ಕೋವಿಡ್ ಎಫೆಕ್ಟ್: ಕಾವೇರಿ 5ನೇ ಹಂತದ ಯೋಜನೆ ವಿಳಂಬ, 2023ರ ಮಾರ್ಚ್ ವೇಳೆಗೆ ಪೂರ್ಣ!

ನಗರದ ಸುಮಾರು 50 ಲಕ್ಷ ನಿವಾಸಿಗಳಿಗೆ ಪ್ರತಿ ದಿನ ಹೆಚ್ಚುವರಿ 775 ಮಿಲಿಯನ್ ಲೀಟರ್ ನೀರು (ಎಂಎಲ್‌ಡಿ) ಪೂರೈಸಲು ಉದ್ದೇಶಿಸಿರುವ ಕಾವೇರಿ ನೀರು ಸರಬರಾಜು ಯೋಜನೆ - ಹಂತ 5 ಯೋಜನೆಯು ಮಾರ್ಚ್ 2023 ರ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ (BWSSB) ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ನಗರದ ಸುಮಾರು 50 ಲಕ್ಷ ನಿವಾಸಿಗಳಿಗೆ ಪ್ರತಿ ದಿನ ಹೆಚ್ಚುವರಿ 775 ಮಿಲಿಯನ್ ಲೀಟರ್ ನೀರು (ಎಂಎಲ್‌ಡಿ) ಪೂರೈಸಲು ಉದ್ದೇಶಿಸಿರುವ ಕಾವೇರಿ ನೀರು ಸರಬರಾಜು ಯೋಜನೆ - ಹಂತ 5 ಯೋಜನೆಯು ಮಾರ್ಚ್ 2023 ರ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ (BWSSB) ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಜಪಾನ್ ಇಂಟರ್ನ್ಯಾಷನಲ್ ಕೋಆಪರೇಷನ್ ಏಜೆನ್ಸಿಯು ಯೋಜನೆಗೆ ರೂ 5,500-ಕೋಟಿ ಹಣವನ್ನು ನೀಡುತ್ತಿದ್ದು, ಯೋಜನೆ ಪೂರ್ಣಗೊಂಡ ಬಳಿಕ ಮಹದೇವಪುರ, ದಾಸರಹಳ್ಳಿ, ರಾಜರಾಜೇಶ್ವರಿ ನಗರ, ಬ್ಯಾಟರಾಯನಪುರ ಮತ್ತು ಬೊಮ್ಮನಹಳ್ಳಿ ವ್ಯಾಪ್ತಿಯ 110 ಗ್ರಾಮಗಳಿಗೆ ಕಾವೇರಿ ನೀರು ಪೂರೈಕೆಯಾಗಲಿದೆ.

ಯೋಜನೆ ಕುರಿತು BWSSB ಮುಖ್ಯ ಇಂಜಿನಿಯರ್ ಎಸ್ ವಿ ರಮೇಶ್ ಅವರು ಮಾತನಾಡಿ, ಸಾಂಕ್ರಾಮಿಕ ರೋಗದಿಂದಾಗಿ ಯೋಜನೆ ವಿಳಂಬವಾಗುವಂತಾಗಿತ್ತು. ಕೋವಿಡ್ ನಿಂದಾಗಿ ನಾಲ್ಕು ತಿಂಗಳುಗಳ ಕಾಲ ಯೋಜನೆಯ ಕಾರ್ಯಗಳು ಸ್ಥಗಿತಗೊಂಡಿದ್ದವು. ಇದೀಗ ಯೋಜನೆ ಕಾರ್ಯಗಳು ವೇಗವನ್ನು ಪಡೆದುಕೊಂಡಿದೆ. 4 ತಿಂಗಳುಗಳ ಕಾಲ ಕೆಲಸಗಳು ಸ್ಥಗಿತಗೊಂಡಿದ್ದ ಕಾರಣ 2002ಕ್ಕೆ ಪೂರ್ಣಗೊಳ್ಳಬೇಕಿದ್ದ ಮೊದಲ ಹಂತಕ ಕಾರ್ಯಗಳು 2023ರ ಮೊದಲ ತ್ರೈಮಾಸಿಕದಲ್ಲಿ ಪೂರ್ಣಗೊಳ್ಳಲಿದೆ. ಈ ವರೆಗೂ ಶೇ.35ರಷ್ಟು ಕೆಲಸ ಪೂರ್ಣಗೊಂಡಿದೆ. ನೀರು ಪೂರೈಕೆಯನ್ನೇ ತೆಗೆದುಕೊಂಡರೆ ಶೇ 45ರಷ್ಟು ಕಾಮಗಾರಿ ಮುಗಿದಿದೆ ಎಂದು ಮಾಹಿತಿ ನೀಡಿದ್ದಾರೆ.

14 ಕೊಳಚೆ ನೀರು ಸಂಸ್ಕರಣಾ ಘಟಕಗಳು ಪೂರ್ಣಗೊಳ್ಳಲು ಹೆಚ್ಚು ಸಮಯ ಬೇಕಾಗುತ್ತದೆ, 2023 ರ ಅಂತ್ಯದವರೆಗೂ ಕಾಲಾವಕಾಶ ಬೇಕಾಗಬಹುದು ಎಂದು ತಿಳಿಸಿದ್ದಾರೆ.

ಸಾಂಕ್ರಾಮಿಕ ರೋಗದಿಂದಾಗಿ ಯೋಜನೆಗೆ ಅಗತ್ಯವಾದ ಸಲಕರಣೆಗಳ ಕೊರತೆಯನ್ನೂ ತಂದೊಡ್ಡಿತ್ತು. ಇದೀಗ ಗಂಟೆಗೆ 5,000 ಘನ ಮೀಟರ್‌ಗಳಷ್ಟು ನೀರನ್ನು ಪಂಪ್ ಮಾಡಬಲ್ಲ ಮ್ಯಾಮತ್ ಪಂಪ್‌ಗಳನ್ನು ಜಪಾನ್‌ನಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ತೊರೆಕಾಡನಹಳ್ಳಿ (ಟಿ.ಕೆ.ಹಳ್ಳಿ), ಹಾರೋಹಳ್ಳಿ ಮತ್ತು ತಾತಗುಣಿನ ಮೂರು ಪಂಪಿಂಗ್ ಸ್ಟೇಷನ್‌ಗಳಲ್ಲಿ ಒಟ್ಟು 27 ಪಂಪ್‌ಗಳನ್ನು ಅಳವಡಿಸಬೇಕಾಗಿದೆ, ಜತೆಗೆ ಜರ್ಮನಿಯಿಂದ ಖರೀದಿಸಲಾಗುತ್ತಿರುವ ನೂರಾರು ಬೃಹತ್ ವಾಲ್ವ್‌ಗಳು ಇನ್ನೂ ಪೂರೈಕೆಯಾಗಬೇಕಿದೆ. ಸಾಂಕ್ರಾಮಿಕ ರೋಗದ ಕಾರಣ ಅಲ್ಲಿನ ಕಾರ್ಖಾನೆಗಳ ಕೆಲಸ ಅವಧಿ ಕಡಿತಗೊಳಿಸಲಾಗಿದ್ದು, ನಾವು ನೀಡಿರುವ ಆರ್ಡರ್ ಗಳು ಇನ್ನೂ ಪೂರೈಕೆಯಾಗಿಲ್ಲ.

ಟಿಕೆ ಹಳ್ಳಿಯಿಂದ ನಗರಕ್ಕೆ ಪ್ರಸರಣ ಮಾರ್ಗವನ್ನು ಹಾಕುವುದು, ಮುಖ್ಯ ಟ್ರಂಕ್ ಲೈನ್, ಏಳು ನೆಲಮಟ್ಟದ ಜಲಾಶಯಗಳು, ಏಳು ಮಧ್ಯಂತರ ಒಳಚರಂಡಿ ಪಂಪಿಂಗ್ ಸ್ಟೇಷನ್‌ಗಳು ಮತ್ತು ಎಸ್‌ಟಿಪಿಗಳು ಯೋಜನೆಯ ಪ್ರಮುಖ ಅಂಶಗಳಾಗಿದ್ದು, ನಗರವು ಪ್ರಸ್ತುತ ದಿನಕ್ಕೆ 1,450 ಮಿಲಿಯನ್ ಲೀಟರ್ ಕಾವೇರಿ ನೀರನ್ನು ಪಡೆಯುತ್ತಿದೆ, ಈ ನೀರನ್ನು ಸುಮಾರು 90 ಕಿಮೀ ದೂರದಿಂದ ಪಂಪ್ ಮಾಡಲಾಗುತ್ತದೆ ಎಂದು ಮಾಹಿತಿ  ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com