ಬೆಂಗಳೂರು: ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದ ಹೆಸರಿನಲ್ಲಿ ನಗರದ ಕೆಂಪೇಗೌಡ ಬಡಾವಣೆಯಲ್ಲಿರುವ ಬಿಡಿಎ ನಿವೇಶನಗಳ ನಕಲಿ ಹಕ್ಕು ಪತ್ರವನ್ನ ಸೃಷ್ಟಿಸಿಕೊಂಡು ಸಾರ್ವಜನಿಕರಿಗೆ ಹಂಚಿಕೆ ಮಾಡುತ್ತಿದ್ದ ಜಾಲವೊಂದನ್ನ ಪ್ರಾಧಿಕಾರದ ಜಾಗೃತ ದಳ ಪತ್ತೆ ಹಚ್ಚಿದೆ.
ಕಡಿಮೆ ಬೆಲೆಗೆ ಸೈಟ್ ಕೊಡಿಸಿವುದಾಗಿ ನಕಲಿ ದಾಖಲಾತಿಗಳನ್ನು ನೀಡಿರುವ ಈ ತಂಡ 1000ಕ್ಕೂ ಹೆಚ್ಚು ಮಂದಿಗೆ ವಂಚಿಸಿರುವುದಾಗಿ ತಿಳಿದುಬಂದಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಉತ್ತರ ಕರ್ನಾಟಕ ಪ್ರದೇಶ ರೈತ ಸಂಘದ ರಾಜ್ಯಾಧ್ಯಕ್ಷ ವಿಜಯಾನಂದಸ್ವಾಮಿ ಮತ್ತು ರಮೇಶ್ ಹಾಗೂ ವಂಚನೆಗೆ ಬಳಸಿದ್ದ ರಬ್ವರ್ ಸ್ಟಾಂಪ್, ಛಾಪಾ ಕಾಗದ ಇತ್ಯಾದಿ ದಾಖಲೆಗಳನ್ನ ಬಿಡಿಎ ಕಾರ್ಯಪಡೆ ವಶಕ್ಕೆ ಪಡೆದಿದೆ.ಅಲ್ಲದೇ ವಿಜಯಾನಂದಸ್ವಾಮಿ ವಿರುದ್ಧ ಶೇಷಾದ್ರಿಪುರಂ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡಲಾಗಿದೆ.
ಉತ್ತರ ಕರ್ನಾಟಕ ಪ್ರದೇಶ ರೈತ ಸಂಘದ ರಾಜ್ಯಾಧ್ಯಕ್ಷ ವಿಜಯಾನಂದಸ್ವಾಮಿ, ಬೆಂಗಳೂರಿನ ರಮೇಶ್ ಎಂಬವನ ಜೊತೆ ಸೇರಿಕೊಂಡು ಕೆಂಪೇಗೌಡ ಬಡಾವಣೆಯಲ್ಲಿರುವ ಬಿಡಿಎ ನಿವೇಶಗಳನ್ನ ಕಡಿಮೆ ದರದಲ್ಲಿ ಹಂಚಿಕೆ ಮಾಡಿಸಿಕೊಡುತ್ತೇನೆ ಎಂದು ಹಲವರಿಗೆ ನಂಬಿಸಿದ್ದಾನೆ. ಇದಕ್ಕಾಗಿ ತನ್ನ ಸಂಘಕ್ಕೆ ನೋಂದಾಯಿಸಿಕೊಳ್ಳಬೇಕು ಎಂದು ಸುಮಾರು 1000 ಮಂದಿಯಿಂದ 15,000 ರೂ. ನಂತೆ ಪಡೆದುಕೊಂಡು ನೋಂದಾಯಿಸಿಕೊಂಡಿದ್ದಾನೆ.
ಅಲ್ಲದೇ ಈ ಪೈಕಿ 50ಕ್ಕೂ ಹೆಚ್ಚು ಜನರಿಂದ 50,000 ದಿಂದ 3 ಲಕ್ಷದವರೆಗೆ ಹಣ ಪಡೆದು ಬಿಡಿಎ ನಿವೇಶನಗಳ ನಕಲಿ ಹಕ್ಕು ಪತ್ರಗಳನ್ನ ತಯಾರಿಸಿ ನೀಡಿದ್ದಾನೆ. ಇದಕ್ಕೆ ತಾನೇ ಬಿಡಿಎ ನಕಲಿ ರಬ್ಬರ್ ಸ್ಟ್ಯಾಂಪ್ ಹಾಗೂ ಬಿಡಿಎ ಆಯುಕ್ತರ ನಕಲಿ ಸಹಿಯನ್ನ ಹಾಕಿದ್ದಾನೆ. ಯಾರಿಗೂ ಗೊತ್ತಿಲ್ಲದಂತೆ ಈ ರೀತಿ ಮಾಡಿದ್ದ ಖದೀಮ ಕೊನೆಗೂ ಸಿಕ್ಕಿಬಿದ್ದಿದ್ದಾನೆ.
Advertisement