ಬೆಂಗಳೂರು: ಅಕ್ರಮ ಸಂಬಂಧ ಹಿನ್ನೆಲೆ ನಾದಿನಿ ಕತ್ತು ಹಿಸುಕಿ ಕೊಲೆಗೈದ ಬಾವನ ಸೆರೆ

ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಇನ್ನೂ ನಾಲ್ಕು ದಿನಗಳಲ್ಲಿ ವಿವಾಹವಾಗಬೇಕಿದ್ದ ನಾದಿನಿಯನ್ನು ಭೀಕರವಾಗಿ ಕೊಲೆಗೈದ‌ ಬಾವನನ್ನು ದಾಬಸ್​ಪೇಟೆ ಪೊಲೀಸರು ಬಂಧಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಇನ್ನೂ ನಾಲ್ಕು ದಿನಗಳಲ್ಲಿ ವಿವಾಹವಾಗಬೇಕಿದ್ದ ನಾದಿನಿಯನ್ನು ಭೀಕರವಾಗಿ ಕೊಲೆಗೈದ‌ ಬಾವನನ್ನು ದಾಬಸ್​ಪೇಟೆ ಪೊಲೀಸರು ಬಂಧಿಸಿದ್ದಾರೆ.

ಶಿರಾ ತಾಲೂಕು ಬಿಜ್ಜನಬೆಳ್ಳ ಮೂಲದ ದೀಪಾ(22) ಎಂಬವರನ್ನು ಕೊಲೆಗೈದ ಕೊರಟಗೆರೆ ತಾಲೂಕಿನ ಕೊಳಾಲ ಹೋಬಳಿಯ ನರಸಾಪುರದ ಗಿರೀಶ್ (32) ಬಂಧಿತ ಆರೋಪಿ.

ದಾಬಸ್​ಪೇಟೆಯ ಸೋಂಪುರ ಹೋಬಳಿಯ ಗುಂಡೇನಹಳ್ಳಿ ಬಳಿ ಯುವತಿಯೊಬ್ಬರ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪ್ರಕರಣ ದಾಖಲಿಸಿ ಕಾರ್ಯಾಚರಣೆ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಯುವತಿ ಹಾಗೂ ಆರೋಪಿ ನಡುವಿನ ಅನ್ಯೋನ್ಯತೆ ಕೊಲೆಗೆ ಕಾರಣವಾಗಿದೆ. ಯುವತಿಗೆ ಮತ್ತೊಬ್ಬನೊಂದಿಗೆ ಮದುವೆ ಸಿದ್ಧತೆ ನಡೆದಿದ್ದನ್ನು ಸಹಿಸದೆ ಕೃತ್ಯ ಎಸಗಿರುವುದಾಗಿ ಆರೋಪಿ ಬಾಯ್ಬಿಟ್ಟಿದ್ದಾನೆ.

ಕೊಲೆಯಾದ ದೀಪಾ ನಗರದ ಅಂದ್ರಹಳ್ಳಿಯಲ್ಲಿ ಅಕ್ಕ- ಭಾವನ ಮನೆಯಲ್ಲಿದ್ದುಕೊಂಡು ಮೆಡಿಕಲ್ ಸ್ಟೋರ್​ನಲ್ಲಿ ಕೆಲಸ ಮಾಡುತ್ತಿದ್ದಳು. ಈ ಮಧ್ಯೆ ದೀಪಾ ಹಾಗೂ ಗಿರೀಶ್ ನಡುವೆ ಸಲುಗೆ ಬೆಳೆದಿತ್ತು.

ಕಳೆದ ಜೂ.14ರಂದು ದೀಪಾಗೆ ಮದುವೆ ನಿಶ್ಚಯವಾಗಿತ್ತು. ಇದರಿಂದ ಕೆರಳಿದ ಆರೋಪಿ, ಜೂ.10ರಂದು ಮದುವೆ ಸಿದ್ಧತೆ ನೆಪದಲ್ಲಿ ದೀಪಾಳನ್ನು ಕರೆದುಕೊಂಡು ತುಮಕೂರಿನ ಕಡೆಗೆ ಹೊರಟಿದ್ದ. ಮಾರ್ಗ ಮಧ್ಯೆ ಗುಂಡೇನಹಳ್ಳಿ ಬಳಿ ಇದೇ ವಿಷಯವಾಗಿ ಇಬ್ಬರ ನಡುವೆ ಜಗಳವಾಗಿದೆ. ಸಿಟ್ಟಿನಲ್ಲಿ ದೀಪಾ ಮುಖಕ್ಕೆ ಗುದ್ದಿದ್ದಾನೆ. ಯುವತಿ ಕುಸಿದು ಬಿದ್ದಿದ್ದಾಳೆ. ಬಳಿಕ ಆಕೆಯ ಕುತ್ತಿಗೆ ಬಿಗಿದು ಹತ್ಯೆಗೈದು ರಸ್ತೆ ಪಕ್ಕದ ಹಳ್ಳಕ್ಕೆ ಮೃತ ದೇಹ ಎಸೆದು ಪರಾರಿಯಾಗಿದ್ದ.

ಮನೆಗೆ ಮರಳಿದ ಗಿರೀಶ್, ಏನೂ ಗೊತ್ತಿಲ್ಲವೆಂಬಂತೆ ನಟಿಸಿದ್ದ. ದೀಪಾ ಕಣ್ಮರೆಯಾಗಿರುವ ನಾಟಕ ಮಾಡಿ ಎಲ್ಲರನ್ನೂ ನಂಬಿಸಿದ್ದ. ಅಲ್ಲದೆ ನಾದಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ದಾಬಸ್ ಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ದನು. ಅನುಮಾನಗೊಂಡ ಪೊಲೀಸರು ಗಿರೀಶ್​ನನ್ನು ವಶಕ್ಕೆ ಪಡೆದು ತನಿಖೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ್ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com