ಬೆಂಗಳೂರು: ಕಳಸಾ ಬಂಡೂರಿ ವಿಚಾರವಾಗಿ ಈಗಾಗಲೇ ಮುಖ್ಯಮಂತ್ರಿಗಳು ಕೇಂದ್ರ ಸಚಿವರ ಜತೆ ಚರ್ಚೆ ನಡೆಸಿದ್ದು,ಒಂದೆಡು ದಿನದಲ್ಲಿ ಸ್ಪಷ್ಟನೆ ಸಿಗಲಿದೆ ಎಂದು ಸಚಿವ ಬಸವರಾಜ್ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಕಳಸಾ ಬಂಡೂರಿ ವಿಚಾರವಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈಗಾಗಲೇ ಜಲಶಕ್ತಿ ಮಂತ್ರಿ ಜತೆ ಮಾತನಾಡಿದ್ದಾರೆ.ಈ ಸಂಬಂಧ ಪತ್ರವನ್ನೂ ಬರೆದಿದ್ದೇವೆ. ಇಂದು ಅಥವಾ ನಾಳೆ ಸ್ಪಷ್ಟೀಕರಣ ಸಿಗುವ ವಿಶ್ವಾಸ ಇದೆ.ಪರಿಸರ ಇಲಾಖೆ ಯೋಜನೆಗೆ ತಡೆ ನೀಡಿರುವುದು ಆದೇಶ ಅಲ್ಲ.ಅದು ಸ್ಪಷ್ಟೀಕರಣ ಪತ್ರ ಅಷ್ಟೇ. ಪರಿಸರ ಇಲಾಖೆಯ ಅನುಮೋದನೆ ಕುಡಿಯುವ ನೀರಿನ ಉದ್ದೇಶಕ್ಕೆ ಸಹಜವಾಗಿಯೇ ಸಿಗುತ್ತದೆ.ನಮ್ಮ ರಾಜ್ಯ ಸರ್ಕಾರದ ಪತ್ರಕ್ಕೆ ಪ್ರತಿಯಾಗಿ ಪರಿಸರ ಇಲಾಖೆ ಆ ಸ್ಪಷ್ಟೀಕರಣ ಪತ್ರ ನೀಡಿತ್ತು.ಆ ಸ್ಪಷ್ಟೀಕರಣ ಪತ್ರವನ್ನು ತಡೆ ಹಿಡಿಯುವಂತೆ ಕೇಂದ್ರ ಪರಿಸರ ಹಾಗೂ ಅರಣ್ಯ ಇಲಾಖೆ ಅಧೀನ ಕಾರ್ಯದರ್ಶಿ ಪತ್ರ ಬರೆದಿದ್ದರು ಎಂದು ವಿವರಿಸಿದರು.
ಈಗ ಕೇಂದ್ರ ಮಂತ್ರಿ ಜತೆ ನಾನೇ ಮಾತುಕತೆ ನಡೆಸಿ ಅಧಿಸೂಚನೆಯ ನಿಯಮವನ್ನು ತಡೆ ಹಿಡಿಯಲು ಸಾಧ್ಯವಿಲ್ಲ ಎಂಬುದನ್ನು ಮನವರಿಕೆ ಮಾಡಿದ್ದೇವೆ. ಜಲಮಂತ್ರಿ ಹಾಗೂ ಪ್ರಕಾಶ್ ಜಾವವ್ಡೇಕರ್ ರನ್ನು ಖುದ್ದು ಭೇಟಿಯಾಗಿ ಈ ಬಗ್ಗೆ ತಿಳಿಸಿದ್ದೇನೆ. ಇಂದು ಅಥವ ನಾಳೆ ಕೇಂದ್ರ ಸಚಿವರಿಂದ ಸ್ಪಷ್ಟೀಕರಣ ಹೊರಬೀಳಲಿದೆ. ಇದಾದ ಬಳಿಕ ಯೋಜನೆಗೆ ವಿವಿಧ ಹಂತಗಳಲ್ಲಿ ಅನುಮೋದನೆಗಳನ್ನು ಪಡೆಯುವ ಅಗತ್ಯ ಇದೆ.ನಂತರ ನಾವು ಯೋಜನೆ ಸಂಬಂಧ ಡಿಪಿಆರ್ ಸಲ್ಲಿಸಬೇಕಾಗಿದೆ.ಎಲ್ಲಾ ಯೋಜನೆಗಳಿಗೂ ಇದೇ ನಿಯಮ ಅನುಸರಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಬೊಮ್ಮಾಯಿ ಹೇಳಿಕೆ ನೀಡಿದ ಬೆನ್ನಲ್ಲೇ ಕೇಂದ್ರ ಸರ್ಕಾರ ರಾಜ್ಯ ಸರ್ಕಾರ ಸ್ಪಷ್ಟೀಕರಣ ಪತ್ರ ರವಾನಿಸಿದ್ದು, ಮಹಾದಾಯಿ ನ್ಯಾಯಾಧಿಕರಣ ತೀರ್ಪು ಕುಡಿಯುವ ನೀರಿನ ಸಂಬಂಧದ್ದಾಗಿದೆ. ಹೀಗಾಗಿ ನ್ಯಾಯಾಧೀಕರಣ ತೀರ್ಪನಿ ಅಧಿಸೂಚನೆ ಬಳಿಕ ಅರಣ್ಯ ಹಾಗೂ ಪರಿಸರ ಇಲಾಖೆ ಹಾಗೂ ವನ್ಯಜೀವಿ ಮಂಡಳಿಯಿಂದ ಅನುಮತಿ ಪಡೆದು ಕಾಮಗಾರಿ ನಡೆಸಬಹುದು ಎಂದು ಪತ್ರದಲ್ಲಿ ವಿವರಣೆ ನೀಡಲಾಗಿದೆ. ಡಿಸೆಂಬರ್ 19ರಂದು ರಾಜ್ಯಕ್ಕೆ ಕೇಂದ್ರ ಸರ್ಕಾರ ಪತ್ರ ಬರೆದು ಮಹದಾಯಿ ನದಿ ನೀರು ಹಂಚಿಕೆ ಬಳಿಕ ಕಳಸಾ-ಬಂಡೂರಿ ನಾಲಾ ಕಾಮಗಾರಿ ಕೈಗೊಳ್ಳುವುದಕ್ಕೆ ತಡೆ ನೀಡಲಾಗಿದೆ ಎಂದು ಸೂಚಿಸಿದ್ದರು. ಆದರೀಗ ಕಾಮಗಾರಿ ನಡೆಸಬಹುದು ಅದು ಅಧಿಕೃತ ಅಧಿಸೂಚನೆ ಹಾಗೂ ಸಕ್ಷಮ ಪ್ರಾಧಿಕಾರಗಳಿಂದ ಅನುಮತಿ ಪಡೆದು ಎಂದು ಪತ್ರದಲ್ಲಿ ಮಾಹಿತಿ ನೀಡಲಾಗಿದೆ.
Advertisement