ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವ ಪುರುಷರ ಸಂಖ್ಯೆ ಇಳಿಮುಖ

ಭಾರತದಲ್ಲಿ ಸಾಮಾನ್ಯವಾಗಿ ಪುರುಷರು ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆಯಿಂದ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಭುವನೇಶ್ವರ: ಭಾರತದಲ್ಲಿ ಸಾಮಾನ್ಯವಾಗಿ ಪುರುಷರು ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆಯಿಂದ ದೂರವುಳಿಯುತ್ತಾರೆ. ತಮ್ಮ ಪತ್ನಿ ಶಸ್ತ್ರಕ್ರಿಯೆ ಮಾಡಿಸಿಕೊಳ್ಳುವಂತೆ ಹೇಳುತ್ತಾರೆ.  ಅಥವಾ ಕುಟುಂಬ ಯೋಜನೆಗೆ ಬೇರೆ ಕ್ರಮಗಳನ್ನು ಅಳವಡಿಸಿಕೊಳ್ಳುತ್ತಾರೆ.
ಹೀಗೆಂದರೆ ನೀವು ನಂಬದಿರಬಹುದು. ಆದರೂ ಸತ್ಯ. ಇತ್ತೀಚಿನ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ವರದಿ ಪ್ರಕಾರ, ಪುರುಷರು ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಗಾಗುವುದು 2015-16ರಲ್ಲಿ ಶೇಕಡಾ 0.3ಕ್ಕೆ ಇಳಿಕೆಯಾಗಿದೆ. ಅದು 2005-06ರಲ್ಲಿ ಶೇಕಡಾ 1ರಷ್ಟಿತ್ತು. ಕಳೆದ 10 ವರ್ಷಗಳಲ್ಲಿ ಕಾಂಡೊಮ್ ಬಳಸುವವರ ಸಂಖ್ಯೆ ಶೇಕಡಾ 0.4ರಷ್ಟಾಗಿದೆಯಷ್ಟೆ. 
ಶಿಕ್ಷಣವಂತರು ಹೆಚ್ಚಾಗಿರುವ ರಾಜ್ಯಗಳಾದ ಕೇರಳ, ತಮಿಳುನಾಡು, ಕರ್ನಾಟಕ ಮತ್ತು ಮಹಾರಾಷ್ಟ್ರಗಳಲ್ಲಿ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಪುರುಷ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ  ಒಳಪಡುವವರು ಕಡಿಮೆ. ಮಹಾರಾಷ್ಟ್ರದಲ್ಲಿ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದ್ದು, 2005-06ರಲ್ಲಿ ಶೇಕಡಾ 2.1ರಷ್ಟಿದ್ದರೆ 2015-16ರಲ್ಲಿ ಶೇಕಡಾ 0.4ರಷ್ಟಾಗಿದೆ.
ತಮಿಳುನಾಡು, ಬಿಹಾರ ರಾಜ್ಯಗಳಲ್ಲಿ ಸಂತಾನ ಹರಣ ಶಸ್ತ್ರಚಿಕಿತ್ಸೆಗೆ ಒಳಪಡುವ ಪುರುಷರ ಸಂಖ್ಯೆ ಶೂನ್ಯವಾಗಿದೆ. ಗುಜರಾತ್, ಕೇರಳ, ಪಶ್ಚಿಮ ಬಂಗಾಳ ಮತ್ತು ಕರ್ನಾಟಕದಲ್ಲಿ ಶೇಕಡಾ 0.1ರಷ್ಟು, ದೆಹಲಿ, ಒಡಿಶಾ ಮತ್ತು ಜಾರ್ಖಂಡ್ ನಲ್ಲಿ ಶೇಕಡಾ 0.2ರಷ್ಟಿದೆ.
ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಪಡುವ ಮಹಿಳೆಯರ ಸಂಖ್ಯೆ ಕೂಡ ಇತ್ತೀಚಿನ ವರ್ಷಗಳಲ್ಲಿ ಕಡಿಮೆಯಾಗಿದೆ. ದಶಕದ ಹಿಂದೆ ಶೇಕಡಾ 37.3ರಷ್ಟಿದ್ದರೆ ಈಗ ಶೇಕಡಾ 36ರಷ್ಟಾಗಿದೆ. ಆಂಧ್ರ ಪ್ರದೇಶದಲ್ಲಿ ದೇಶದಲ್ಲಿ ಅತಿ ಹೆಚ್ಚು ಶೇಕಡಾ 68.3ರಷ್ಟು ಮಹಿಳೆಯರು ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದಾರೆ. ನಂತರ ತಮಿಳುನಾಡಿನಲ್ಲಿ ಶೇಕಡಾ 49.4ರಷ್ಟಿದೆ. ಕರ್ನಾಟಕದಲ್ಲಿ ದಶಕದ ಹಿಂದೆ ಸಂತಾನ ಶಸ್ತ್ರಚಿಕಿತ್ಸೆಗೆ ಒಳಪಟ್ಟ ಮಹಿಳೆಯರ ಸಂಖ್ಯೆ ಶೇಕಡಾ 57.4ರಷ್ಟಿದ್ದರೆ ಇದೀಗ ಶೇಕಡಾ 48.6ರಷ್ಟಿದೆ.
ಮಹಿಳೆಯರು ಶಸ್ತ್ರಚಿಕಿತ್ಸೆಗೆ ಒಳಪಡುವ ಪ್ರಮಾಣ  ನಗರ ಪ್ರದೇಶಕ್ಕಿಂತ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿದೆ. ನಗರದಲ್ಲಿ ಶೇಕಡಾ 35.7 ಮಹಿಳೆಯರು ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಪಟ್ಟರೆ ಗ್ರಾಮೀಣ ಭಾಗಗಳಲ್ಲಿ ಶೇಕಡಾ 36.1ರಷ್ಟಿದೆ. ಗ್ರಾಮೀಣ ಪ್ರದೇಶಗಳ ಪುರುಷರು ಕೂಡ ಸಂತಾನ ಹರಣ ಶಸ್ತ್ರಚಿಕಿತ್ಸೆಗೆ ಒಳಪಡುವುದು ನಗರ ಪ್ರದೇಶಕ್ಕಿಂತ ಜಾಸ್ತಿಯಾಗಿದೆ.
 ಗರ್ಭನಿರೋಧಕ ಗುಳಿಗೆಗಳನ್ನು ಸೇವಿಸುವವರ ಸಂಖ್ಯೆ ಮೇಘಾಲಯ, ಮಣಿಪುರ, ಮಿಜೋರಾ ಮತ್ತು ನಾಗಾಲ್ಯಾಂಡ್ ಗಳಲ್ಲಿ ಅಧಿಕವಾಗಿದೆ. ಮಹಿಳೆಯರು ಗರ್ಭ ನಿರೋಧಕ ಮಾತ್ರೆಗಳನ್ನು ಬಳಸುವುದು ತ್ರಿಪುರಾ, ಅರುಣಾಚಲ ಪ್ರದೇಶ ಮತ್ತು ಅಸ್ಸಾಂಗಳಲ್ಲಿ ಹೆಚ್ಚು. 
ಕಾಮಾಸಕ್ತಿ ಕಡಿಮೆಯಾಗುತ್ತದೆ ಮತ್ತು ಲೈಂಗಿಕ ಸಾಮರ್ಥ್ಯ ಕುಂಠಿತವಾಗುತ್ತದೆ ಎಂದು ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಪಡದಿರುವುದು ತಪ್ಪು ಭಾವನೆ.ಶಾಶ್ವತ ಮತ್ತು ಸುರಕ್ಷಿತ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವುದು ಉತ್ತಮ  ಎನ್ನುತ್ತಾರೆ ಆರೋಗ್ಯ ತಜ್ಞರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com