ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ವೇಗವಾಗಿ ಬೆಳೆಯುತ್ತಿದ್ದು, ಇದಕ್ಕೆ ಹೊಂದಿಕೆಯಾಗುವಂತೆಯೇ ನಗರ ಪೊಲೀಸರು ಕೂಡ ತಮ್ಮ ಕಾರ್ಯ ಚಟುವಟಿಕೆಗಳನ್ನು ಚುರುಕುಗೊಳಿಸುತ್ತಿದ್ದಾರೆ.
ಐಟಿ-ಬಿಟಿ ಕಂಪನಿಗಳು ನಗರದಲ್ಲಿ ಹೆಚ್ಚು ತಲೆಯೆತ್ತುತ್ತಿದ್ದು, ಇದಕ್ಕೆ ಹೊಂದಿಕೆಯಾಗುವಂತೆಯೇ ನಗರ ಪೊಲೀಸರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಚಟುವಟಿಕೆಗಳನ್ನು ಚುರುಕುಗೊಳಿಸಿದ್ದಾರೆ. ತಮ್ಮ ಕಾರ್ಯ ಚಟುವಟಿಕೆಗಳ ಬಗ್ಗೆ ಪ್ರತೀ ಗಂಟೆಯಂತೆ ಅಪ್ ಡೇಟ್ ಗಳನ್ನು ಫೇಸ್ ಬುಕ್ ಮತ್ತು ಟ್ವಿಟರ್ ಗಳಲ್ಲಿ ನೀಡಲು ಆರಂಭಿಸಿವೆ.
ಕಾವೇರಿ ನದಿ ನೀರು ಹಂಚಿಕೆ ಕಿಚ್ಚು ನಗರದಲ್ಲಿ ಹೊತ್ತಿಕೊಂಡ ನಂತರ ಬೆಂಗಳೂರು ನಗರ ಪೊಲೀಸರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಕಾರ್ಯಚಟುವಟಿಕೆಗಳನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದಾರೆ.
ಕಾವೇರಿ ಗಲಾಟೆ ನಂತರ ಫೇಸ್ ಬುಕ್ ಮತ್ತು ಇನ್ನಿತರೆ ಸಾಮಾಜಿಕ ಜಾಲತಾಣಗಳಲ್ಲಿ ಪೊಲೀಸ್ ಇಲಾಖೆಯಿಂದ ಸಾಕಷ್ಟು ಅಪ್ ಡೇಟ್ ಗಳನ್ನು ನೋಡುತ್ತಿದ್ದೇನೆ. ಇತರೆ ಮೂಲಗಳನ್ನು ನಂಬದೆಯೇ ನೇರವಾಗಿ ಫೇಸ್ ಬುಕ್ ನಲ್ಲಿ ಇಲಾಖೆ ನೀಡುತ್ತಿರುವ ಮಾಹಿತಿಯನ್ನು ನಂಬಿಕೆ ಅರ್ಹವಾಗಿದೆ ಎಂದು ಹೆಬ್ಬಾಳ ಟೆಕ್ಕಿ ಅಣ್ಣಾ ಮರಿಯಮ್ ಅವರು ಹೇಳಿದ್ದಾರೆ.
ಇಲಾಖೆಯ ಫೇಸ್ ಬುಕ್, ಟ್ವಿಟರ್ ಮತ್ತು ವಾಟ್ಸ್ ಅಪ್ ಗಳನ್ನು 16 ಸದಸ್ಯರ ಪೊಲೀಸ್ ತಂಡ ನೋಡಿಕೊಳ್ಳುತ್ತಿದ್ದು, ಸಂಚಾರಿ ಪೊಲೀಸರು ಮತ್ತು ನಗರ ಪೊಲೀಸರಿಬ್ಬರೂ ಸೇರಿ 3 ಪಾಳಿಯಲ್ಲಿ ಇದಕ್ಕಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ದೇಶದಲ್ಲಿಯೇ ಬೆಂಗಳೂರು ನಗರ ಐಟಿ ನಗರವಾಗಿದ್ದು, ಇದಕ್ಕೆ ತಕ್ಕಂತೆ ನಮ್ಮನ್ನು ನಾವು ಅಪ್ ಡೇಟ್ ಮಾಡಿಕೊಳ್ಳಬೇಕಿದೆ. ಸಾರ್ವಜನಿಕರೊಂದಿಗೆ ನೇರವಾಗಿ ಸಂಪರ್ಕ ಹೊಂದಿಬೇಕಾಗಿದೆ. ಇದಕ್ಕಾಗಿ ಸಾಮಾಜಿಕ ಜಾಲತಾಣ ಮಾಧ್ಯಮವನ್ನು ಬಳಸಿಕೊಳ್ಳಲಾಗುತ್ತಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಜನರು ನಮ್ಮೊಂದಿಗೆ ನೇರ ಸಂಪರ್ಕ ಹೊಂದಲಿದ್ದಾರೆ. ಇದೊಂದು ಉತ್ತಮ ಮಾಧ್ಯವಾಗಿದೆ ಎಂದು ಪೊಲೀಸ್ ಉಪ ಆಯುಕ್ತ (ಕಮಾಂಡ್ ಕಂಟ್ರೋಲ್) ಎಂಜಿ. ನಾಗೇಂದ್ರ ಕುಮಾರ್ ಅವರು ಹೇಳಿದ್ದಾರೆ.
ಕಾವೇರಿ ವಿವಾದ ಪ್ರತಿಭಟನೆ ಹೆಚ್ಚಾದ ನಂತರ ಸಾಮಾಜಿಕ ಜಾಲಗಳಲ್ಲಿ ಸಾಕಷ್ಟು ಪ್ರಚೋದನಾಕಾರಿ ಹಾಗೂ ಪ್ರತಿಭಟನೆ ಮತ್ತಷ್ಟು ತೀವ್ರಗೊಳ್ಳಲು ಸೂಕ್ಷ್ಮ ವಿಚಾರಗಳ ಬಗ್ಗೆ ಪೋಸ್ಟ್ ಗಳು ಹರಿದಾಡಲು ಆರಂಭಿಸಿದ್ದವು. ಈ ಹಿನ್ನೆಲೆಯಲ್ಲಿ ನಗರ ಪೊಲೀಸರು ಸಾಮಾಜಿಕ ಜಾಲತಾಣಗಳ ಕಡೆ ಹೆಚ್ಚು ಕಾರ್ಯಪ್ರವೃತ್ತರಾಗಲು ಆರಂಭಿಸಿದರು. ಪ್ರಚೋದನಾಕಾರಿ ಹಾಗೂ ದಾರಿ ತಪ್ಪಿರುವ ಪೋಸ್ಟ್ ಗಳ ವಿರುದ್ಧ ಕ್ರಮಕೈಗೊಳ್ಳಲು ಆರಂಭಿಸಿದರು.
ಇದರಂತೆ ಕ್ರಮ ಕೈಗೊಳ್ಳುವುದಕ್ಕೂ ಮುನ್ನ ಇಲಾಖೆ ತನ್ನ ಫೇಸ್ ಬುಕ್ ಮತ್ತು ಟ್ವಿಟರ್ ಗಳಲ್ಲಿ ಸಾರ್ವಜನಿಕರಿಗೆ ಕೆಲ ಎಚ್ಚರಿಕಾ ಸೂಚನೆಗಳನ್ನು ನೀಡಲು ಆರಂಭಿಸಿತು. ಪ್ರಚೋದನೆ ನೀಡುವ ಹಾಗೂ ತಪ್ಪು ದಾರಿಗೆಳೆಯುವ ಫೋಟೋಗಳು, ವಿಡಿಯೋಗಳು ಹಾಗೂ ಬರವಣಿಗೆಗಳ ಮೇಲೆ ಇಲಾಕೆ ಕಣ್ಗಾವಲಿರಿಸಿದ್ದು, ಇಂತಹ ಪೋಸ್ಟ್ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿತ್ತು.
ಎಚ್ಚರಿಕೆ ಪ್ರಕಟಣೆ ಬಳಿಕ ಇಲಾಖೆ ಈ ವರೆಗೂ ಕಾವೇರಿ ವಿವಾದ ಕುರಿತಂತೆ 600ಕ್ಕೂ ಹೆಚ್ಚು ಫೋಟೋಗಳು ಮತ್ತು ವಿಡಿಯೋಗಳನ್ನು ವಶಕ್ಕೆ ಪಡೆಯಲಾಗಿದೆ. ಇವುಗಳನ್ನು ಶೀಘ್ರದಲ್ಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ರವಾನಿಸಲಾಗುತ್ತದೆ ಎಂದು ಡಿಸಿಪಿ ಹೇಳಿದ್ದಾರೆ.
ಇಲಾಖೆಯ ವಾಟ್ಸ್ ಅಪ್ ಗೆ ಸಾಕಷ್ಟು ದೂರುಗಳು ಬಂದಿವೆ. ಸಂದೇಶಗಳು ಹಾಗೂ ದೂರು ಬರುತ್ತಿದ್ದಂತೆ ಸಂಬಂಧಪಟ್ಟ ಪೊಲೀಸ್ ಇಲಾಖೆಗೆ ರವಾನಿಸುತ್ತೇವೆ. ವಾಟ್ಸ್ ಅಪ್ ಗ್ರೂಪ್ ಗಳನ್ನು ನಗರ ಹಿರಿಯ ಪೊಲೀಸ್ ಅಧಿಕಾರಿಗಳು ನೋಡಿಕೊಳ್ಳುತ್ತಿದ್ದಾರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Advertisement