ಮಂಗಳೂರು: ಕೇರಳದಲ್ಲಿ ಈಗಾಗಲೇ 10 ಮಂದಿಯನ್ನು ಬಲಿ ಪಡೆದ ನಿಫಾ ಸೋಂಕು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹರಡಿರುವ ಶಂಕೆ ವ್ಯಕ್ತವಾಗಿದೆ.
ಇಂದು ನಗರದ ಖಾಸಗಿ ಆಸ್ಪತ್ರೆ ಮತ್ತು ಸರ್ಕಾರಿ ಆಸ್ಪತ್ರೆಯಿಂದ ತಲಾ ಒಂದು ಶಂಕಿತ ನಿಫಾ ಪತ್ತೆಯಾಗಿದ್ದು, ಆ ಇಬ್ಬರು ರೋಗಿಯ ಗಂಟಲು ದ್ರವದ ಮಾದರಿಯನ್ನು ಮಣಿಪಾಲ ಪ್ರಯೋಗಾಲಕ್ಕೆ ಕಳುಹಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಇದು ನಿಫಾ ಸೋಂಕು ಇರಬಹುದು ಎಂಬ ಶಂಕೆ ವ್ಯಕ್ತವಾಗಿದ್ದರಿಂದ ಇಬ್ಬರು ರೋಗಿಗಳ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಆದರೆ, ಇದುವರೆಗೆ ಪ್ರಯೋಗಾಲಯದ ವರದಿ ಬಂದಿಲ್ಲ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ರಾಮಕೃಷ್ಣರಾವ್ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಒಬ್ಬ ರೋಗಿ ಕೇರಳದಿಂದ ಇಲ್ಲಿಗೆ ಬಂದಿದ್ದು, ಅವರ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇನ್ನೊಬ್ಬ ರೋಗಿ ಸ್ಥಳೀಯ ವ್ಯಕ್ತಿ. ಆದರೆ, ಇದುವರೆಗೂ ಜಿಲ್ಲೆಯಲ್ಲಿ ನಿಫಾ ಪ್ರಕರಣ ದೃಢಪಟ್ಟಿಲ್ಲ ಎಂದು ಡಾ.ರಾಮಕೃಷ್ಣರಾವ್ ಅವರು ಹೇಳಿದ್ದಾರೆ.
ರೋಗಿಗಳ ರಕ್ತದ ಮಾದರಿಯಲ್ಲಿ ಪಾಸಿಟೀವ್ ಬಂದರೆ ಪುಣೆಯ ಪ್ರಯೋಗಾಲಯಕ್ಕೆ ಮಾದರಿ ರವಾನಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.