ಬೆಂಗಳೂರು: ಹೆರಿಗೆ ಆಸ್ಪತ್ರೆಯೊಂದರಲ್ಲಿ ಬಿಬಿಎಂಪಿ ನೌಕರನೊಬ್ಬನಲ್ಲಿ ಕೊರೋನಾ ವೈರಸ್ ದೃಢಪಟ್ಟಿದ್ದು, ಆಸ್ಪತ್ರೆಯ ನಿರ್ಲಕ್ಷ್ಯದಿಂದಾಗಿ ನವಜಾತ ಶಿಶುಗಳು ಅಪಾಯಕ್ಕೆ ಸಿಲುಕಿರುವ ಘಟನೆ ಇದೀಗ ಬೆಳಕಿಗೆ ಬಂದಿದೆ.
ಹಲಸೂರಿನಲ್ಲಿರುವ ಬಿಬಿಎಂಪಿ ಹೆರಿಗೆ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ನೌಕರನಲ್ಲಿ ವೈರಸ್ ದೃಢಪಟ್ಟಿದೆ. ಸೋಂಕಿತ ನೌಕರ ಕೆಲ ದಿನಗಳ ಹಿಂದಷ್ಟೇ ಕುಟಂಬಸ್ಥರ ಭೇಟಿ ಮಾಡಲು ಊರಿಗೆ ಹೋಗಿದ್ದ. ಬಸ್ ನಲ್ಲಿ ಮಂಗಳವಾರ ನಗರಕ್ಕೆ ಹಿಂತಿರುಗಿದ್ದ. ಈ ವಿಚಾರ ತಿಳಿದಿದ್ದರೂ ಆಸ್ಪತ್ರೆಯ ಆಡಳಿತ ಆತನನ್ನು ಕ್ವಾರಂಟೈನ್ ನಲ್ಲಿ ಇರಿಸದೆಯೇ ಕರ್ತವ್ಯಕ್ಕೆ ಮರಳಲು ಅವಕಾಶ ಮಾಡಿಕೊಟ್ಟಿದೆ.
ಇದಾದ ಕೆಲವೇ ದಿನಗಳಲ್ಲಿ ವ್ಯಕ್ತಿಯಲ್ಲಿ ಕೊರೋನಾ ಪತ್ತೆಯಾಗಿದೆ. ಇದೀಗ ಆತನಿಂದಾಗಿ 20ಕ್ಕೂ ಹೆಚ್ಚು ಮಂದಿ ಅಪಾಯಕ್ಕೆ ಸಿಲುಕಿದ್ದಾರೆ.
ವ್ಯಕ್ತಿಯನ್ನು ಇದೀಗ ಕೊರೋನಾ ಚಿಕಿತ್ಸೆಗೆ ನಿಯೋಜಿಸಲಾಗಿದ್ದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಇದೀಗ ತಜ್ಞ ವೈದ್ಯರು ಆಸ್ಪತ್ರೆಗೆ ಭೇಟಿ ನೀಡಿದ್ದು ನವಜಾತ ಶಿಶುಗಳು ಹಾಗೂ ತಾಯಿಯಂದಿರನ್ನು ತಪಾಸಣೆ ನಡೆಸುತ್ತಿದ್ದಾರೆ. ಅಲ್ಲದೆ ಆಸ್ಪತ್ರೆಯ ಎಲ್ಲಾ ಸಿಬ್ಬಂದಿಗಳಿಗೂ ಕೊರೋನಾ ಪರೀಕ್ಷೆಗೊಳಪಡಿಸಲಾಗಿದೆ ಎಂದು ತಿಳಿದುಬಂದಿದೆ.
Advertisement