ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಜು. 24
ಸಮೀಪದ ಕಾಲಕಾಲೇಶ್ವರ ಗ್ರಾಮ ಬಳಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ವಿದ್ಯಾರ್ಥಿಗಳು ಅವಿಭಕ್ತ ಕುಟುಂಬದ ಕುರಿತು ಅಧ್ಯಯನ ನಡೆಸಲು ಪಟ್ಟಣದ ಸಾಂಗ್ಲೀಕರ ನಿವಾಸಕ್ಕೆ ಈಚೆಗೆ ಭೇಟಿ ನೀಡಿ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಅವಿಭಕ್ತ ಕುಟುಂಬದ ಯಜಮಾನ ಅಮೀನಸಾಬ ಸಾಂಗ್ಲೀಕಾರ ಮಾತನಾಡಿ, ನಮ್ಮ ಕುಟುಂಬದಲ್ಲಿ ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು, ಮರಿಮೊಮ್ಮಕ್ಕಳು, ಸೇರಿ 52 ಸದಸ್ಯರಿದ್ದು, ಎಲ್ಲರೂ ಸಮಾನತೆಯಿಂದ ಪ್ರೀತಿ, ಪ್ರೇಮ ವಿಶ್ವಾಸ ಜತೆ ಬದುಕಿನಲ್ಲಿ ಬರುವ ಹಲವಾರು ಸಮಸ್ಯೆಗಳನ್ನು ಪರಸ್ಪರ ಚರ್ಚಿಸಿ ಅನ್ಯೋನ್ಯವಾಗಿ ಜೀವನ ಸಾಗಿಸುತ್ತಿದ್ದೇವೆ ಎಂದು ವಿದ್ಯಾರ್ಥಿಗಳಿಗೆ ತಮ್ಮ ಕುಟುಂಬದ ಅನುಭವಗಳನ್ನು ಬಿಚಿಟ್ಟರು.
ಅವಿಭಕ್ತ ಕುಟುಂಬದ ಬಗ್ಗೆ ಕೇವಲ ಪುಸ್ತಕಗಳಲ್ಲಿ ಓದಿ ತಿಳಿದ ನಮಗೆ ಇಂದು ಸ್ವತಃ ಅವಿಭಕ್ತ ಕುಟುಂಬದ ಸದಸ್ಯರನ್ನು ಕಣ್ಣಾರೆ ಕಾಣುವುದರ ಜತೆಗೆ ಅವರ ಜೀವನ ಶೈಲಿ ಕಂಡು ಆಶ್ಚರ್ಯವಾಗಿದೆ. ಜತೆಗೆ ಇಂದಿನ ಸಮಾಜದಲ್ಲಿ ಅವಿಭಕ್ತ ಕುಟುಂಬ ನೆಮ್ಮದಿಯ ಬದುಕಿಗೆ ಸಹಕಾರಿಯಾಗಿದೆ. ಈ ನಿಟ್ಟಿನಲ್ಲಿ ನಾವು ಸಹ ಅವಿಭಕ್ತ ಕುಟುಂಬವಾಗಿ ಬದುಕು ಸಾಗಿಸಬೇಕು ಎಂಬ ಅರಿವು ನಮಗಾಗಿದೆ ಎಂದು ವಿದ್ಯಾರ್ಥಿಗಳು ಹೇಳಿದರು.
ಇದೇ ಸಂದರ್ಭದಲ್ಲಿ ಅವಿಭಕ್ತ ಸಾಂಗ್ಲೀಕರ ಕುಟುಂಬದವರು ವಿದ್ಯಾರ್ಥಿಗಳಿಗೆ ನೋಟ್ಬುಕ್, ಪೆನ್ ಜತೆ ನೆನಪಿನ ಕಾಣಿಕೆ ನೀಡಿ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹಿಸಿದರು. ಈ ವೇಳೆ ವಿದ್ಯಾರ್ಥಿಗಳು ಅವಿಭಕ್ತ ಕುಟುಂಬದ ಹಿರಿಯ ಜೀವಿ ಅಮೀನಸಾಬ ಸಾಂಗ್ಲೀಕರನ್ನು ಸನ್ಮಾನಿಸಿದರು. ಪ್ರಾಚಾರ್ಯ ಎಸ್.ಎಸ್. ಕರ್ಜಗಿ, ಬಸವರಾಜ ತುಮ್ಮರಗುದ್ದಿ, ಅಶೋಕ ಬ್ಯಾಳಿ, ಎಸ್.ಐ. ಮ್ಯಾಗೇರಿ, ಯಶೋದಾ ಗಾರ್ಗಿ, ಉಮಾಮಹೇಶ್ವರಿ ಅಂಬಿಗೇರ, ಸಿ.ಎಸ್. ಮದರಿ, ಹನುಮಂತ ಹಾದಿಕಾರ, ಕವಿತಾ ಕಂಚಗಾರ, ರಾಚಪ್ಪ ಲೆಕ್ಕದ, ಕಳಕಪ್ಪ ಉಪ್ಪಲದಿನ್ನಿ, ಉಪಸ್ಥಿತರಿದ್ದರು.
Advertisement