ಬೆಂಗಳೂರು: ಇಂಧನ ಸಚಿವ ಡಿಕೆ ಶಿವಕುಮಾರ್ ಅವರ ಮನೆ ಮೇಲಿನ ಐಟಿ ದಾಳಿ ಪ್ರಕರಣ ಹಸಿರಾಗಿರುವಂತೆಯೇ ಮತ್ತೆ ಬೆಂಗಳೂರಿನಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಗುರುವಾರ ದಾಳಿ ಮಾಡಿದ್ದಾರೆ.
ಮೂಲಗಳ ಪ್ರಕಾರ ಬೆಂಗಳೂರಿನ 14 ಪ್ರದೇಶಗಳಲ್ಲಿ ಏಕಕಾಲದಲ್ಲಿ ಅಧಿಕಾರಿಗಳು ದಾಳಿ ಮಾಡಿದ್ದು, ಈ ಬಾರಿ ಉಧ್ಯಮಿಗಳು ಹಾಗೂ ಬಿಲ್ಡರ್ ಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿದ್ದಾರೆ ಎನ್ನಲಾಗಿದೆ.
ಮೂಲಗಳ ಪ್ರಕಾರ ಈ ಹಿಂದೆ ಆದಾಯ ತೆರಿಗೆ ಪಾವತಿ ಮಾಡಲು ಕೇಂದ್ರ ಸರ್ಕಾರ ವಿಧಿಸಿದ್ದ ಅಂತಿಮ ಗಡುವಿನ ಹೊರತಾಗಿಯೂ ಸಾಕಷ್ಟು ಉಧ್ಯಮಿಗಳು ಹಾಗೂ ಬಿಲ್ಡರ್ ಗಳು ತಮ್ಮ ತಮ್ಮ ಆದಾಯ ತೆರಿಗೆ ಪಾವತಿಸರಿಲ್ಲ. ಹೀಗಾಗಿ ಇಂತಹ ತೆರಿಗೆ ಕಳ್ಳ ಉದ್ಯಮಿ ಹಾಗೂ ಬಿಲ್ಡರ್ ಗಳ ಪಟ್ಟಿ ಮಾಡಿಕೊಂಡಿದ್ದ ಐಟಿ ಅಧಿಕಾರಿಗಳು ಈ ಹಿಂದೆ ಸೂಚನೆ ನೀಡಿದ್ದ ದಿನಾಂಕಕ್ಕಿಂತ ಮೊದಲೇ ದಾಳಿ ಮಾಡುವ ಮೂಲಕ ಶಾಕ್ ನೀಡಿದ್ದಾರೆ. ಆದಾಯ ತೆರಿಗೆ ಪಾವತಿಸದವರ ವಿರುದ್ಧ ಆಗಸ್ಟ್ 15ರ ಬಳಿಕ ಐಟಿ ಇಲಾಖೆ ಕ್ರಮ ಕೈಗೊಳ್ಳುತ್ತದೆ ಎಂದು ಈ ಹಿಂದೆ ಹೇಳಲಾಗಿತ್ತು.
ಆದರೆ ಈ ದಿನಾಂಕಕ್ಕೂ ಮೊದಲೇ ಅಧಿಕಾರಿಗಳು ದಾಳಿ ನಡೆಸಿರುವುದು ತೆರಿಗೆ ಕಳ್ಳರ ತಲೆನೋವಿಗೆ ಕಾರಣವಾಗಿದೆ. ದಾಳಿ ವೇಳೆ ಸುಮಾರು 40ಕ್ಕೂ ಹೆಚ್ಚು ಅಧಿಕಾರಿಗಳು ಪಾಲ್ಗೊಂಡಿದ್ದರು ಎಂದು ತಿಳಿದುಬಂದಿದೆ. ಅಂತೆಯೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡದೇ ಸಿಆರ್ ಪಿಎಫ್ ಯೋಧರನ್ನು ರಕ್ಷಣೆಗೆ ಇರಿಸಿಕೊಂಡು ಈ ದಾಳಿ ಮಾಡಲಾಗಿದೆ ಎಂದು ತಿಳಿದುಬಂದಿದೆ. ಇನ್ನು ಯಾವೆಲ್ಲ ಉದ್ಯಮಿಗಳ ಮನೆ, ಕಚೇರಿಗಳ ದಾಳಿಯಾಗಿದೆ ಎನ್ನುವ ಕುರಿತು ಇನ್ನಷ್ಟೇ ಮಾಹಿತಿ ಹೊರಬರಬೇಕಿದೆ.
Advertisement
Advertisement