ಬೆಂಗಳೂರು: ಹೆಚ್1ಎನ್1 ಮಹಾಮಾರಿಗೆ ರಾಜ್ಯದಲ್ಲಿ ಈ ವರೆಗೂ ಒಟ್ಟು 8 ಮಂದಿ ಬಲಿಯಾಗಿದ್ದಾರೆಂದು ಬುಧವಾರ ತಿಳಿದುಬಂದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಾಗೂ ಬಳ್ಳಾರಿಯಲ್ಲಿ ಹೆಚ್1ಎನ್1 ಜ್ವರಕ್ಕೆ ಇಬ್ಬರು ಬಲಿಯಾಗಿದ್ದಾರೆ.
ಹೆಚ್1ಎನ್1 ನಿಂದಾಗಿ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಮುಂಜಾಗ್ರತೆ ವಹಿಸಿರುವ ಆರೋಗ್ಯ ಇಲಾಖೆಯ ಕಾರ್ಯದರ್ಶಿ ಜಾವೈದ್ ಅಖ್ತರ್ ಅವರು, ಗ್ರಾಮಾಂತರ ಮಟ್ಟದ ಮೇಲ್ವಿಚಾರಣಾ ಸಮಿತಿ ರಚಿಸುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಮಂಗಳವಾರ ಸಂಜೆಯವರೆಗೂ ಹೆಚ್1ಎನ್1ಗೆ 542 ಮಂದಿ ಸಾವನ್ನಪ್ಪಿರುವುದಾಗಿ ಬಿಬಿಎಂಪಿ ಮಾಹಿತಿ ನೀಡಿದೆ. ಇದರಲ್ಲಿ 54 ಮಂದಿ ಬೆಂಗಳೂರು ಗ್ರಾಮಂತರ ಪ್ರದೇಶಗಳಿಗೆ ಸೇರಿದವರಾಗಿದ್ದಾರೆಂದು ತಿಳಿಸಿದೆ.
ಇದಲ್ಲದೆ ರಾಜ್ಯ ಆರೋಗ್ಯ ಇಲಾಖೆ ಮಾರ್ಗಸೂಚಿಗಳನ್ನು ನೀಡಿದ್ದು, ರೋಗಿಗಳು ಹಾಗೂ ಸಾರ್ವಜನಿಕರು ಮಾಸ್ಕ್ ಗಳು ಹಾಗೂ ಇತರೆ ಆರೋಗ್ಯ ಸುರಕ್ಷತಾ ಕಾರ್ಯಗಳನ್ನು ಸೂಕ್ತ ರೀತಿಯಲ್ಲಿ ಬಳಕೆ ಮಾಡಿದರೆ ಸೋಂಕುಗಳು ಹರಡುವುದಿಲ್ಲ ಎಂದು ತಿಳಿಸಿದೆ.