ಬೆಂಗಳೂರು: ತಮ್ಮ ತಮ್ಮ ತವರಿಗೆ ತೆರಳಲು ಬಕಪಕ್ಷಿಗಳಂತೆ ಕಾದು ಕುಳಿತಿರುವ ವಲಸೆ ಕಾರ್ಮಿಕರಿಗೆ ಸರ್ಕಾರ ಕಳುಹಿಸಿದ್ದ ಸಂದೇಶವೊಂದು ಭಾರೀ ಗೊಂದಲ ಹಾಗೂ ಆತಂಕವನ್ನು ಸೃಷ್ಟಿಸಿದ ಘಟನೆ ಮಂಗಳವಾರ ನಡೆಯಿತು.
ನಿನ್ನೆ ಮಧ್ಯಾಹ್ನ 2 ಗಂಟೆ ಸುಮಾರಿಗೆ ವಲಸೆ ಕಾರ್ಮಿಕರಿಗೆ ಸರ್ಕಾರ ಸಂದೇಶವೊಂದನ್ನು ಕಳುಹಿಸಿದ್ದು, ಶ್ರಮಿಕ ರೈಲುಗಳಲ್ಲಿ ಪ್ರಯಾಣಿಸಲು ಇಚ್ಛಿಸುವುದಾದರೆ, ನಿಮ್ಮ ಸೇವಾ ಸಿಂಧು ಅರ್ಜಿಯಲ್ಲಿರುವ ಕಡೆದ ಆರು ಸಂಖ್ಯೆಯನ್ನು ನಮೂದಿಸಿ, ನೋಂದಾವಣಿ ಮಾಡಿಕೊಂಡಿರುವ ಮೊಬೈಲ್ ಸಂಖ್ಯೆಯಿಂದ 161ಕ್ಕೆ ಯೆಸ್ ಎಂದು ಟೈಪ್ ಮಾಡಿ ಕಳುಹಿಸಿ ಎಂದು ತಿಳಿಸಿತ್ತು. ಅಲ್ಲದೆ, ಸಂಜೆ 6 ಗಂಟೆಯೊಳಗಾಗಿ ಪ್ರತಿಕ್ರಿಯೆ ನೀಡಬೇಕೆಂದೂ ಕೂಡ ಗಡುವು ನೀಡಿತ್ತು. JD-MOBKAR ಮೂಲಕ ಆಟೋಮೆಟಿಕ್ ಆಗಿ ವಲಸೆ ಕಾರ್ಮಿಕರಿಗೆ ಸಂದೇಶ ರವಾನೆಯಾಗಿತ್ತು.
ಸರ್ಕಾರ ಈ ಸಂದೇಶ ಬಹುತೇಕ ವಲಸೆ ಕಾರ್ಮಿಕರಿಗೆ ಅರ್ಥವಾಗಿಲ್ಲ. ಎಲ್ಲರೂ ವಿದ್ಯಾವಂತರೇ ಆಗಿರದ ಕಾರಣ ಸಮಸ್ಯೆಗಳು ಎದುರಾಗಿತ್ತು ಎಂದು ಹೇಳಲಾಗುತ್ತಿದೆ.
ಬಹುತೇಕ ವಲಸೆ ಕಾರ್ಮಿಕರು ಅನಕ್ಷರಸ್ಥರಾಗಿದ್ದರಿಂದಾಗಿ ಸಂದೇಶಕ್ಕೆ ಪ್ರತಿಕ್ರಿಯೆ ನೀಡಲು ಅವರಿಗೆ ತಿಳಿದಿರಲಿಲ್ಲ. ಒಂದು ಕುಟುಂಬದಲ್ಲಿ 7 ಮಂದಿ ಇದ್ದರೂ ಒಬ್ಬರು ಮಾತ್ರ ಮೊಬೈಲ್ ಫೋನ್ ಬಳಕೆ ಮಾಡುತ್ತಿದ್ದರು. ಇಂತಹ ಸಂದರ್ಭದಲ್ಲಿ ಜನರ ಪರಿಸ್ಥಿತಿ ಹೇಗಾಗಬೇಕು? ಇದಲ್ಲದೆ, ಬಹುತೇಕ ಮಂದಿಯಲ್ಲಿರುವ ಇಂತಹ ಕಠಿಣ ಸಂದರ್ಭದಲ್ಲಿಯೇ ಮೊಬೈಲ್ ಸಂಖ್ಯೆಗಳಲ್ಲಿ ಹಣ ಅಥವಾ ಬ್ಯಾಟರಿ ಇರುವುದಿಲ್ಲ. ಅಂತಹವರು ಏನು ಮಾಡಬೇಕೆಂದು ಬೆಂಗಳೂರಿನ ವಲಸೆ ಕಾರ್ಮಿಕರು ಗುಂಪೊಂದು ಪ್ರಶ್ನಿಸಿದೆ.
ಸಂದೇಶ ಬರುತ್ತಿದ್ದಂತೆಯೇ ಕೆಲವರು ಗೊಂದಲ ಹಾಗೂ ಆತಂಕಕ್ಕೊಳಗಾಗಿ ಸ್ಥಳೀಯ ಪೊಲೀಸ್ ಠಾಣೆಗಳಿಗೆ ತೆರಳಿದ್ದಾರೆ. ಇನ್ನೂ ಕೆಲವರು ಪ್ರತಿಕ್ರಿಯೆ ನೀಡಿದರು, ಸೇವೆ ಅಂತ್ಯಗೊಂಡಿದೆ ಅಥವಾ ಸಂದೇಶಕ್ಕೆ ಪ್ರತಿಕ್ರಿಯೆ ನೀಡಿದ್ದಕ್ಕೆ ಧನ್ಯವಾದಗಳು ಎಂಬ ಸಂದೇಶ ಬಂದಿತ್ತು. ಕೆಲವರಿಗೆ ತಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ಓದಲು ಬರುತ್ತಿಲ್ಲ. ಇಂತಹ ಕಠಿಣ ಸಂದೇಶಗಳನ್ನು ಹೇಗೆ ತಾನೆ ಓದುತ್ತಾರೆಂದು ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ವಲಸಿಗರೊಂದಿಗೆ ಕೆಲಸ ಮಾಡುವ ನಾಗರಿಕ ಸ್ವಯಂಸೇವಕಿ ದೀಪಾಂಜಲಿಯವರು ಹೇಳಿದ್ದಾರೆ.
ಈ ಕಾರ್ಯಾಚರಣೆಯಿಂದ ಮುಂದೆ ಏನಾಗುತ್ತದೆ ಎಂಬುದು ಯಾರಿಗೂ ತಿಳಿದಿಲ್ಲ. ಇನ್ನೂ ಯಾವ ಯಾವ ನಿಯಮಗಳನ್ನು ಹೇರುತ್ತೀರಿ ಎಂಬುದೂ ಸ್ಪಷ್ಟವಾಗುತ್ತಿಲ್ಲ. ಇನ್ನೂ ಎಷ್ಟು ರೈಲುಗಳು ಬರುತ್ತವೆ, ಎಷ್ಟು ಜನರು ತವರಿಗೆ ತೆರಳುತ್ತಾರೆಂಬುದು ಅರ್ಥವಾಗುತ್ತಿಲ್ಲ ಎಂದು ತಿಳಿಸಿದ್ದಾರೆ.
Advertisement