ಹೊಸ ವರ್ಷ ಸಂಭ್ರಮಕ್ಕೆ ದಿನಗಣನೆ ಆರಂಭ, ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಕಟ್ಟೆಚ್ಚರ

ಹೊಸ ವರ್ಷ ಸಂಭ್ರಮಕ್ಕೆ ದಿನಗಣನೆ ಆರಂಭವಾಗಿದ್ದು, ನೂತನ ಸಂವತ್ಸರ ಸ್ವಾಗತಿಸಲು ರಾಜ್ಯ ರಾಜಧಾನಿ ಸಜ್ಜುಗೊಳ್ಳುತ್ತಿದೆ. ಈ ಹಿನ್ನಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳುವ ಸಲುವಾಗಿ ಪೊಲೀಸರು ಕಟ್ಟೆಚ್ಚರವಹಿಸಿದ್ದಾರೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಹೊಸ ವರ್ಷ ಸಂಭ್ರಮಕ್ಕೆ ದಿನಗಣನೆ ಆರಂಭವಾಗಿದ್ದು, ನೂತನ ಸಂವತ್ಸರ ಸ್ವಾಗತಿಸಲು ರಾಜ್ಯ ರಾಜಧಾನಿ ಸಜ್ಜುಗೊಳ್ಳುತ್ತಿದೆ. ಈ ಹಿನ್ನಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳುವ ಸಲುವಾಗಿ ಪೊಲೀಸರು ಕಟ್ಟೆಚ್ಚರವಹಿಸಿದ್ದಾರೆ. 
ಹೊಸ ವರ್ಷಾಚಱಣೆ ವೇಳೆ ಮಹಿಳೆಯರು ಮಕ್ಕು ಮಕ್ಕಳ ರಕ್ಷಣೆಗೆ ಹೆಚ್ಚಿನ ಆದ್ಯತೆ ಕೊಟ್ಟಿರುವ ಪೊಲೀಸರು, ಕಿಡಿಕೇಡಿಗಳಿಗೆ ತಕ್ಕ ಶಾಸ್ತಿ ಮಾಡುವುದಾಗಿ ಎಚ್ಚರ ನೀಡಿದ್ದಾರೆ. 
ಹೊಸ ವರ್ಷಾಚರಣೆ ಹತ್ತಿರ ಬರುತ್ತಿರುವ ಹಿನ್ನಲೆಯಲ್ಲಿ ಭದ್ರತಾ ಕಾರ್ಯಗಳಿಗಾಗಿ ಹಿರಿಯ ಆಧಿಕಾರಿಗಳೊಂದಿಗೆ ನಗರ ಪೊಲೀಸ್ ಆಯುಕ್ತರು ನಿರಂತರವಾಗಿ ಸಮಾಲೋಚನೆ ನಡೆಸುತ್ತಿದ್ದಾರೆ. ಈಗಾಗಲೇ ಡಿ.31ರಂದು ರಾತ್ರಿ ನಗರದ ಭದ್ರತೆ ಕುರಿತು ಈಗಾಗಲೇ ನೀಲ ನಕ್ಷೆ ಸಿದ್ಧಪಡಿಸಿದ್ದಾರೆ. 
ಡಿ.31ರ ರಾತ್ರಿ ಪೇದೆಗಳೂ ಸೇರಿದಂತೆ ನಾಲ್ವರು ಹೆಚ್ಚುವರಿ ಆಯುಕ್ತರು, 19 ಡಿಸಿಪಿಗಳು ಸೇರಿದಂತೆ ಸುಮಾರು 15 ಸಾವಿರಕ್ಕೂ ಹೆಚ್ಚು ಪೊಲೀಸರು ಭದ್ರತೆಯಲ್ಲಿ ನಿರತರಾಗಲಿದ್ದಾರೆ. ಹಾಗೆಯೇ ನಗರ ಮತ್ತು ರಾಜ್ಯ ಸಶಸ್ತ್ರ ಮೀಸಲು ಪಡೆಗಳು ಕೂಡ ಭದ್ರತೆಯನ್ನು ನೀಡಲಿವೆ. 
ಸಂಭ್ರಮಾಚರಣೆಗೆ ಕೇಂದ್ರ ಬಿಂದುವಾಗಿರುವ ಎಂ.ಜಿ.ರಸ್ತೆ, ಬ್ರಿಗೇಡ್ ಹಾಗೂ ಚರ್ಚ್ ಸ್ಟ್ರೀಟ್ ಗಳ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟು, ಪಶ್ಚಿಮ ವಿಭಾಗದ ಹೆಚ್ಚುವರಿ ಆಯುಕ್ತ ಬಿ.ಕೆ.ಸಿಂಗ್ ನೇತೃತ್ವದಲ್ಲಿ 500 ಮಹಿಳಾ ಸಿಬ್ಬಂದಿ ಸೇರಿ 2 ಸಾವಿರ ಪೊಲೀಸರನ್ನಿ ನಿಯೋಜನೆಗೊಳ್ಳಲಿದ್ದಾರೆ. ಹಾಗೆಯೇ 300ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಹಾಗೂ ವಾಚ್ ಟವರ್ ಗಳನ್ನು ನಿರ್ಮಿಸಿ ಪ್ರತಿಯೊಬ್ಬರ ಚಲನವಲನಗಳ ಮೇಲೆ ನಿಗಾವಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 
ನಗರದ ಎಲ್ಲಾ ಮೇಲ್ಸೇತುವೆಗಳು ಹಾಗೂ ಎಂ.ಜಿ.ರಸ್ತೆ ವ್ಯಾಪ್ತಿ ಡಿಸೆಂಬರ್ 31ರ ಮಧ್ಯಾಹ್ನ ರಿಂದ ಜನವರಿ1ರ ಬೆಳಿಗ್ಗೆ 6ರವರೆಗೆ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ ಎಂದು ತಿಳಿದುಬಂದಿದೆ. 
ಸಂಭ್ರಮಾಚರಣೆ ಮತ್ತಿನಲ್ಲಿ ಕೆಲವರು ಮದ್ಯ ಸೇವಿಸಿ ವಾಹನ ಚಲಾಯಿಸಬಹುದು. ಇದರಿಂದ ಮೇಲ್ಸೇತುವೆಗಳಲ್ಲಿ ಅಪಘಾತಕ್ಕೂ ಕಾರಣವಾಗಲಿದೆ. ಇನ್ನು ಕೆಲ ಕಿಡಿಗೇಡಿಗಳು ಆಚರಣೆ ನೆಪದಲ್ಲಿ ಪಾನಮತ್ತರಾಗಿ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ಚಲಾಯಿಸಿ ನಾಗರಿಕರಿಗೆ ತೊಂದರೆಯುಂಟು ಮಾಡುವ ಸಾಧ್ಯತೆಗಳಿವೆ. ಈ ಹಿನ್ನಲೆಯಲ್ಲಿ ಮೈಸೂರು ರಸ್ತೆ, ಹೊಸೂರು, ಯಶವಂತಪುರ, ರಿಚ್ಮಂಡ್ ಸರ್ಕರ್ ಹಾಗೂ ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ಪ್ರಮುಖ ಮೇಲ್ಸೇತುವೆಗಳ ಮೇಲೆ ವಾಹನಗಳ ಸಂಚಾರ ಬಂದ್ ಆಗಲಿದೆ. ಆದರೆ, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ಪ್ರಯಾಣಿಕರಿಗೆ ಅಡಚಣೆಯಾಗದಂತೆ ಪೊಲೀಸರು ವ್ಯವಸ್ಥೆಗಳನ್ನು ಕಲ್ಪಿಸಲಿದ್ದಾರೆ. ಸಂಭ್ರಮಾಚರಣೆ ನಡೆಯುವ ಕಾರಣ ಎಂ.ಜಿ.ರಸ್ತೆ, ಬ್ರಿಗೇಡ್ ಹಾಗೂ ಚರ್ಚ್ ಸ್ಟ್ರೀಟ್ ಗಳಿಗೆ ವಾಹನಗಳ ಓಡಾಟಕ್ಕೆ ಬ್ರೇಕ್ ಬೀಳಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com