ಮುಂಬಡ್ತಿ ಮೀಸಲು ವಿವಾದ: ಸುಪ್ರೀಂ ಆದೇಶ ಪಾಲಿಸದಿದ್ದರೆ, ಚುನಾವಣೆ ವೇಳೆ ತಿರುಗೇಟು; ಸರ್ಕಾರಿ ನೌಕರರ ಎಚ್ಚರಿಕೆ

'ಮುಂಬಡ್ತಿ ಮೀಸಲು ವಿವಾದದಲ್ಲಿ ಸುಪ್ರೀಂಕೋರ್ಟ್ ಆದೇಶ ಪಾಲಿಸದಿದ್ದರೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸರ್ಕಾರ ಹೇಗೆ ಪಾಠ ಕಲಿಸಬೇಕು ಎಂದು ಗೊತ್ತಿದೆ ಎಂದು ಸರ್ಕಾರಿ ನೌಕರರು ಎಚ್ಚರಿಕೆ ನೀಡಿದ್ದಾರೆ.
ಸರ್ಕಾರಿ ನೌಕರರ ಪ್ರತಿಭಟನೆ
ಸರ್ಕಾರಿ ನೌಕರರ ಪ್ರತಿಭಟನೆ
Updated on
ಬೆಂಗಳೂರು: 'ಮುಂಬಡ್ತಿ ಮೀಸಲು ವಿವಾದದಲ್ಲಿ ಸುಪ್ರೀಂಕೋರ್ಟ್ ಆದೇಶ ಪಾಲಿಸದಿದ್ದರೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸರ್ಕಾರ ಹೇಗೆ ಪಾಠ ಕಲಿಸಬೇಕು ಎಂದು ಗೊತ್ತಿದೆ ಎಂದು ಸರ್ಕಾರಿ ನೌಕರರು ಎಚ್ಚರಿಕೆ  ನೀಡಿದ್ದಾರೆ.
ಬಡ್ತಿ ಮೀಸಲಾತಿ ಸಂಬಂಧ ಸುಪ್ರೀಂಕೋರ್ಟ್‌ ನೀಡಿರುವ ಆದೇಶವನ್ನು ಜಾರಿಗೆ ತರುವಂತೆ ಒತ್ತಾಯಿಸಿ ನಗರದ ಅರಮನೆ ಮೈದಾನದಲ್ಲಿ ನಡೆದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಅಹಿಂಸಾ (ಅಲ್ಪಸಂಖ್ಯಾತ, ಹಿಂದುಳಿದ ಹಾಗೂ  ಸಾಮಾನ್ಯ ವರ್ಗ) ನೌಕರರು ರಾಜ್ಯ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಅಹಿಂಸಾ ಸಂಘಟನೆ ಅಧ್ಯಕ್ಷ ಎಂ. ನಾಗರಾಜ್ ಅವರು, "ಕಳೆದ 25 ವರ್ಷಗಳಿಂದ ಒಂದೂ ಬಡ್ತಿ ಇಲ್ಲದೆ  ನಿವೃತ್ತರಾದವರ ನೋವು ಸರ್ಕಾರಕ್ಕೆ ಗೊತ್ತಾಗುತ್ತಿಲ್ಲ. ಶೇ.18 ವರ್ಗದವರ ಓಲೈಕೆ ಬಿಟ್ಟು ಶೇ.82 ವರ್ಗದವರನ್ನು ಪರಿಗಣಿಸಿದರೆ ಖಂಡಿತವಾಗಿ ಕಾಂಗ್ರೆಸ್ ಜತೆ ಇರುತ್ತೇವೆ. ಇಲ್ಲವಾದಲ್ಲಿ ಮುಂಬರುವ ಚುನಾವಣೆಯಲ್ಲಿ ನಾವು  ನಮ್ಮ ತೀರ್ಪು ನೀಡುತ್ತೇವೆ" ಎಂದು ಎಚ್ಚರಿಕೆ ನೀಡಿದ್ದಾರೆ.
"ಸರ್ಕಾರ ಶೇ.18 ವರ್ಗದವರ ಓಲೈಕೆಗೆ ಮುಂದಾಗಿರುವುದರಿಂದ ಶೇ.82 ವರ್ಗದವರಿಗೆ ಅನ್ಯಾಯವಾಗುತ್ತಿದ್ದು, ಈಗಲೂ ಸುಮ್ಮನೆ ಕುಳಿತರೆ ಮುಂದೆ ಒಂದು ಬಡ್ತಿ ಪಡೆಯಲೂ ಸಾಧ್ಯವಾಗುವುದಿಲ್ಲ ಎಂದು ಬಹಿರಂಗವಾಗಿ  ಸರ್ಕಾರದ ವಿರುದ್ಧ ತೊಡೆತಟ್ಟಿದ್ದಾರೆ. ಒಂದು ವೇಳೆ ಸರ್ಕಾರ ಹಠಕ್ಕೆ ಬಿದ್ದು ಕಾಯ್ದೆ ಜಾರಿ ಮಾಡಿದರೆ 8 ಲಕ್ಷ ಸರ್ಕಾರಿ ನೌಕರರ ಕುಟುಂಬಗಳು ಬೆಂಗಳೂರು ತಲುಪಲಿವೆ. ಅಂತೆಯೇ ಮುಂದಿನ ಚುನಾವಣೆಯಲ್ಲಿ ಸಾಮರ್ಥ್ಯ  ತೋರಿಸಲಿದ್ದೇವೆ ಎಂದು ಸವಾಲು ಹಾಕಿದ್ದಾರೆ. ಅಂತೆಯೇ ನಾವು ಪರಿಶಿಷ್ಟ ಜಾತಿ ಮತ್ತು ಪಂಗಡದವರ ವಿರೋಧಿಗಳಲ್ಲ ಎಂದು ಹೇಳಿರುವ ನೌಕರರು "ಅವರಿಗೆ ಬಡ್ತಿ ನೀಡುವಾಗ ಶೇ.18 ಮೀಸಲು ಕೊಡುವುದಕ್ಕೂ ನಮ್ಮ  ವಿರೋಧವಿಲ್ಲ. ಆದರೆ ಶೇ.18ಕ್ಕಿಂತ ಹೆಚ್ಚು ಮೀಸಲು ನೀಡುವುದಕ್ಕೆ ವಿರೋಧವಿದೆ. ಸುಪ್ರೀಂಕೋರ್ಟ್ ಆದೇಶ ಜಾರಿಗೊಳಿಸದೇ ಅದನ್ನು ಅಸಿಂಧುಗೊಳಿಸಲು ಹೊರಟರೆ ನಾವು ಸಹಿಸುವುದಿಲ್ಲ ಎಂದು ತಮ್ಮ ಆಕ್ರೋಶ  ವ್ಯಕ್ತಪಡಿಸಿದರು.
ಅಂತೆಯೇ ಇನ್ನು ಹದಿನೈದು ದಿನಗಳಲ್ಲಿ ಎಲ್ಲ 63 ಇಲಾಖೆ, 60 ನಿಗಮ, ಮಂಡಳಿಗಳಲ್ಲಿನ ನೌಕರರ ಜ್ಯೇಷ್ಠತಾ ಪಟ್ಟಿಯನ್ನು ಪ್ರಕಟಿಸಿ, ಅದರಂತೆ ಬಡ್ತಿ ಪ್ರಕ್ರಿಯೆ ನಡೆಸಬೇಕು. ಇಲ್ಲವಾದಲ್ಲಿ ಹೋರಾಟ ತೀವ್ರಗೊಳಿಸುತ್ತೇವೆ ಎಂದು  ಅಹಿಂಸಾ ಸಂಘಟನೆ ಅಧ್ಯಕ್ಷ ಎಂ. ನಾಗರಾಜ್ ಎಚ್ಚರಿಸಿದರು.
ಸಚಿವ ಜಾರ್ಜ್ ಬೆವರಿಳಿಸಿದ ನೌಕರರ ಸಭೆ
ಇದೇ ವೇಳೆ ಪೂರ್ವ ನಿಗದಿತ ಕಾರ್ಯಕ್ರಮದಂತೆ ಯಾವುದೇ ಸಚಿವರು ಮತ್ತು ಗಣ್ಯರಿಗೆ ಸಭೆಗೆ ಆಹ್ವಾನವಿರಲಿಲ್ಲ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆಯಂತೆ ನೌಕರರ ಮನವಿ ಸ್ವೀಕರಿಸಲು ಆಗಮಿಸಿದ್ದ ಸಚಿವ  ಕೆ.ಜೆ.ಜಾರ್ಜ್, ಸರ್ಕಾರಿ ನೌಕರರ ಆಕ್ರೋಶಕ್ಕೆ ತುತ್ತಾದರು. ಸಭೆಗೆ ಆಗಮಿಸುತ್ತಿದ್ದಂತೆ ಬೇರೆ ಕಾರ್ಯಕ್ರಮದ ನೆಪ ಹೇಳಿ ಮನವಿ ಕೊಡಿ ಎಂದು ಕೇಳಿದ ಜಾರ್ಜ್ ವಿರುದ್ಧ ಕೆಲ ನೌಕರರು ಆಕ್ರೋಶ ವ್ಯಕ್ತಪಡಿಸಿದರು. ತರಾತುರಿ  ಮಾಡಬೇಡಿ, ಭಾಷಣ ಕೇಳಿ ಎಂದು ಸಭೆಯಲ್ಲಿದ್ದವರು ಪಟ್ಟು ಹಿಡಿದರು. ಅಹಿಂಸಾ ಅಧ್ಯಕ್ಷ ಎಂ. ನಾಗರಾಜ್ ಮೊನಚಿನ ಭಾಷಣಕ್ಕೆ ಸಭೆಯಲ್ಲಿದ್ದವರಿಂದ ಬರುತ್ತಿದ್ದ ಉದ್ಘೋಷ ಪ್ರತಿಕ್ರಿಯೆಗೆ ಸಚಿವರು ಇನ್ನೊಂದಿಷ್ಟು ಪೆಚ್ಚಾದರು.  ಕೊನೆಗೆ ಮನವಿ ಸ್ವೀಕರಿಸಿ ಮಾತನಾಡಿದ ಅವರು, ‘ನಾವು ಆರೂವರೆ ಕೋಟಿ ಜನರ ಪರವಾಗಿ ಸರ್ಕಾರ ನಡೆಸುತ್ತಿದ್ದೇವೆ’ ಎಂದಾಗ, ‘ಇಲ್ಲ’ ‘ಇಲ್ಲ’ ಎಂದು ಸಭೆಯಲ್ಲಿದ್ದವರು ಕೈ ಎತ್ತಿ ಕೂಗಿದಾಗ ಪುನಃ ಮುಜುಗರಕ್ಕೊಳಗಾದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com