ಬೆಂಗಳೂರು:ಸಂಶೋಧಕ ಡಾ. ಎಂ. ಎಂ. ಕಲಬುರಗಿ ಹತ್ಯೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ಸಿಐಡಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳನ್ನು ವಿಚಾರಣೆ ನಡೆಸಲು ನ್ಯಾಯಾಲಯದ ಅನುಮತಿ ಪಡೆದುಕೊಂಡಿದೆ.
ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳ ವಿಚಾರಣೆ ಸಂದರ್ಭದಲ್ಲಿ ಡಾ. ಕಲಬುರಗಿ ಹತ್ಯೆ ವಿಚಾರದಲ್ಲಿ ಹೊಸ ಪಾತ್ರಗಳು ಬೆಳಕಿಗೆ ಬಂದಿದ್ದವು. ಅವರ ಹತ್ಯೆಗೆ ಸಂಬಂಧಿಸಿದ ಮಾಹಿತಿಗಳನ್ನು ಎಸ್ ಐಟಿ ಸಿಐಡಿಗೆ ಹಂಚಿಕೆ ಮಾಡಿತ್ತು.ಈ ಹಿನ್ನೆಲೆಯಲ್ಲಿ ಆರೋಪಿಗಳ ವಿಚಾರಣೆಗೆ ಸಿಐಡಿ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿತ್ತು.
ಡಾ. ಕಲಬುರಗಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಆರೋಪಿಗಳಾದ ಅಮೊಲ್ ಕಾಳೆ, ಅಮಿತ್ ದೇಗ್ವಿಕರ್, ಸುಜಿತ್ ಕುಮಾರ್, ಗಣೇಶ್ ಮಿಸ್ಕಿನ್ ಮತ್ತು ರಾಜೇಶ್ ಡಿ. ಬಂಗೇರಾ ಅವರನ್ನು ಆಗಸ್ಟ್ 27 ರಿಂದ 31 ರವರೆಗೂ ವಿಚಾರಣೆ ನಡೆಸಲು ನ್ಯಾಯಾಲಯ ಅನುಮತಿ ನೀಡಿದೆ.
ಭರತ್ ಕುರ್ನೆ ನ್ಯಾಯಾಂಗ ಬಂಧನಕ್ಕೆ
ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಭರತ್ ಕುರ್ನೆಯನ್ನು ನ್ಯಾಯಾಂಗ ಬಂಧನಕ್ಕೆ ನ್ಯಾಯಾಲಯ ಒಪ್ಪಿಸಿದೆ. ಗುರುವಾರ ಆತನ ಪೊಲೀಸ್ ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಕಸ್ಟಡಿ ಅವಧಿ ವಿಸ್ತರಿಸುವಂತೆ ಎಸ್ ಐಟಿ ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. ಆದಾಗ್ಯೂ, ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
Advertisement