ಬೆಂಗಳೂರು: ಕೊರೋನಾ ಲಾಕ್'ಡೌನ್ ಪರಿಣಾಮ ಕಳೆದೆರಡು ತಿಂಗಳುಗಳಿಂದ ಬಂದ್ ಆಗಿದ್ದ ಮೃಗಾಲಯಗಳು ಜೂನ್.8 ರಿಂದ ಪುನರಾರಂಭಗೊಳ್ಳಲಿವೆ.
ಮೃಗಾಲಯಗಳನ್ನು ತೆರೆಯಲು ಸರ್ಕಾರ ಹಾಗೂ ಕರ್ನಾಟಕದ ಮೃಗಾಲಯ ಪ್ರಾಧಿಕಾರ (ಜೆಡ್ಎಕೆ) ಚಿಂತನೆ ನಡೆಸುತ್ತಿದ್ದು, ಈ ಕುರಿತು ಶೀಘ್ರದಲ್ಲಿಯೇ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡುವುದಾಗಿ ತಿಳಿಸಿವೆ.
ಜೂನ್.8ರಿಂದ ಮೃಗಾಲಯಗಳನ್ನು ಪುನರಾರಂಭಿಸಲು ನಿರ್ಧರಿಸಲಾಗಿದೆ. ಶೀಘ್ರದಲ್ಲಿಯೇ ಯಾವುದಕ್ಕೆ ಅನುಮತಿ ನೀಡಲಾಗಿದೆ? ಯಾವುದಕ್ಕೆ ಇಲ್ಲ ಎಂಬುದನ್ನು ತಿಳಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಈ ಹಿಂಗೆ ಮೃಗಾಲಯ ಪುನರಾರಂಭಿಸುವುದಾಗಿ ಮೈಸೂರು ಮೃಗಾಲಯ ತಿಳಿಸಿದ್ದು, ನಿಯಂತ್ರಿತ ಜನರಿಗಷ್ಟೇ ಮೃಗಾಲಯ ಪ್ರವೇಶಕ್ಕೆ ಅನುಮತಿ ನೀಡಲಿದ್ದು, ಭೇಟಿಗೆ ಬರುವ ಜನರ ಚಟುವಟಿಕೆಗಳ ಮೇಲೆ ಕಣ್ಗಾವಲಿರಿಸಲಾಗುತ್ತದೆ ಎಂದ ಹೇಳಿತ್ತು.
ಆದರೆ, ಈ ಬಗ್ಗೆ ಬನ್ನೇರುಘಟ್ಟ ಜೈವಿಕ ಉದ್ಯಾನವನ ಮಾತ್ರ ಯಾವುದೇ ರೀತಿಯ ಹೇಳಿಕೆಯನ್ನೂ ಬಿಡುಗಡೆ ಮಾಡಿಲ್ಲ. ಉದ್ಯಾನವನ ತೆರೆಯಲು ನಾವು ಸಿದ್ಧರಿದ್ದೇವೆ. ಆದರೆ ಆನ್'ಲೈನ್ ಮೂಲಕವಷ್ಟೇ ಟಿಕೆಟ್ ವಿತರಿಸಲಾಗುತ್ತದೆ. ಗ್ರೂಪ್ ಬುಕ್ಕಿಂಗ್ ಗಳಿಗೆ ಅನುಮತಿಯಿಲ್ಲ. ಕುಟುಂಬ ಸಮೇತರಾಗಿ ಬರುವವರನ್ನೂ ಕೂಡ ಗುಂಪುಗಳೆಂದೇ ಪರಿಗಣಿಸಲಾಗುತ್ತದೆ. ಎಸಿ ಸಫಾರಿ ಬಸ್ ಗಳ ಸಂಚಾರ ಇರುವುದಿಲ್ಲ. ಸಫಾರಿಗೆ ತೆರಳುವ ಜನರ ಸಂಖ್ಯೆಯನ್ನು ನಿಯಂತ್ರಿಸಲಾಗುತ್ತದೆ. ಜೀಪ್ ಗಳಲ್ಲಿಯೂ ಜನರ ಸಂಖ್ಯೆಯನ್ನು ಇಳಿಕೆ ಮಾಡಲಾಗುತ್ತದೆ ಎಂದಿದೆ.
ಶೀಘ್ರದಲ್ಲೇ ಮೃಗಾಲಯ ತೆರೆಯಲು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗುತ್ತದೆ. ಅರಣ್ಯ ಪ್ರದೇಶಗಳಲ್ಲಿ ಸಫಾರಿಗೆ ಅವಕಾಶ ನೀಡುವುದಿಲ್ಲ. ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಅನುಸಾರ ನಿಯಮ ರೂಪಿಸಲಾಗುತ್ತದೆ. ಮುಂದಿನ ಆದೇಶದವರೆಗೂ ಅರಣ್ಯ ಪ್ರದೇಶಗಳಿಗೆ ಜನರ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು ಅರಣ್ಯ ಸಚಿವ ಆನಂದ್ ಸಿಂಗ್ ಅವರು ಹೇಳಿದ್ದಾರೆ.
Advertisement