ಬೆಂಗಳೂರು: ಕಾರು ಚಾಲಕನನ್ನು ಜೀವಂತವಾಗಿ ಸುಟ್ಟುಹಾಕಿದ್ದ ಆರೋಪಿಗಳ ಮೇಲೆ ಫೈರಿಂಗ್

ಕಾರು ಚಾಲಕನೋರ್ವನನ್ನು ಜೀವಂತವಾಗಿ ಸುಟ್ಟು ಕೊಲೆ ಮಾಡಿದ್ದ ಆರೋಪಿಗಳ ಮೇಲೆ ಪೊಲೀಸರು ಗುಂಡು ಹಾರಿಸಿದ...
ಆಸ್ಪತ್ರೆಯಲ್ಲಿ ಬಂಧಿತ ಆರೋಪಿ
ಆಸ್ಪತ್ರೆಯಲ್ಲಿ ಬಂಧಿತ ಆರೋಪಿ
ಬೆಂಗಳೂರು: ಕಾರು ಚಾಲಕನೋರ್ವನನ್ನು ಜೀವಂತವಾಗಿ ಸುಟ್ಟು ಕೊಲೆ ಮಾಡಿದ್ದ ಆರೋಪಿಗಳ ಮೇಲೆ ಪೊಲೀಸರು ಗುಂಡು ಹಾರಿಸಿದ ಘಟನೆ ನೆಲಮಂಗಲದ ಹ್ಯಾಬಿಡೇಟ್ ಲೇಔಟ್ ನಲ್ಲಿ ನಡೆದಿದೆ.
ಹೇಮಂತ್ ಸಾಗರ್ ಹಾಗೂ ವಿನೋದ್ ಕುಮಾರ್  ಎಂಬ ಇಬ್ಬರೂ ಆರೋಪಿಗಳ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ.
ಸೋಮವಾರ ನೆಲಮಂಗಲ ತಾಲೂಕಿನ ಮಲ್ಲರಬಾಣವಾಡಿಯಲ್ಲಿ ಹೆಬ್ಬಗೋಡಿ ಮೂಲದ ಓಲಾ ಕಾರು ಚಾಲಕ ಕೆಂಪೇಗೌಡ ಎಂಬಾತನನ್ನು ದುಷ್ಕರ್ಮಿಗಳು ಹತ್ಯೆ ಮಾಡಿ ಕಾರು ತೆಗೆದುಕೊಂಡು ಪರಾರಿಯಾಗಿರುವ ಕುರಿತು ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೂರು ದಾಖಲಾಗಿತ್ತು.
ಆರೋಪಿಗಳು ಸೊಂಡೆಕೊಪ್ಪದಿಂದ ನೆಲಮಂಗಲಕ್ಕೆ ಬರುತ್ತಿರುವುದರ ಕುರಿತು ಖಚಿತ ಮಾಹಿತಿ ಪಡೆದಿದ್ದ ನೆಲಮಂಗಲ ಸಿಪಿಐ ಅನಿಲ್ ಕುಮಾರ್ ಅವರ ನೇತೃತ್ವದ ತಂಡ, ನಿನ್ನೆ ತಡರಾತ್ರಿ ಸುಮಾರು 1.45 ಗಂಟೆಗೆ ನೆಲಮಂಗಲದ ಟೌನ್ ಗಣೇಶ ಗುಡಿ ಹತ್ತಿರ ಆರೋಪಿಗಳಿಗಾಗಿ ಕಾಯುತ್ತಿದ್ದರು. 
ಆ ಕಡೆಯಿಂದ ಬುಲೆಟ್ ಬೈಕ್ ಮೇಲೆ ಬರುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಅಡ್ಡಗಟ್ಟಿ ನಿಲ್ಲಿಸಲು ಪ್ರಯತ್ನಿಸಿದಾಗ ಅವರು ಹ್ಯಾಬಿಡೇಟ್ ಲೇಔಟ್ ಕಡೆಗೆ ಮಾರ್ಗ ಬದಲಾಯಿಸಿದ್ದರು. ಅವರನ್ನು ಹಿಂಬಾಲಿಸಿ ಬಂಧಿಸಲು ಮುಂದಾದಾಗ ಪೊಲೀಸರ ಮೇಲೆಯೇ ಆರೋಪಿಗಳು ಹಲ್ಲೆ ನಡೆಸಿದ್ದಾರೆ. ನಂತರ ಪೊಲೀಸರು, ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಆರೋಪಿಗಳಿಗೆ ಶರಣಾಗುವಂತೆ ಸೂಚಿಸಿದರೂ, ಅವರು ಒಪ್ಪದಿದ್ದಾಗ ಅವರ ಕಾಲಿಗೆ ಗುಂಡು ಹಾರಿಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 
ಘಟನೆಯಲ್ಲಿ ನೆಲಮಂಗಲ ಪಿಎಸ್ಐ ನವೀನ್ ಕುಮಾರ್ ಅವರಿಗೆ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com