ಬಿಬಿಎಂಪಿಗೆ ಹೊಸ ಪ್ರದೇಶ ಸೇರ್ಪಡೆ ಬೇಡ: ಹಾಲಿ ಇರುವ ವಾರ್ಡ್'ಗಳನ್ನೇ 225ಕ್ಕೆ ಹೆಚ್ಚಿಸಲು ಶಿಫಾರಸು

ಬಿಬಿಎಂಪಿ ಹೊಸದಾಗಿ ಯಾವುದೇ ಪ್ರದೇಶಗಳನ್ನು ಸೇರ್ಪಡೆ ಮಾಡಬಾರದು. ಹಾಲಿ ಇರುವ 198 ವಾರ್ಡ್'ಗಳನ್ನೇ 225 ವಾರ್ಡ್'ಗಳಿಗೆ ವಿಸ್ತರಣೆ ಮಾಡಬೇಕು. ಜೊತೆಗೆ 15 ವಲಯಗಳನ್ನಾಗಿ ವಿಭಜಿಸುವ ಬದಲು 10-12 ವಲಯಗಳಿಗೆ ಸೀಮಿತಗೊಳಿಸಿ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಬಿಬಿಎಂಪಿ ಹೊಸದಾಗಿ ಯಾವುದೇ ಪ್ರದೇಶಗಳನ್ನು ಸೇರ್ಪಡೆ ಮಾಡಬಾರದು. ಹಾಲಿ ಇರುವ 198 ವಾರ್ಡ್'ಗಳನ್ನೇ 225 ವಾರ್ಡ್'ಗಳಿಗೆ ವಿಸ್ತರಣೆ ಮಾಡಬೇಕು. ಜೊತೆಗೆ 15 ವಲಯಗಳನ್ನಾಗಿ ವಿಭಜಿಸುವ ಬದಲು 10-12 ವಲಯಗಳಿಗೆ ಸೀಮಿತಗೊಳಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆಯ ಐಎಎಸ್ ಅಧಿಕಾರಿಗಳನ್ನು ಆಯುಕ್ತರನ್ನಾಗಿ ನೇಮಿಸಬೇಕು ಎಂದು ಶಿಫಾರಸು ಮಾಡಲು ಶುಕ್ರವಾರ ನಡೆದ ಶಾಸಕ ಎಸ್.ರಘು ನೇತೃತ್ವದ ಜಂಟಿ ಶಾಸಕಾಂಗ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ. 

ಅಲ್ಲದೆ ಬಿಬಿಎಂಪಿ ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ನವೆಂಬರ್ ಅಂತ್ಯದೊಳಗಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ-2020 ವಿಧೇಯಕದ ಬಗ್ಗೆ ವರದಿ ಸಲ್ಲಿಸಲು ನಿರ್ಧರಿಸಲಾಯಿತು. ಇದಕ್ಕೆ ಅನುವಾಗುವಂತೆ ಜಂಟಿ ಶಾಸಕಾಂಗ ಸಮಿತಿಗೆ ಎಸ್.ರಗು ನೇತೃತ್ವದಲ್ಲಿ ಮತ್ತೊಂದು ಉಪ ಸಮಿತಿ ರಚನೆ ಮಾಡಲೂ ಸಹ ನಿರ್ಧರಿಸಲಾಯಿತು ಎಂದು ತಿಳಿದುಬಂದಿದೆ. 

ಶುಕ್ರವಾರ ಮಧ್ಯಾಹ್ನ ನಡೆದ ಸಭೆಯಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಅವರು, ಬಿಬಿಎಂಪಿಗೆ ಹೊಸ ಪ್ರದೇಶಗಳನ್ನು ಸೇರ್ಪಡೆ ಮಡಾಬೇಕು. ಮಾರ್ಡ್ ಗಳನ್ನು 198ರಿಂದ 225 ವಾರ್ಡ್ ಗಳಿಗೆ ಹೆಚ್ಚಳ ಮಾಡಬೇಕು. ಜೊತೆಗೆ 15 ವಲಯಗಳನ್ನಾಗಿ ವಿಭಜಿಸಬೇಕು. ಜೊತೆಗೆ 15 ವಲಯಗಳನ್ನಾಗಿ ವಿಭಜಿಸಬೇಕು ಎಂದು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿರುವುದಾಗಿ ಹೇಳಿದರು.
 
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಜಂಟಿ ಶಾಸಕಾಂಗ ಸಮಿತಿ ಸದಸ್ಯರು, ಈಗಾಗಲೇ ಬಿಬಿಎಂಪಿ ವ್ಯಾಪ್ತಿ ಅವೈಜ್ಞಾನಿಕವಾಗಿ ವಿಸ್ತಾರಗೊಂಡಿದೆ. 2006ರಲ್ಲಿ ಸೇರ್ಪಡೆಯಾದ 110 ಹೊಸ ಹಳ್ಳಿಗಳಿಗೆ ಈ ವರೆಗೂ ಮೂಲ ಸೌಕರ್ಯ ಕಲ್ಪಿಸಲು ಸಾಧ್ಯವಾಗಿಲ್ಲ. ಹೀಗಿರುವಾಗ ಮತ್ತೆ ಹೊಸ ಪ್ರದೇಶಗಳನ್ನು ಸೇರ್ಪಡೆ ಮಾಡಬಾರದು. ಅದರ ಬದಲಿಗೆ ಇರುವ ವಾರ್ಡ್'ಗಳನ್ನೇ 225ಕ್ಕೆ ಹಚ್ಚಳ ಮಾಡಬೇಕು ಎಂದು ಸಲಹೆ ನೀಡಿದರು ಎಂದು ಮೂಲಗಳಿಂದ ತಿಳಿದುಬಂದಿದೆ. 

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಸ್.ರಘು ಅವರು, ಸುಮಾರು 3 ಗಂಟೆಗಳ ಕಾಲ ಕಾಯ್ದೆಯ 40 ಅಂಶಗಳ ಬಗ್ಗೆ ಕೂಲಂಕುಶವಾಗಿ ಚರ್ಚೆ ನಡೆಸಿದ್ದೇವೆ. ಹೊಸ ಪ್ರದೇಶ ಸೇರ್ಪಡೆಗೆ ನಾವು ಒಪ್ಪಿಲ್ಲ. 8 ವಲಯಗಳನ್ನು 15 ವಲಯಗಳನ್ನಾಗಿ ಮಾಡಬೇಗು ಎಂದು ಸಲಹೆ ಬಂದಿದ್ದು, ಅದನ್ನು 10-12ಕ್ಕೆ ಸೀಮಿತಗೊಳಿಸಬೇಕು ಎಂದು ಚರ್ಚಿಸಲಾಯಿತು. ಜೊತೆಗೆ ಮೇಯರ್ ಅವಧಿಯನ್ನು 1 ವರ್ಷದಿಂದ 5 ವರ್ಷಕ್ಕೆ ಹೆಚ್ಚಿಸಬೇಕೇ ಅತವಾ 2.5 ವರ್ಷಕ್ಕೆ ಒಬ್ಬರು ಮೇಯರ್ ನಂತೆ ಒಂದು ಅವಧಿಗೆ ಇಬ್ಬರಿಗೆ ಅಧಿಕಾರ ಹಂಚಿಕೆ ಮಾಡಬೇಕೇ? ಎಂಬ ಕುರಿತು ಚರ್ಚಿಸಲಾಯಿತು. 

ಅಂತಿಮವಾಗಿ ಬಿ.ಎಸ್.ಪಾಟೀಲ್ ವರದಿ, ಕಸ್ತೂರಿ ರಂಗನ್ ವರದಿ ಸೇರಿದಂತೆ ಹಲವು ವರದಿಗಳನ್ನು ಅಧ್ಯಯನ ಮಾಡಿ ನವೆಂಬರ್ ಒಳಗಾಗಿ ವರದಿ ನೀಡಲು ನಿರ್ಧರಿಸಿದ್ದೇವೆ. ಇದಕ್ಕಾಗಿ ಉಪ ಸಮಿತಿ ರಚಿಸಿದ್ದು. ನನ್ನ ಅಧ್ಯಕ್ಷತೆಯಲ್ಲಿ ಬಿಜೆಪಿಯಿಂದ ಶಾಸಕರಾದ ರವಿ ಸುಬ್ರಮಣ್ಯ, ಸತೀಶ್ ರೆಡ್ಡಿ, ಕಾಂಗ್ರೆಸ್ ನಿಂದ ಪರಿಷತ್ ಸದಸ್ಯ ಪಿ.ಆರ್.ರಮೇಶ್, ಜೆಡಿಎಸ್ ನಿಂದ ತಿಪ್ಪೇಸ್ವಾಮಿ ಅವರು ಸದಸ್ಯರಾಗಿರುತ್ತಾರೆಂದು ಮಾಹಿತಿ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com