ಬೆಂಗಳೂರು: ಆಫ್ ಲೈನ್ ತರಗತಿಗಳಿಗೆ ಕಾಲೇಜುಗಳ ಮತ್ತೆ ತೆರೆಯಲು ತಯಾರಿ ನಡೆಸಲು, ಅನುದಾನಿತ ಮತ್ತು ಸರ್ಕಾರಿ ಕಾಲೇಜಿನ ಉಪನ್ಯಾಸಕರು ಕೆಲಸಕ್ಕೆ ಮರಳುವಂತೆ ಸೂಚನೆ ನೀಡಲಾಗಿದೆ.
ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ಇದನ್ನು ದೃಢೀಕರಿಸಿದ್ದು, ಈ ಬಗ್ಗೆ ಉಪನ್ಯಾಸಕರಿಗೆ ಇಲಾಖೆ ಸುತ್ತೋಲೆಯನ್ನು ಕೂಡ ಕಳುಹಿಸಲಾಗಿದೆ. ಸುತ್ತೋಲೆಯಲ್ಲಿರುವಂತೆ ಉನ್ನತ ಶಿಕ್ಷಣ ಇಲಾಖೆಯು ಸರ್ಕಾರಿ ಕಚೇರಿಗಳಿಗೆ ಕಾರ್ಯಕ್ಷೇತ್ರಗಳಲ್ಲಿ ಶೇಕಡಾ 100ರಷ್ಟು ಸಿಬ್ಬಂದಿ ಸಾಮರ್ಥ್ಯವನ್ನು ಉಲ್ಲೇಖಿಸಿದ್ದು, ಸರ್ಕಾರಿ ಮತ್ತು ಖಾಸಗಿ ಅನುದಾನಿತ ಪದವಿ ಕಾಲೇಜುಗಳ ಎಲ್ಲಾ ಬೋಧನಾ ಮತ್ತು ಬೋಧಕೇತರ ಸಿಬ್ಬಂದಿಯನ್ನು ಕಡ್ಡಾಯವಾಗಿ ಕಾಲೇಜು ಕೆಲಸಕ್ಕೆ ಹಾಜರಾಗುವಂತೆ ಕೇಳಿಕೊಂಡಿದೆ.
ಅಂತೆಯೇ ಈ ವೇಳೆ ಕೆಲಸದ ಸ್ಥಳದಲ್ಲಿ ಕಡ್ಡಾಯ ದೈಹಿಕ ಅಂತರ ಪಾಲಿಸುವಂತೆ ಸೂಚಿಸಲಾಗಿದೆ. ಇನ್ನು ದೈಹಿಕ ಅಂಗ ವೈಕಲ್ಯ ಹೊಂದಿರುವ ಸಿಬ್ಬಂದಿಗಳು ಮತ್ತು ಗರ್ಭಿಣಿಯರಿಗೆ ಈ ನಿಯಮದಿಂದ ವಿನಾಯಿತಿ ನೀಡಲಾಗಿದೆ ಎಂದು ಕರ್ನಾಟಕ ಸರ್ಕಾರಿ ಕಾಲೇಜು ಶಿಕ್ಷಕರ ಸಂಘದ (ಕೆಜಿಸಿಟಿಎ) ಅಧ್ಯಕ್ಷ ಟಿ ಎಂ ಮಂಜುನಾಥ್ ಟಿಎನ್ಐಇಗೆ ತಿಳಿಸಿದರು. ಈ ವಿನಾಯಿತಿಯನ್ನು ಇಲಾಖೆಯ ಸುತ್ತೋಲೆಯಲ್ಲಿ ಸ್ಪಷ್ಟವಾಗಿ ಹೇಳಲಾಗಿಲ್ಲ ಎಂದೂ ಅವರು ಸ್ಪಷ್ಟಪಡಿಸಿದರು.
ಇನ್ನು ಈ ಹಿಂದೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ ನಾರಾಯಣ್ ಅವರು ಜುಲೈ 7 ರಂದು ವಿದ್ಯಾರ್ಥಿಗಳಿಗೆ ಲಸಿಕೆ ಹಾಕಲು ತಾತ್ಕಾಲಿಕ ಗಡುವು ಮತ್ತು ವಿಶ್ವವಿದ್ಯಾನಿಲಯಗಳಿಗೆ ಇನ್ನೂ ಕೆಲವು ದಿನಗಳ ಕಾಲಾವಕಾಶವನ್ನು ನಿಗದಿಪಡಿಸಿದ್ದರು. ಗುರುವಾರ ಅವರು ನೀಡಿದ ಹೇಳಿಕೆಯಲ್ಲಿ, ಪದವಿ ಕಾಲೇಜುಗಳನ್ನು ಪ್ರಾರಂಭಿಸುವ ದಿನಾಂಕವನ್ನು ಇನ್ನೂ ಸರ್ಕಾರಿ ಮಟ್ಟದಲ್ಲಿ ನಿರ್ಧರಿಸಲಾಗಿಲ್ಲ ಎಂದು ಹೇಳಿದರು. ಇದೀಗ, 18 ವರ್ಷಕ್ಕಿಂತ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಲಸಿಕೆ ನೀಡುವ ಬಗ್ಗೆ ಸರ್ಕಾರ ಗಮನಹರಿಸಿದೆ ಎಂದರು.
"ಎಲ್ಲಾ ಮಧ್ಯಸ್ಥಗಾರರೊಂದಿಗೆ ಸಮಾಲೋಚಿಸಿದ ನಂತರ ಕಾಲೇಜು ಪುನರಾರಂಭದ ದಿನಾಂಕಗಳನ್ನು ಘೋಷಿಸಲಾಗುವುದು ಎಂದು ಅವರು ಹೇಳಿದರು. ರಾಜ್ಯದಲ್ಲಿ ಇದುವರೆಗೆ ಶೇಕಡಾ 65 ರಷ್ಟು ವಿದ್ಯಾರ್ಥಿಗಳಿಗೆ ಲಸಿಕೆ ನೀಡಲಾಗಿದೆ ಎಂದು ಹೇಳಿದರು. ಈ ಮಧ್ಯೆ ಕಾಲೇಜುಗಳ ಶಿಕ್ಷಣ ಇಲಾಖೆಯ ಆಯುಕ್ತ ಪ್ರದೀಪ್ ಪಿ, ಕಾಲೇಜುಗಳನ್ನು ಪುನಃ ತೆರೆಯುವ ಬಗ್ಗೆ ಪ್ರಕಟಣೆಗಳನ್ನು ನಿರೀಕ್ಷಿಸಲಾಗಿದೆ ಎಂದು ಹೇಳಿದರು.
Advertisement