ಬೆಂಗಳೂರು: ಮೊನ್ನೆ ಶುಕ್ರವಾರ ಸುರಿದ ಭಾರೀ ಮಳೆಗೆ ದಕ್ಷಿಣ ಬೆಂಗಳೂರು ನಲುಗಿ ಹೋಗಿದೆ. ಅನೇಕ ಮನೆಗಳಿಗೆ ನೀರು ನುಗ್ಗಿ ಪ್ರವಾಹ ಉಂಟಾಗಿದೆ, ಅಲ್ಲಲ್ಲಿ ವಾಹನಗಳಿಗೆ ಹಾನಿಯಾಗಿದೆ. ಚರಂಡಿ ವ್ಯವಸ್ಥೆಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸರಿಯಾಗಿ ನಿರ್ವಹಿಸುತ್ತಿಲ್ಲ ಎಂದು ಜನರು ಆರೋಪಿಸುತ್ತಿದ್ದಾರೆ.
ಮೊನ್ನೆ ಶುಕ್ರವಾರ ಮಧ್ಯಾಹ್ನ 1.30ರಿಂದ 7 ಗಂಟೆಯವರೆಗೆ 5 ಗಂಟೆಗಳ ಕಾಲ ಸುರಿದ ಸತತ ಮಳೆಯಿಂದ ರಾಜರಾಜೇಶ್ವರಿ ನಗರದಲ್ಲಿ 3 ಅಡಿ ಎತ್ತರದವರೆಗೆ ಪ್ರವಾಹ ಉಂಟಾಗಿದೆ. ಹತ್ತಿರದ ವೃಷಭಾವತಿ ಕಣಿವೆಯಿಂದ ಜನರ ಮನೆಗಳಿಗೆ ನೀರು ನುಗ್ಗಿದ್ದು ಮನೆಯೊಳಗೆ ವಿದ್ಯುತ್ ಉಪಕರಣಗಳು, ಪೀಠೋಪಕರಣಗಳು ಸೇರಿದಂತೆ ಅನೇಕ ವಸ್ತುಗಳಿಗೆ ಹಾನಿಯುಂಟಾಗಿದೆ. ನೀರನ್ನು ಹೊರಹಾಕಲು ಭಾರೀ ಶ್ರಮಪಟ್ಟಿದ್ದಾರೆ.
ರಾಜಕಾಲುವೆ ಒತ್ತುವರಿ ಸೇರಿದಂತೆ ಒತ್ತುವರಿಗಳನ್ನು ತೆರವುಗೊಳಿಸದಿದ್ದರಿಂದ, ಒಳಚರಂಡಿಯನ್ನು ಸರಿಯಾಗಿ ನಿರ್ವಹಣೆ ಮಾಡದಿರುವುದರಿಂದಲೇ ಈ ರೀತಿ ಭಾರೀ ಮಳೆ ಬಂದಾಗ ನೀರು ಮನೆಗಳಿಗೆ ನುಗ್ಗುತ್ತವೆ ಎಂದು ನಿವಾಸಿಗಳು ಆರೋಪಿಸುತ್ತಾರೆ. ಹೊಸಕೆರೆಹಳ್ಳಿ, ನಾಯಂಡಹಳ್ಳಿ, ಬಸವನಗುಡಿ, ಬೊಮ್ಮನಹಳ್ಳಿ, ಕೆಂಗೇರಿ, ರಾಜರಾಜೇಶ್ವರಿನಗರ, ಬೊಮ್ಮನಹಳ್ಳಿ ಮತ್ತು ಸುತ್ತಮುತ್ತಲ ಪ್ರದೇಶಗಳು ಶುಕ್ರವಾರದ ಮಳೆಗೆ ಹಾನಿಯುಂಟಾಗಿದೆ.
ನಿವಾಸಿಗಳು ಬಿಬಿಎಂಪಿ ಎಂಜಿನಿಯರ್ ಗಳು ಮತ್ತು ಜಂಟಿ ಆಯುಕ್ತರೊಂದಿಗೆ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಬಿಬಿಎಂಪಿ ಅಧಿಕಾರಿಗಳು ಕೆಲ ಪ್ರದೇಶಗಳಿಗೆ ಮಾತ್ರ ಭೇಟಿ ನೀಡಿದ್ದು ಹಲವು ಪ್ರದೇಶಗಳನ್ನು ನಿರ್ಲಕ್ಷಿಸಿದ್ದಾರೆ. ಮಳೆ ಬಂದು ನಿಂತು ಹೋದ ಮೇಲೆ ನೀರಿನ ಮಟ್ಟದ ರಾತ್ರಿ ಹೊತ್ತಿಗೆ ಕಡಿಮೆಯಾಯಿತು. ಮರುದಿನ ಅಂದರೆ ನಿನ್ನೆ ಶನಿವಾರ ಬೆಳಗ್ಗೆಯವರೆಗೂ ನಿವಾಸಿಗಳಿಗೆ ಮನೆಯಿಂದ ಹೊರಬರಲು ಸಾಧ್ಯವಾಗಿರಲಿಲ್ಲ.
ಬನ್ನೇರುಘಟ್ಟ ರಸ್ತೆಯ ಬಿಲೆಕಹಳ್ಳಿಯಲ್ಲಿರುವ ಆರ್ ಕೆ ಕಾಲೊನಿಯ ಅಪಾರ್ಟ್ ಮೆಂಟ್ ನಿವಾಸಿಗಳು, ಕಳೆದ ಮೇ ತಿಂಗಳಿನಿಂದ ಭಾರೀ ಮಳೆ ಸುರಿದಾಗ ಚರಂಡಿ ಉಕ್ಕಿ ಹರಿಯುತ್ತಿದ್ದರೂ ಬಿಬಿಎಂಪಿಗೆ ದೂರು ನೀಡಿದರೂ ಅಲ್ಲಿಂದ ಯಾರೂ ಬಂದು ನೋಡಿ ಕ್ರಮ ಕೈಗೊಳ್ಳಲಿಲ್ಲ. ನಿನ್ನೆಯ ಮಳೆಗೆ ಸಮಸ್ಯೆ ಇನ್ನಷ್ಟು ಚಟಿಲವಾಯಿತು, ನಿವಾಸಿಗಳ ಜೀವನ ಮತ್ತಷ್ಟು ಕಠಿಣವಾಗಿದೆ ಎಂದರು.
ಒಳಚರಂಡಿ ವ್ಯವಸ್ಥೆಯನ್ನು ಸರಿಯಾಗಿ ಮಾಡಲಾಗಿಲ್ಲ ಇದರಿಂದ ಅಲ್ಪ ಪ್ರಮಾಣದ ಮಳೆಯೂ ಸಹ ಪ್ರವಾಹಕ್ಕೆ ಕಾರಣವಾಗುತ್ತದೆ. ನಿವಾಸಿ ಸುರೇಶ್ ಪ್ರಕಾಶ್, “ನಾವು ಚರಂಡಿ ಬಗ್ಗೆ ದೂರು ನೀಡಿದಾಗ, ಅಧಿಕಾರಿಗಳು ಮಡಿವಾಳ ಕೆರೆಗೆ ಹೋಗುವ ಮಾರ್ಗಗಳನ್ನು ನಿರ್ವಿುಸಬೇಕಾಗಿತ್ತು ಎಂದು ಹೇಳಿದರು. ನಾವು ದೂರು ನೀಡಿ ಆರು ತಿಂಗಳಾಗಿದೆ ಆದರೆ ಅಧಿಕಾರಿಗಳು ಇನ್ನೂ ಸಮಸ್ಯೆಯನ್ನು ಬಗೆಹರಿಸಿಲ್ಲ ಎಂದರು. ಇಡೀ ಸ್ಥಳವು ದುರ್ವಾಸನೆ ಬೀರಲು ಆರಂಭವಾಗಿದ್ದು, ಉಸಿರಾಡಲು ಸಹ ಕಷ್ಟವಾಗುತ್ತಿದೆಯ ಮಳೆನೀರು ತಾನಾಗಿಯೇ ಹರಿಯುವವರೆಗೂ ನಾವು ಕಾಯಬೇಕಾಯಿತು. ಮಕ್ಕಳು ಮತ್ತು ವಯಸ್ಕರಿಗೆ ರೋಗಗಳು ಹರಡುವ ಅಪಾಯವಿದೆ ಎಂದರು.
Advertisement