

ಮುಂಬೈ: ಭಾರತ ಕ್ರಿಕೆಟ್ ತಂಡದ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಅವರು ಗುರುವಾರ ನಡೆದ ಮಹತ್ವದ ಬಿಸಿಸಿಐ ಸಭೆಗೆ ಗೈರಾಗಿರುವುದು ಹಲವು ಊಹಾಪೋಹಗಳಿಗೆ ಕಾರಣವಾಗಿದ್ದು, ಈ ಬಗ್ಗೆ ಕೊನೆಗೂ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮೌನ ಮುರಿದಿದೆ.
ಹೌದು.. ಗುರುವಾರ ನಡೆದ ಸಭೆಯಲ್ಲಿ ಭಾರತ ತಂಡದ ನಾಯಕ ಶುಭಮನ್ ಗಿಲ್ (ಏಕದಿನ ಹಾಗೂ ಟೆಸ್ಟ್) ಮತ್ತು ಶ್ರೇಯಸ್ ಅಯ್ಯರ್ (ಟಿ20) ಜತೆಗೆ ಮುಖ್ಯ ಕೋಚ್ ಗೌತಮ್ ಗಂಭೀರ್ ಭಾಗವಹಿಸಿದ್ದರು.
ಬಿಸಿಸಿಐನ ಹಲವು ಹಿರಿಯ ಅಧಿಕಾರಿಗಳು ಹಾಗೂ ಸೆಂಟರ್ ಆಫ್ ಎಕ್ಸಲೆನ್ಸ್ನ ಕ್ರಿಕೆಟ್ ನಿರ್ದೇಶಕ ವಿವಿಎಸ್ ಲಕ್ಷ್ಮಣ್ ಕೂಡ ಸಭೆಯಲ್ಲಿ ಉಪಸ್ಥಿತರಿದ್ದರು. ಆದರೆ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಅವರು ನೇರವಾಗಿಯೂ ಅಥವಾ ಆನ್ಲೈನ್ ಮೂಲಕವೂ ಸಭೆಯಲ್ಲಿ ಭಾಗವಹಿಸಿರಲಿಲ್ಲ.
ಇದರಿಂದ ಅಗರ್ಕರ್ ಅವರ ಅಧಿಕಾರಾವಧಿ ಮುಂದುವರಿಯಲಿದೆಯೇ? ಅವರನ್ನು ಮುಖ್ಯ ಆಯ್ಕೆಗಾರರ ಹುದ್ದೆಯಿಂದ ಬದಲಿಸಲಾಗುತ್ತದೆಯೇ? ಎಂಬ ಹಲವು ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಕ್ರಿಕೆಟ್ ವಲಯದಲ್ಲಿ ನಡೆದಿದ್ದವು.
ಆದರೆ ಈ ಎಲ್ಲ ಊಹಾಪೋಹಗಳಿಗೆ ಸೈಕಿಯಾ ತೆರೆ ಎಳೆದಿದ್ದಾರೆ. ಅಗರ್ಕರ್ ಅವರ ಬಿಸಿಸಿಐ ಮುಖ್ಯ ಆಯ್ಕೆಗಾರರ ಅವಧಿ ಕುರಿತು ಯಾವುದೇ ಚರ್ಚೆ ನಡೆದಿಲ್ಲ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಸ್ಪಷ್ಟಪಡಿಸಿದ್ದಾರೆ.
ಸೈಕಿಯಾ ಹೇಳಿದ್ದೇನು?
“ಅಜಿತ್ ಅಗರ್ಕರ್ ಅವರು ನಗರದಿಂದ ಹೊರಗಿದ್ದರು. ಸಭೆಯಲ್ಲಿ ಭಾಗವಹಿಸಲು ಅವರಿಗೆ ಸಾಧ್ಯವಾಗಲಿಲ್ಲ. ಈ ಸಭೆಯನ್ನು ಅತ್ಯಂತ ಕಡಿಮೆ ಸಮಯದ ಸೂಚನೆಯೊಂದಿಗೆ ಕರೆಯಲಾಗಿತ್ತು. ಅವರು ನಗರದಲ್ಲಿರಲಿಲ್ಲ. ಆನ್ಲೈನ್ ಮೂಲಕ ಸಭೆಗೆ ಸೇರಲು ಅತ್ಯುತ್ತಮ ಪ್ರಯತ್ನ ಮಾಡಿದರೂ, ಅವರು ಇದ್ದ ಪ್ರದೇಶದಿಂದ ಅದು ಸಾಧ್ಯವಾಗಲಿಲ್ಲ” ಎಂದು ಸೈಕಿಯಾ ಮಾಧ್ಯಮಗಳೊಂದಿಗೆ ಮಾತನಾಡುವ ವೇಳೆ ತಿಳಿಸಿದ್ದಾರೆ.
ಅಗರ್ಕರ್ ಅವಧಿ ವಿಸ್ತರಣೆ?
ಅಜಿತ್ ಅಗರ್ಕರ್ ಅವರನ್ನು ಮುಖ್ಯ ಆಯ್ಕೆಗಾರರಾಗಿ ಮುಂದುವರಿಸುವ ಅಥವಾ ಅವರ ಅಧಿಕಾರಾವಧಿಯನ್ನು ವಿಸ್ತರಿಸುವ ಕುರಿತು ಸಭೆಯಲ್ಲಿ ಚರ್ಚೆ ನಡೆದಿತ್ತೇ ಎಂದು ಪ್ರಶ್ನಿಸಿದಾಗ ಸೈಕಿಯಾ, “ಇಂದಿನ ಸಭೆಯಲ್ಲಿ ಅಂತಹ ಯಾವುದೇ ಚರ್ಚೆ ನಡೆದಿಲ್ಲ” ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಇದೇ ವೇಳೆ, ವಿವಿಎಸ್ ಲಕ್ಷ್ಮಣ್ ಅವರನ್ನು ಬಿಸಿಸಿಐ ಕ್ರಿಕೆಟ್ ನಿರ್ದೇಶಕರನ್ನಾಗಿ ನೇಮಕ ಮಾಡಲಾಗುತ್ತದೆ ಎಂಬ ವದಂತಿಗಳಿಗೂ ಸೈಕಿಯಾ ಪ್ರತಿಕ್ರಿಯಿಸಿದರು.
“ಹೊಸ ವದಂತಿಗಳ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಅಂತಹ ಯಾವುದೇ ಚರ್ಚೆ ನಡೆದಿಲ್ಲ. ಹಾಗೆಯೇ ನಮಗೆ ಅಂತಹ ಯಾವುದೇ ಉದ್ದೇಶವೂ ಇಲ್ಲ” ಎಂದು ಅವರು ಹೇಳಿದರು.