ಮೊಟ್ಟೆ, ಹಾಲು, ಬಾಳೆಹಣ್ಣು ವಿತರಣೆಯಿಂದ ಮಕ್ಕಳ ಪೌಷ್ಟಿಕಾಂಶ ಹೆಚ್ಚಳ: ಸಮೀಕ್ಷೆ

ಶಾಲೆಗೆ ಹೋಗುವ ಮಕ್ಕಳಿಗೆ ಬಿಸಿ ಊಟದ ವೇಳೆ ಮೊಟ್ಟೆ ನೀಡುವ ಕುರಿತು ರಾಜ್ಯದಲ್ಲಿ ಚರ್ಚೆಗಳು ನಡೆಯುತ್ತಿರುವ ನಡುವಲ್ಲೇ ಮೊಟ್ಟೆ, ಹಾಲು ಮತ್ತು ಬಾಳೆಹಣ್ಣು ಸೇವನೆಯಿಂದ ಐದು ಜಿಲ್ಲೆಗಳ ಅಂಗನವಾಡಿಗಳಲ್ಲಿ ದಾಖಲಾದ ಆರು ತಿಂಗಳಿಂದ ಆರು ವರ್ಷದವರೆಗಿನ ಅಪೌಷ್ಟಿಕ ಮಕ್ಕಳ ಪೌಷ್ಟಿಕತೆಯ ಮಟ್ಟ ಸುಧಾರಿಸಿದೆ ಎಂದು ಸರ್ಕಾರ ನಡೆಸಿದ ಸಮೀಕ್ಷಾ ವರದಿಯಿಂದ ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಕಲಬುರಗಿ: ಶಾಲೆಗೆ ಹೋಗುವ ಮಕ್ಕಳಿಗೆ ಬಿಸಿ ಊಟದ ವೇಳೆ ಮೊಟ್ಟೆ ನೀಡುವ ಕುರಿತು ರಾಜ್ಯದಲ್ಲಿ ಚರ್ಚೆಗಳು ನಡೆಯುತ್ತಿರುವ ನಡುವಲ್ಲೇ ಮೊಟ್ಟೆ, ಹಾಲು ಮತ್ತು ಬಾಳೆಹಣ್ಣು ಸೇವನೆಯಿಂದ ಐದು ಜಿಲ್ಲೆಗಳ ಅಂಗನವಾಡಿಗಳಲ್ಲಿ ದಾಖಲಾದ ಆರು ತಿಂಗಳಿಂದ ಆರು ವರ್ಷದವರೆಗಿನ ಅಪೌಷ್ಟಿಕ ಮಕ್ಕಳ ಪೌಷ್ಟಿಕತೆಯ ಮಟ್ಟ ಸುಧಾರಿಸಿದೆ ಎಂದು ಸರ್ಕಾರ ನಡೆಸಿದ ಸಮೀಕ್ಷಾ ವರದಿಯಿಂದ ತಿಳಿದುಬಂದಿದೆ.

ಕಲ್ಯಾಣ ಕರ್ನಾಟಕ ಪ್ರದೇಶದ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಸೆಪ್ಟೆಂಬರ್ ಮತ್ತು ನವೆಂಬರ್‌ನಲ್ಲಿ ನಡೆಸಿದ ಸಮೀಕ್ಷೆ ವರದಿಯಿಂದ ಈ ವಿಚಾರ ತಿಳಿದುಬಂದಿದೆ.

ಅಂಗನವಾಡಿಗಳಲ್ಲಿ ಆರು ತಿಂಗಳಿಂದ ಆರು ವರ್ಷದೊಳಗಿನ ಸಾಮಾನ್ಯ ಮಕ್ಕಳು, ಮಧ್ಯಮ ಅಪೌಷ್ಟಿಕತೆ ಹೊಂದಿರುವ ಮಕ್ಕಳು ಮತ್ತು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವವರ ಸಂಖ್ಯೆಯನ್ನು ತೂಕದ ಮೂಲಕ ಕಂಡುಹಿಡಿಯಲು ಸೆಪ್ಟೆಂಬರ್‌ನಲ್ಲಿ ಸಮೀಕ್ಷೆ ನಡೆಸಲಾಗಿತ್ತು. ಸಮೀಕ್ಷಾ ವರದಿಯಲ್ಲಿ ಮೊಟ್ಟೆ, ಹಾಲು, ಬಾಳೆಹಣ್ಣು ವಿತರಣೆಯಿಂದ ಮಕ್ಕಳಲ್ಲಿ ಪೌಷ್ಟಿಕಾಂಶ ಹೆಚ್ಚುತ್ತಿದೆ ಎಂದು ತಿಳಿದುಬಂದಿದೆ.

ಇಲಾಖೆಯ ಉನ್ನತ ಮೂಲಗಳು ನೀಡಿರುವ ಮಾಹಿತಿಗಳ ಪ್ರಕಾರ, ಕರ್ನಾಟಕದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಕಲ್ಯಾಣ ಕರ್ನಾಟಕ ಪ್ರದೇಶದ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ದಾಖಲಾದ ಮಕ್ಕಳಲ್ಲಿ ಪೌಷ್ಟಿಕಾಂಶದ ಮಟ್ಟವು ಕಡಿಮೆಯಾಗಿದೆ ಎಂದು ತಿಳಿಸಿದೆ.

ಕೊಪ್ಪಳ ಜಿಲ್ಲೆಯಲ್ಲಿ ಅತಿ ಹೆಚ್ಚು ಅಪೌಷ್ಟಿಕ ಮಕ್ಕಳು!
ಸೆಪ್ಟೆಂಬರ್ ಬಳಿಕ ನವೆಂಬರ್ ಕೊನೆಯ ವಾರದಲ್ಲಿಯೂ ಸಮೀಕ್ಷೆಯನ್ನು ಪುನರಾವರ್ತಿಸಲಾಗಿದ್ದು, ಈ ವೇಳೆಯೂ ಮಕ್ಕಳಲ್ಲಿನ ಪೌಷ್ಟಿಕತೆ ಗಣನೀಯವಾಗಿ ಸುಧಾರಣೆಗೊಂಡಿದೆ ಎಂದು ವರದಿಯಲ್ಲಿ ತಿಳಿದುಬಂದಿದೆ.

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪೌಷ್ಟಿಕಾಂಶದ ಮಟ್ಟದಲ್ಲಿ (ಸಾಮಾನ್ಯ, ಮಧ್ಯಮ ಕಡಿಮೆ ತೂಕ ಮತ್ತು ತೀವ್ರ ಅಪೌಷ್ಟಿಕತೆ) ಎಲ್ಲಾ ವರ್ಗಗಳಲ್ಲಿ ಸುಧಾರಣೆ ಕಂಡುಬಂದರೂ, ಕಲ್ಯಾಣ ಕರ್ನಾಟಕ ಪ್ರದೇಶದ ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಮಾತ್ರ ಕಡಿಮೆಯಾಗಿರುವುದು ಕಂಡು ಬಂದಿದೆ.

ಈ ಭಾಗದಲ್ಲಿ ಸೆಪ್ಟೆಂಬರ್‌ನಲ್ಲಿ 32,300 (ಶೇ. 7.65) ಇದ್ದ ಮಧ್ಯಮ ಅಪೌಷ್ಟಿಕ ಮಕ್ಕಳ ಸಂಖ್ಯೆ ನವೆಂಬರ್‌ನಲ್ಲಿ 30,3784 (ಶೇ. 7.14) ಕ್ಕೆ ಇಳಿದಿದೆ. ತೀವ್ರ ಅಪೌಷ್ಟಿಕತೆ ಹೊಂದಿರುವ ಮಕ್ಕಳ ವಿಚಾರದಲ್ಲಿ, 8,028 (ಶೇ. 0.19) ರಿಂದ 6,874 (ಶೇ. 0.16) ಕ್ಕೆ ಇಳಿಕೆಯಾಗಿದೆ. ಆದರೆ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಕಲ್ಯಾಣ ಕರ್ನಾಟಕ ಪ್ರದೇಶದ ಆರು ಜಿಲ್ಲೆಗಳ ಪೈಕಿ ಐದು ಜಿಲ್ಲೆಗಳಲ್ಲಿ ಮಧ್ಯಮ ಕಡಿಮೆ ತೂಕ ಮತ್ತು ತೀವ್ರವಾಗಿ ಕಡಿಮೆ ತೂಕದ ಮಕ್ಕಳ ಸಂಖ್ಯೆ ಹೆಚ್ಚುತ್ತಲೇ ಇದೆ ಎಂದು ಮೂಲಗಳು ತಿಳಿಸಿವೆ.

ಮಧ್ಯಮ ಅಪೌಷ್ಟಿಕ ಮಕ್ಕಳ ರಾಜ್ಯದ ಸರಾಸರಿ ಶೇ.7.14ರಷ್ಟಿದ್ದರೆ, ಕಲ್ಯಾಣ ಕರ್ನಾಟಕದ ಆರು ಜಿಲ್ಲೆಗಳಲ್ಲಿ ಇದು ಶೇ.12.2ರಷ್ಟಿದೆ. ತೀವ್ರ ಅಪೌಷ್ಟಿಕ ಮಕ್ಕಳ ರಾಜ್ಯದ ಸರಾಸರಿ ಶೇ.0.16 (6,874 ಮಕ್ಕಳು), ಕಲ್ಯಾಣ ಕರ್ನಾಟಕದಲ್ಲಿ ಇದು ಶೇ.0.24 (2,906 ಮಕ್ಕಳು) ರಷ್ಟಿರುವುದು ತಿಳಿದುಬಂದಿದೆ.

ರಾಜ್ಯದ ಇತರೆ ಜಿಲ್ಲೆಗಳ ಪೈಕಿ ಕೊಪ್ಪಳ ಜಿಲ್ಲೆಯಲ್ಲಿ ಅತಿ ಹೆಚ್ಚು ಕಡಿಮೆ ತೂಕ ಹೊಂದಿರುವ ಮಕ್ಕಳ ಸಂಖ್ಯೆ ಶೇ.0.35ಯಿದೆ. ಕಲಬುರಗಿ ಶೇ.0.32, ಯಾದಗಿರಿ ಶೇ.0.27, ರಾಯಚೂರು ಶೇ.0.23, ಬಳ್ಳಾರಿ ಶೇ.0.20 ಮತ್ತು ಬೀದರ್ ಶೇ.0.08ರಷ್ಟಿದೆ.

ಇನ್ನು ಚಿಕ್ಕಮಗಳೂರು ಜಿಲ್ಲೆ ಮೂರನೇ ಅತಿ ಹೆಚ್ಚು ಕಡಿಮೆ ತೂಕ ಹೊಂದಿರುವ ಮಕ್ಕಳ ಸಂಖ್ಯೆ ಶೇ.0.29ನ್ನು ಹೊಂದಿದೆ. ಕೊಪ್ಪಳ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ ಶೇ.15.21ರಷ್ಟು ಮಧ್ಯಮ ಅಪೌಷ್ಟಿಕ ಮಕ್ಕಳಿದ್ದರೆ, ರಾಯಚೂರಿನಲ್ಲಿ ಶೇ.14.98, ಯಾದಗಿರಿ ಶೇ.13.29, ಕಲಬುರಗಿ ಶೇ.11.15, ಬಳ್ಳಾರಿ ಶೇ.10.51 ಮತ್ತು ಬೀದರ್ ಶೇ.8.56ರಷ್ಟಿದೆ.

ಮೊಟ್ಟೆ, ಹಾಲು ಮತ್ತು ಬಾಳೆಹಣ್ಣು ನೀಡುವುದರ ಹೊರತಾಗಿಯೂ, ತೀವ್ರ ಅಪೌಷ್ಟಿಕ ಮಕ್ಕಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನ್ಯೂಟ್ರಿಷನ್ ಪುನರ್ವಸತಿ ಕೇಂದ್ರಗಳಲ್ಲಿ (ಎನ್‌ಆರ್‌ಸಿ) ಚಿಕಿತ್ಸೆ ನೀಡಲಾಗುತ್ತಿದೆ, ಇದು ಮಕ್ಕಳಲ್ಲಿ ಪೌಷ್ಟಿಕಾಂಶದ ಮಟ್ಟವನ್ನು ಸುಧಾರಿಸಲು ಸಹಾಯ ಮಾಡಿದೆ ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com