು ಅಳವಡಿಸಬಾರದು. ಪಟಾಕಿ ಸಿಡಿಸುವುದು ಮತ್ತು ಅಪಾಯಕಾರಿ ವಸ್ತುಗಳನ್ನು ಬಳಸುವುದನ್ನು ನಿಷೇಧಿಸಲಾಗಿದೆ. ಜನದಟ್ಟಣೆ ಇರುವ ಪ್ರದೇಶಗಳಲ್ಲಿ ಶಾಂತಿ ಮತ್ತು ಶಿಸ್ತನ್ನು ಕಾಪಾಡಿಕೊಳ್ಳಬೇಕು ಎಂದು ತಿಳಿಸಲಾಗಿದೆ.
ಬೈಕ್ ರ್ಯಾಲಿಗಳು, ಅತಿ ವೇಗದ ಚಾಲನೆ, ಸಾಹಸಗಳು, ಹಾರ್ನ್ಗಳ ದುರುಪಯೋಗ ಮತ್ತು ರಸ್ತೆ ತಡೆಗಳನ್ನು ನಿಷೇಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡಬಾರದು ಅಥವಾ ಗೊಂದಲ ಸೃಷ್ಟಿಸಬಾರದು, ಜಗಳಗಳಲ್ಲಿ ತೊಡಗಬಾರದು ಅಥವಾ ಅಸಭ್ಯವಾಗಿ ವರ್ತಿಸಬಾರದು ಎಂದು ಜನರಿಗೆ ಸೂಚಿಸಲಾಗಿದೆ. ಪ್ರಚೋದನಕಾರಿ ಪೋಸ್ಟ್ಗಳು, ದ್ವೇಷಪೂರಿತ ಸಂದೇಶಗಳು ಅಥವಾ ವದಂತಿಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳದಂತೆ ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.
1,30,000ಕ್ಕೂ ಹೆಚ್ಚು ಆಸನಗಳಿರುವ ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ನಡೆಯಲಿದೆ. 2025ರ ಜೂನ್ ನಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಆರ್ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಜನರು ಸಾವನ್ನಪ್ಪಿದ್ದು 33 ಜನರು ಗಾಯಗೊಂಡ ಹಿನ್ನೆಲೆಯಲ್ಲಿ ಈ ಸಲಹೆಗಳನ್ನು ನೀಡಿದ್ದಾರೆ.
Advertisement