ಕಲಬುರಗಿ: ಪಶುವೈದ್ಯೆ ಅತ್ಯಾಚಾರ ಬೆನ್ನಲ್ಲೇ ರಾಜ್ಯದಲ್ಲೂ ಹೇಯಕೃತ್ಯ, ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ, ಕೊಲೆ 

ಹೈದ್ರಾಬಾದಿನಲ್ಲಿ ಪಶು ವೈದ್ಯೆ ಪ್ರಿಯಾಂಕಾ ರೆಡ್ಡಿ ಮೇಲೆ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶಾದ್ಯಂತ ಆಕ್ರೋಶ ಮಡುಗಟ್ಟಿರುವಂತೆ ಜಿಲ್ಲೆಯ ಚಿಂಚೊಳಿ ತಾಲೂಕಿನ ಯಾಕಾಪುರ ಗ್ರಾಮದಲ್ಲಿ ಏಳು ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಲಾಗಿದೆ.
ಆರೋಪಿ ಯಲ್ಲಾಲಿಂಗ
ಆರೋಪಿ ಯಲ್ಲಾಲಿಂಗ

ಕಲಬುರಗಿ: ಹೈದ್ರಾಬಾದಿನಲ್ಲಿ ಪಶು ವೈದ್ಯೆ ಪ್ರಿಯಾಂಕಾ ರೆಡ್ಡಿ ಮೇಲೆ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶಾದ್ಯಂತ ಆಕ್ರೋಶ ಮಡುಗಟ್ಟಿರುವಂತೆ ಜಿಲ್ಲೆಯ ಚಿಂಚೊಳಿ ತಾಲೂಕಿನ ಯಾಕಾಪುರ ಗ್ರಾಮದಲ್ಲಿ ಏಳು ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಲಾಗಿದೆ.

ಆರೋಪಿಯನ್ನು ಪೊಲೀಸ್ ವಶಕ್ಕೆ ಪಡೆದಿದ್ದು, ಈ ಘಟನೆಯನ್ನು ಖಂಡಿಸಿ ಸೂಳೆಪೇಟೆಯಲ್ಲಿ ಮಂಗಳವಾರ ಬಂದ್ ಮಾಡಲಾಗಿತ್ತು. ಹೇಯ ಕೃತ್ಯದ ವಿರುದ್ಧ ಭಾರಿ ಪ್ರತಿಭಟನೆ ಹಿನ್ನೆಲೆಯಲ್ಲಿ  ಬಹುತೇಕ ಅಂಗಡಿ, ಮುಗಟ್ಟುಗಳನ್ನು ಮುಚ್ಚಿದ್ದವು. ವಾಣಿಜ್ಯ, ವ್ಯವಹಾರವನ್ನು ಒಂದು ದಿನದ ಮಟ್ಟಿಗೆ ಸ್ತಬ್ದಗೊಂಡಿತ್ತು.

ಆರೋಪಿಯನ್ನು ಒಂದು ವಾರ ಕಾಲ ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಲಾಗಿದೆ. ಹತ್ಯೆಗೊಳಗಾದ ಬಾಲಕಿಯ ಮೃತದೇಹವನ್ನು ಮಂಗಳವಾರ ಸಂಜೆ ಅಂತ್ಯಸಂಸ್ಕಾರ ಮಾಡಲಾಯಿತು. ಎರಡನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಬಾಲಕಿಗೆ ಚಾಕೊಲೆಟ್ ಕೊಡಿಸುವ ನೆಪದಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದ ಆರೋಪಿ ಯಲ್ಲಾಲಿಂಗಾ, ಯಾರೂ ಇಲ್ಲದ ಅಂಗನವಾಡಿ ಕೇಂದ್ರದ ಬಳಿ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಬಳಿಕ ಆಕೆಯನ್ನು ಹತ್ಯೆ ಮಾಡಿದ್ದಾನೆ.

ಶಾಲೆಯಿಂದ ಮರಳಿ ಮನೆಗೆ ಬಾರದ ಬಾಲಕಿ ಕೊನೆಯ ಬಾರಿ ಯಕ್ಕಲಿಂಗನ ಜೊತೆಗೆ ಇರುವುದನ್ನು ನೋಡಿದ ಕೆಲವರು ಪೋಷಕರಿಗೆ ಮಾಹಿತಿ ನೀಡಿದ್ದಾರೆ. ನಂತರ ಅಂಗನವಾಡಿ ಕೇಂದ್ರಕ್ಕೆ ಹೋಗಿ ನೋಡಿದ್ದಾಗ ಬಾಲಕಿಯ ಮೃತದೇಹ ಪತ್ತೆಯಾಗಿದೆ. ನಂತರ ಪೋಷಕರು ಹಾಗೂ ಸ್ಥಳೀಯರು ಆರೋಪಿಯ ಮನೆಗೆ ಹೋದಾಗ  ಆತ ಭಯಭೀತಿಗೊಂಡಿರುವುದು ಕಂಡುಬಂದಿದೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಆರೋಪಿ ಯಲ್ಲಾಲಿಂಗವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗೆ  ಮದುವೆಯಾಗಿದ್ದು, ಮೂವರು ಮಕ್ಕಳಿದ್ದಾರೆ.

ಈ ಹೇಯ ಘಟನೆಯನ್ನು ಖಂಡಿಸಿರುವ ಜನವಾದಿ ಮಹಿಳಾ ಸಂಘಟನೆಯ ಉಪಾಧ್ಯಕ್ಷೆ ನೀಲಾ ಕೆ, ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಸಂಸದ ಡಾ. ಉಮೇಶ್ ಜಾದವ್ ಮಂಗಳವಾರ ಲೋಕಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸಿದ್ದು, ಯಾಕಪುರ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟದಿಂದ ಇಂತಹ ಘಟನೆಗಳು ನಡೆಯುತ್ತಿದ್ದು, ಸರ್ಕಾರ ಅಕ್ರಮ ಮದ್ಯ  ಮಾರಾಟ ಹಾಗೂ ಆರೋಪಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com