ಸೋಂಕಿತ ವ್ಯಕ್ತಿಯ ಶವ ಸಾಗಿಸಲು ರೂ.60 ಸಾವಿರ ಬೇಡಿಕೆ: ಆ್ಯಂಬುಲೆನ್ಸ್ ಮಾಲೀಕ ಬಂಧನ
ಬೆಂಗಳೂರು: ಸಕಾಲಕ್ಕೆ ಐಸಿಯು ಬೆಡ್ ಸಿಗದೆ ಮೃತಪಟ್ಟ ಕೊರೋನಾ ಸೋಂಕಿತರೊಬ್ಬರ ಮೃತದೇಹ ಸಾಗಿಸಲು ರೂ.60 ಸಾವಿರ ಬೇಡಿಕೆ ಇಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆ್ಯಂಬುಲೆನ್ಸ್ ಚಾಲಕನನ್ನು ಬಂಧನಕ್ಕೊಳಪಡಿಸಿದ್ದಾರೆ.
ಏಪ್ರಿಲ್ 20 ರಂದು ಘಟನೆ ನಡೆದಿದೆ. ಭವ್ಯಾ (29) ಎಂಬ ಮಹಿಳೆಯ ತಂದೆ ಪ್ರಸಾದ್ ಎಂಬುವವರು ಕೊರೋನಾ ಸೋಂಕಿನಿಂದಾಗಿ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ತಂದೆಯ ಮೃತದೇಹವನ್ನು ಚಿತಾಗಾರಕ್ಕೆ ಸಾಗಿಸಲು ಮುಂದಾದ ಭವ್ಯಾ ಅವರ ಬಳಿ ಆ್ಯಂಬುಲೆನ್ಸ್ ಮಾಲೀಕ ರೂ.60 ಸಾವಿರ ಬೇಡಿಕೆ ಇಟ್ಟಿದ್ದಾನೆ. ದುಡ್ಡು ಕೊಟ್ಟರಷ್ಟೇ ಮೃತದೇಹ ಸಾಗಿಸುತ್ತೇವೆ. ಇಲ್ಲವಾದರೆ, ರಸ್ತೆಯ ಮೇಲೆ ಮೃತದೇಹ ಬಿಟ್ಟು ಹೋಗುತ್ತೇವೆಂದು ಬೆದರಿಸಿದ್ದಾನೆ.
ಈ ವೇಳೆ ಭವ್ಯಾ ತಮ್ಮ ಬಳಿ ಇದೀಗ ಅಷ್ಟೊಂದು ಹಣವಿಲ್ಲ. ಮಾಂಗಲ್ಯ ಸರ ಮಾಡಿ ಹಣ ನೀಡುತ್ತೇನೆ. ಈಗ ಮೃತದೇಹ ಸಾಗಿಸಲು ಸಹಾಯ ಮಾಡುವಂತೆ ಬೇಡಿಕೊಂಡಿದ್ದೇನೆ. ಆದರೆ, ಇದಕ್ಕೆ ಆ್ಯಂಬುಲೆನ್ಸ್ ಮಾಲೀಕ ನಿರಾಕರಿಸಿದ್ದಾನೆ.
ಬಳಿಕ ಭವ್ಯಾ ಅವರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಬಳಿಕ ಪರಿಸ್ಥಿತಿಯ ಸೂಕ್ಷ್ಮತೆ ಅರಿತ ಆ್ಯಂಬುಲೆನ್ಸ್ ಮಾಲೀಕ ರೂ.16,000ಕ್ಕೆ ಮೃತದೇಹ ಸಾಗಿಸಲು ಒಪ್ಪಿದ್ದಾನೆ. ಬಳಿಕ ಭವ್ಯಾ ಅವರು ಹಣವನ್ನು ನೀಡಿ ಮೃತದೇಹವನ್ನು ಸಾಗಿಸಿದ್ದಾರೆ.
ಬಳಿಕ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಅಮೃತಹಳ್ಳಿ ಪೊಲೀಸರು ಆ್ಯಂಬುಲೆನ್ಸ್ ವಶಕ್ಕೆ ಪಡೆದುಕೊಂಡೂ ಮಾಲೀಕನನ್ನು ಬಂಧನಕ್ಕೊಳಪಡಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ