ಬೆಂಗಳೂರು: ಕೊರೋನಾ 2ನೇ ಅಲೆ ತೀವ್ರಗೊಂಡ ಹಿನ್ನೆಲೆಯಲ್ಲಿ ಐಪಿಎಲ್'ನ ಬೆಂಗಳೂರು ಚರಣದ ಪಂದ್ಯಗಳನ್ನು ರದ್ದುಕೊಳಿಸುವಂತೆ ಸರ್ಕಾರಕ್ಕೆ ವಿಧಾನ ಪರಿಷತ್ ಸದಸ್ಯ ಪ್ರಕಾಶ್.ಕೆ.ರಾಥೋಡ್ ಅವರು ಪತ್ರ ಬರೆದಿದ್ದಾರೆ.
ಎಲ್ಲೆಡೆ ಕೊರೋನಾ ವೇಗವಾಗಿ ಹಬ್ಬುತ್ತಿದೆ. ಇದರ ನಡುವೆ ಮೇ.9ರಿಂದ 10 ಐಪಿಎಲ್ ಪಂದ್ಯಗಳನ್ನು ಆಯೋಜಿಸಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್'ಸಿಎ) ಸಿದ್ಧತೆ ನಡೆಸಿದೆ. ಇದರಿಂದ ಕೊರೋನಾ ಹೆಚ್ಚಿರುವ ಬೆಂಗಳೂರಿನಲ್ಲಿ ಸೋಂಕು ಮತ್ತಷ್ಟು ವ್ಯಾಪಿಸುವ ಸಾಧ್ಯತೆ ಇದೆ. ಈ ಕಾರಣದಿಂದ ಪಂದ್ಯಗಳನ್ನು ರದ್ದುಗೊಳಿಸುವಂತೆ ಕೆಎಸ್'ಸಿಎಗೆ ರಾಜ್ಯ ಸರ್ಕಾರ ಸೂಚಿಸಬೇಕು ಎಂದು ಹೇಳಿದ್ದಾರೆ.
ಈಗಾಗಲೇ ಖ್ಯಾತ ಸ್ಪಿನ್ನರ್ ಆರ್.ಅಶ್ವಿನ್ ಹಾಗೂ ಮೂವರು ಆಸ್ಟ್ರೇಲಿಯಾದ ಆಟಗಾರರು ಐಪಿಎಲ್'ನಿಂದ ಹೊರಹೋಗಿದ್ದಾರೆ. ರಾಷ್ಟ್ರೀಯ ಮಹಿಳಾ ಹಾಕಿ ತಂಡ 7 ಸದಸ್ಯರಿಗೂ ಸೋಂಕು ತಗುಲಿದೆ. ಇಂತಹ ಸಂದರ್ಭದಲ್ಲಿ ಐಪಿಎಲ್ ಆಯೋಜನೆ ಬೇಕಿಲ್ಲ. ಅದರ ಬದಲು ಜನರ ಕಷ್ಟಕ್ಕೆ ಸ್ಪಂದಿಸಬೇಕಿದೆ ಎಂದು ಪತ್ರದಲ್ಲಿ ಅಭಿಪ್ರಾಯಪಟ್ಟಿದ್ದಾರೆ.
Advertisement