ನಗರದ ಶೇ.50 ರಷ್ಟು ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆ: ಬಿಬಿಎಂಪಿ

ನಗರದಲ್ಲಿ ಶೇ.50 ರಷ್ಟು ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ಅವರು ಹೇಳಿದ್ದಾರೆ...
ರಸ್ತೆಗಳಲ್ಲಿರುವ ಗುಂಡಿಗಳನ್ನು ಮುಚ್ಚಿರುವ ಕಾರ್ಮಿಕರು
ರಸ್ತೆಗಳಲ್ಲಿರುವ ಗುಂಡಿಗಳನ್ನು ಮುಚ್ಚಿರುವ ಕಾರ್ಮಿಕರು
ಬೆಂಗಳೂರು: ನಗರದಲ್ಲಿ ಶೇ.50 ರಷ್ಟು ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ಅವರು ಹೇಳಿದ್ದಾರೆ. 
ಹಲವು ದಿನಗಳಿಂದ ಸುರಿದ ಧಾರಾಕಾರ ಮಳೆಗೆ ನಗರದ ರಸ್ತೆಗಳು ಗುಂಡಿಮಯಗೊಂಡಿವೆ. ಇದರ ಪರಿಣಾಮ ರಸ್ತೆಗಳಲ್ಲಿ ಭೀಕರ ಅಪಘಾತಗಳು ಎದುರಾದ ಹಿನ್ನಲೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಜನರು ತೀವ್ರ ಆಕ್ರೋಶಗಳನ್ನು ವ್ಯಕ್ತಪಡಿಸತೊಡಗಿದ್ದರು. 
ಈ ಹಿನ್ನಲೆಯಲ್ಲಿ ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಬಿಎಂಪಿ ಅಧಿಕಾರಿಗಳಿಗೆ 15 ದಿನಗಳ ಕಾಲ ಕಾಲಾವಕಾಶವನ್ನು ನೀಡಿ ನಗರದ ರಸ್ತೆಗಳನ್ನು ಸರಿ ಪಡಿಸುವಂತೆ ಸೂಚನೆ ನೀಡಿದ್ದರು. 
ಈ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಮಂಜುನಾಥ್ ಪ್ರಸಾದ್ ಅವರು, ಬಿಬಿಎಂಪಿ ಕಾರ್ಮಿಕರು ಗಡಿಯಾರದ ಮುಳ್ಳುಗಳಂತೆ ಕೆಲಸ ಮಾಡುತ್ತಿದ್ದಾರೆ. ನೀಡಿರುವ ಗಡುವಿನಂತೆ ಕಾರ್ಮಿಕರು ಕೆಲಸಗಳನ್ನು ಮಾಡುತ್ತಿದ್ದಾರೆ. ಸೋಮವಾರದೊಳಗಾಗಿ ನಗರದ ಎಲ್ಲಾ ರಸ್ತೆಗಳ ಗುಂಡಿಗಳನ್ನು ಮುಚ್ಚಲಾಗುತ್ತದೆ ಎಂದು ಹೇಳಿದ್ದಾರೆ. 
ದೀಪಾವಳಿ ಹಬ್ಬದ ರಜೆಯನ್ನೂ ತೆಗೆದುಕೊಳ್ಳದೆ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ನಗರದ ಶೇ.50 ರಸ್ತೆಗಳ ಗುಂಡಿಗಳನ್ನು ಮುಚ್ಚಲಾಗಿದೆ ಎಂದು ತಿಳಿಸಿದ್ದಾರೆ. 
ಇದೇ ವೇಳೆ ರಸ್ತೆ ಗುಂಡಿಗೆ ಮತ್ತಿಬ್ಬರು ಬಲಿಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಅವರು, ಈಗಾಗಲೇ ಮಳೆ ನಿಂತಿದ್ದು, ಬಿಸಿ ಡಾಂಬರು ಮಿಶ್ರಣವನ್ನು ಬಳಕೆ ಮಾಡಲಾಗುತ್ತಿದೆ. ತಣ್ಣಗಿರುವ ಡಾಂಬರು ಮಿಶ್ರಣಗಳ ಬಾಳಿಕೆ ಕೇವಲ 2-3 ತಿಂಗಳಿಗಳ ಕಾಲವಷ್ಟೇ ಇರುತ್ತದೆ. ಬಿಸಿ ಡಾಂಬರು ಮಿಶ್ರಣ ವರ್ಷಗಳ ಕಾಲ ಸಮಸ್ಯೆಗಳನ್ನು ಬಾರದಂತೆ ನೋಡಿಕೊಳ್ಳುತ್ತದೆ. 
ದುರಸ್ಥಿ ಹಂತದಲ್ಲಿರುವ ರಸ್ತೆಗಳ ಕುರಿತಂತೆ ಬಿಬಿಎಂಪಿ ಈಗಾಗಲೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ರಸ್ತೆಗಳನ್ನು ಸರಿಪಡಿಸುವುದು ಗುತ್ತಿಗೆದಾರರ ಕರ್ತವ್ಯವಾಗಿರುತ್ತದೆ. ಸೋಮವಾರದೊಳಗಾಗಿ ಗುತ್ತಿಗೆದಾರರು ತಮ್ಮ ಕರ್ತವ್ಯವನ್ನು ನಿರ್ವಹಿಸದೇ ಹೋದಲ್ಲಿ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com