ಬೆಂಗಳೂರು: 72 ವರ್ಷದ ನಿವೃತ್ತ ಸೇನಾ ನೌಕರರೊಬ್ಬರರನ್ನು ಮಗನೇ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಈಜಿಪುರದ 4ನೇ ಅಡ್ಡರಸ್ತೆ ನಿವಾಸಿ ಗೌತಮ್ (72) ಕೊಲೆಯಾದ ತಂದೆ. ಪುತ್ರ ಕಿರಣ್ (27) ನನ್ನು ವಿವೇಕನಗರ ಪೊಲೀಸರು ಬಂಧಿಸಿದ್ದಾರೆ. ಬಿಕಾಂ ಪದವೀಧರನಾಗಿದ್ದ ಕಿರಣ್ ಖಾಸಗಿ ಕಂಪನಿಯಲ್ಲಿ 2 ವರ್ಷದಿಂದ ಕೆಲಸ ಮಾಡುತ್ತಿದ್ದ. ಇತ್ತೀಚೆಗೆ ಕೆಲಸ ಬಿಟ್ಟು ಸ್ಥಳೀಯ ಯುವಕರ ಜತೆ ಸುತ್ತಾಡಿಕೊಂಡಿದ್ದ. ಬೇರೆ ಕೆಲಸ ಹುಡುಕಿಕೊಳ್ಳುವಂತೆ ತಂದೆ ಮತ್ತು ಸೋದರ ಬುದ್ಧಿವಾದ ಹೇಳಿದ್ದರು. ಅವರ ಮೇಲೂ ಕುಪಿತಗೊಂಡಿದ್ದ, ಜತೆಗೆ ದುಶ್ಚಟಗಳಿಗೆ ದಾಸನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ನರ ಸಂಬಂಧಿತ ರೋಗಗಳಿಂದ ಬಳಲುತ್ತಿದ್ದ ಕಿರಣ್ ಕೈಕಾಲುಗಳು ನಿಶ್ಯಕ್ತವಾಗಿವೆ, .ಕೆಲಸಕ್ಕೆ ಹೋಗಲು ಆಗುತ್ತಿಲ್ಲ. ನನ್ನ ಮೇಲೆ ಮಾಟ ಮಾಡಿಸಿದ್ದೀಯ ಎಂದು ತಂದೆ ಗೌತಮ್ ಜತೆ ಕಿರಣ್ ಜಗಳ ತೆಗೆದಿದ್ದ. ಇದು ವಿಕೋಪಕ್ಕೆ ತಿರುಗಿ ರಾತ್ರಿ 10.30ರ ಸುಮಾರಿಗೆ ಹತ್ಯೆ ಮಾಡಿದ್ದಾನೆ.
ಗೌತಮ್ ಮನೆಯಲ್ಲಿ ಜಗಳದ ಸದ್ದು ಕೇಳಿ ಬಂದ ಅಕ್ಕಪಕ್ಕದವರನ್ನು ನೋಡಿದ ತಕ್ಷಣ ಕಿರಣ್ ಓಡಿ ಹೋಗಿದ್ದಾನೆ, ಗೌತಮ್ ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಕಿರಣ್ ನನ್ನು ಬಂಧಿಸಿದ್ದಾರೆ.
ಸೈನಿಕನಾಗಿದ್ದ ಗೌತಮ್ ನಿವೃತ್ತಿ ಬಳಿಕ ಟ್ರಾವೆಲ್ಸ್ ಏಜನ್ಸಿಯಲ್ಲಿ ಕೆಲಸ ಮಾಡುತ್ತಿದ್ದರು. ಈ ನಡುವೆ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ಕರೆದೊಯ್ದು ಕಿರಣ್ ಆರೈಕೆ ಮಾಡುತ್ತಿದ್ದ.
Advertisement