ರಾಜ್ಯದಲ್ಲಿ 14 ದಿನಗಳ ಕೊರೋನಾ ಕರ್ಫ್ಯೂ ಪ್ರಾರಂಭ: ಎಲ್ಲೆಡೆ ಪೊಲೀಸ್ ಬಂದೋಬಸ್ತ್, ಮೇಲ್ಸೇತುವೆಗಳು ಬ್ಯಾರಿಕೇಡ್'ಗಳಿಂದ ಬಂದ್
ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿ ಕೊರೋನಾ ವೈರಸ್ ತೀವ್ರ ಸ್ವರೂಪ ಪಡೆದುಕೊಂಡಿರುವ ಹಿನ್ನೆಲೆಯಲ್ಲಿ ಕೊರೋನಾ 2ನೇ ಅಲೆ ನಿಯಂತ್ರಿಸಲುವ ಸಲುವಾಗಿ ರಾಜ್ಯ ಸರ್ಕಾರ ಜಾರಿಗೊಳಿಸಿರುವ 14 ದಿನಗಳ ಕೊರೋನಾ ಕರ್ಫ್ಯೂ ಮಂಗಳವಾರ ರಾತ್ರಿಯಿಂದಲೇ ಜಾರಿಗೊಂಡಿದ್ದು, ಜೀವನಾಶ್ಯಕ ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ವಹಿವಾಟು, ಜನ ಜೀವನ ಸ್ತಬ್ಧಗೊಂಡಿದೆ.
ಕಠಿಣ ಕೊರೋನಾ ಕರ್ಫ್ಯೂಗಾಗಿ ರಾಜ್ಯದಾದ್ಯಂತ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. ಕಳೆದ ವಾರದ ಇದ್ದ ವೀಕೆಂಡ್ ಕರ್ಫ್ಯೂ ಬಳಿಕ ಮೊದಲ ಬಾರಿಗೆ ವಿಧಿಸಿರುವ ಕೊರೋನಾ ಕರ್ಫ್ಯೂ ಇದಾಗಿದ್ದು, ಸಾರ್ವಜನಿಕರು ಅನಗತ್ಯವಾಗಿ ರಸ್ತೆಗಿಳಿಯದಂತೆ ನಿರ್ದೇಶಿಸಲಾಗಿದೆ.
ಎಲ್ಲಾ ಜಿಲ್ಲಾ ಗಡಿಗಳಲ್ಲಿ ಪೊಲೀಸರು ಚೆಕ್ ಪೋಸ್ಟ್ ನಿರ್ಮಾಣ ಮಾಡಿದ್ದಾರೆ. ತುರ್ತು ಹಾಗೂ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಪ್ರತಿಯೊಂದು ವಾಹನಗಳನ್ನು ಪೊಲೀಸರು ಪರಿಶೀಲನೆ ನಡೆಸಲಿದ್ದಾರೆ.
ರಾಜಧಾನಿ ಬೆಂಗಳೂರು ಹಾಗೂ ಇತರೆ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಕೋವಿಡ್ ಮಾರ್ಗಸೂಚಿ ಉಸ್ತುವಾರಿ ಹೊಣೆ ಹೊರಿಸಲಾಗಿದೆ.
ಕೊರೋನಾ ಕರ್ಫ್ಯೂ ಜಾರಿಯಲ್ಲಿರುವ ಕಾರಣ ಸಾರ್ವಜನಿಕರು ಅಗತ್ಯವಾಗಿ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಅಗತ್ಯ ಸೇವೆಗೆ ಸಂಚಾರಿಸುತ್ತಿದ್ದ ವಾಹನಗಳನ್ನು ಕೂಡ ಪೊಲೀಸರು ತಡೆದು ಪರಿಶೀಲನೆ ನಡೆಸುತ್ತಿದ್ದರು. ಇನ್ನು ನಗರದ ಪ್ರಮುಖ ರಸ್ತೆ ಹಾಗೂ ಮೇಲ್ಸೇತುವೆಗಳನ್ನು ಬ್ಯಾರಿಕೇಡ್ ಹಾಕಿ ಬಂದ್ ಮಾಡಲಾಗಿತ್ತು. ಒಟ್ಟಾರೆ ನಗರದಲ್ಲಿನ 32 ಮೇಲ್ಸೇತುವೆ, 62 ದ್ವಿಮುಖ ರಸ್ತೆಗಳನ್ನು ಏಕಮುಖ ಸಂಚಾರ ಹಾಗೂ 70 ಮುಖ್ಯರಸ್ತೆಗಳನ್ನು ಬಂದ್ ಮಾಡಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ