ಬೆಂಗಳೂರು: ಕಲುಷಿತ ನೀರು, ನೊರೆ, ಬೆಂಕಿ, ವಾಸನೆ ಮೂಲಕವೇ ನಗರ ಮಾತ್ರವಲ್ಲದೇ ರಾಜ್ಯದಲ್ಲೂ ಕುಖ್ಯಾತಿ ಗಳಿಸಿದ್ದ ಬೆಳ್ಳಂದೂರು ಕೆರೆಯಲ್ಲಿ ಬರೊಬ್ಬರಿ 5 ವರ್ಷಗಳ ಬಳಿಕ ಬಾನಾಡಿಗಳ ಕಲರವ ಕೇಳಿಬರುತ್ತಿದೆ.
ಹೌದು.. ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆ ಜನ ಜೀವನವನ್ನು ಅಸ್ತವ್ಯಸ್ಥಗೊಳಿಸಿತ್ತಾದರೂ ಪ್ರಾಕೃತಿಕವಾಗಿ ಒಂದಷ್ಟು ಒಳ್ಳೆಯ ಅಂಶಗಳನ್ನು ಬಿಟ್ಟುಹೋಗಿದೆ. ಈ ಹಿಂದೆ ಕೊಳಚೆ ನೀರು, ರಾಸಾಯನಿಕ ಮಿಶ್ರಣದ ನೊರೆ, ಬೆಂಕಿ ಮತ್ತು ದುರ್ವಾಸನೆ ಮೂಲಕ ಕುಖ್ಯಾತಿ ಗಳಿಸಿದ್ದ ಬೆಳ್ಳಂದೂರು ಕೆರೆ ಇದೀಗ ಮೊದಲ ಬಾರಿಗೆ ಸಕಾರಾತ್ಮಕ ಅಂಶವೊಂದಕ್ಕೆ ಸುದ್ದಿಯಾಗುತ್ತಿದೆ. ಸತತ ಐದು ವರ್ಷಗಳ ಬಳಿಕ ಕೆರೆ ಅಂಗಳಕ್ಕೆ ಹಕ್ಕಿಗಳು ಆಗಮಿಸಿದ್ದು, ಆಹಾರಕ್ಕಾಗಿ ನೀರಿನಲ್ಲಿ ಬೇಟೆಯಾಡುವ ಮನಮೋಹಕ ದೃಶಗಳು ಕಾಣಸಿಗುತ್ತಿವೆ.
ಕೆರೆಯ ಸುತ್ತಲೂ ಹಕ್ಕಿಗಳು ಮೀನಿಗಾಗಿ ನೀರಿನಲ್ಲಿ ಬೇಟೆಯಾಡುವ ದೃಶ್ಯಕಂಡ ಸಾರ್ವಜನಿಕರು ಮನಸ್ಸಿಗೆ ಮುದ ನೀಡುತ್ತಿವೆ. ಇದೇ ಕಾರಣಕ್ಕೆ ಇಲ್ಲಿನ ಸಾರ್ವಜನಿಕರು ಹಕ್ಕಿಗಳಿಗೆ ಆಹಾರ ನೀಡುವ ಕಾರ್ಯ ಮಾಡುತ್ತಿದ್ದಾರೆ. ಸಾಕಷ್ಟು ಹಕ್ಕಿಗಳು ಇದೀಗ ಕೆರೆಯನ್ನು ತಮ್ಮ ಆವಾಸ ಸ್ಥಾನ ಮಾಡಿಕೊಂಡಿದ್ದು, ಪೆಲಿಕನ್, ಎಗ್ರೆಟ್ಸ್, ಕಾರ್ಮೊರಂಟ್ ಮತ್ತು ಕೊಕ್ಕರೆಗಳು ಇಲ್ಲಿ ಹಾರಾಡತೊಡಗಿವೆ.
ತಜ್ಞರು ಹೇಳುವಂತೆ ಈಗ ಸರೋವರದ ನೀರಿನ ಆಳವು ಎರಡು ಅಡಿಗಳಷ್ಟು ಇದ್ದು, ನಗರದಲ್ಲಿ ಸುರಿದ ಭಾರಿ ಮಳೆ ಕೆರೆಗೆ ಒಂದಷ್ಟು ಶುದ್ಧ ನೀರು ಹರಿಯುವಂತೆ ಮಾಡಿದೆ. ಇದರಿಂದ ಇಲ್ಲಿನ ಮೀನಿನ ಸಂತತಿ ಬೆಳವಣಿಗೆಯಾಗಿದ್ದು, ಸಣ್ಣ ಸಣ್ಣ ಮೀನುಗಳು ಹೆಚ್ಚಾಗಿವೆ. ಹೀಗಾಗಿ ಸತತ ಐದು ವರ್ಷಗಳಿ ಬಳಿಕ ಕೆರೆಗೆ ಬಾನಾಡಿಗಳು ವಾಪಸಾಗಿವೆ.
ಇನ್ನು ಬೆಳ್ಳಂದೂರು ಕೆರೆ ಕುರಿತು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್ಜಿಟಿ) ನೇಮಿಸಿದ್ದ ತಜ್ಞರ ಸಮಿತಿ ನೀಡಿದ್ದ ಶಿಫಾರಸ್ಸಿನಂತೆ ಸರ್ಕಾರ ಒಂದಷ್ಟು ಕ್ರಮಗಳನ್ನು ಕೈಗೊಂಡಿದ್ದು ಅದರಂತೆ 150 ಎಂಎಲ್ಡಿ ಒಳಚರಂಡಿ ಸಂಸ್ಕರಣಾ ಘಟಕದ ನಿರ್ಮಾಣ ಪೂರ್ಣಗೊಂಡಿದೆ ಮತ್ತು ಎಲ್ಲಾ ತಿರುವು ಮಾರ್ಗಗಳನ್ನು ಉತ್ತಮವಾಗಿ ನಿರ್ವಹಿಸಲಾಗುತ್ತಿದೆ ಎಂದು ಹೇಳಲಾಗಿದೆ. ಆದರೆ ಈ ಬಗ್ಗೆ ಕೆಲ ಪರಿಸರವಾದಿಗಳ ಚಕಾರವಿದ್ದು, ನಿರ್ವಹಣೆ ಕುರಿತು ಮತ್ತಷ್ಟು ಕಠಿಣ ಕ್ರಮಗಳು ಬೇಕು ಎಂದು ಆಗ್ರಹಿಸುತ್ತಿದ್ದಾರೆ.
ಈ ಬಗ್ಗೆ ಮಾತನಾಡಿರುವ ಎನ್ ಜಿಟಿ ಸದಸ್ಯರೊಬ್ಬರು, ಕೆರೆಗೆ ಹಕ್ಕಿಗಳು ವಾಪಸ್ ಆಗಿರುವುದು ಉತ್ತಮ ಸಂಕೇತ. ಮಳೆಯಿಂದಾಗಿ ಕೆರೆ ಒಂದಷ್ಟು ಶುದ್ಧ ನೀರು ಹರಿದಿದೆ. ಅಂತೆಯೇ ಕೆರೆ ಶುದ್ಧೀಕರಣ ಕಾರ್ಯ ಪ್ರಗತಿಯಲ್ಲಿದ್ದು, ಇನ್ನೂ ಸಾಕಷ್ಟು ಸುಧಾರಣೆ ಬೇಕಿದೆ. ಪ್ರಸ್ತುತ ಸ್ಥಿತಿಯನ್ನು (ಐದು ಅಡಿಗಿಂತ ಕಡಿಮೆ ಆಳವಿರುವ ಆಳವಿಲ್ಲದ ನೀರು) ಮತ್ತು ಮೀನುಗಳ ಲಭ್ಯತೆಯನ್ನು ನೋಡಿದರೆ, ಪಕ್ಷಿಗಳು ಸುಮಾರು 10-15 ದಿನಗಳವರೆಗೆ ಇಲ್ಲಿ ಉಳಿಯುತ್ತವೆ. ಕೆರೆಯಲ್ಲಿ ಮಳೆನೀರು ಮತ್ತು ಮಣ್ಣಿನಿಂದ ತುಂಬಿದೆ ಮತ್ತು ಇದು ಉತ್ತಮ ಸಂಕೇತವಾಗಿದೆ ಎಂದು ಹೇಳಿದರು.
Advertisement