ಬೆಂಗಳೂರು: ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳುವಂತೆ ತನಗೆ ಮತ್ತು ತನ್ನ ಹೆತ್ತವರಿಗೆ ಪತ್ನಿ ಒತ್ತಡ ಹಾಕುತ್ತಿದ್ದಾಳೆ ಎಂದು 28ರ ಹರೆಯದ ಯುವಕ ನೀಡಿರುವ ಖಾಸಗಿ ದೂರಿನ ತನಿಖೆ ನಡೆಸುವಂತೆ ಸಿಟಿ ನ್ಯಾಯಾಲಯ ಪೊಲೀಸರಿಗೆ ಸೂಚಿಸಿದೆ. ನ್ಯಾಯಾಲಯದ ನಿರ್ದೇಶನದ ಮೇರೆಗೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.
ಮಹಾಲಕ್ಷ್ಮಿ ಲೇಔಟ್ನ ಅಶೋಕಪುರಂನಲ್ಲಿ ವಾಸವಾಗಿರುವ ವೆಲ್ಡರ್ ದೀಪಕ್ ಎಂಬಾತ ತನ್ನ 26 ವರ್ಷದ ಪತ್ನಿ ಸುನೀತಾ ಗ್ರೇಸಿ ಸೇರಿ ಐವರ ವಿರುದ್ಧ ದೂರು ದಾಖಲಿಸಿದ್ದಾರೆ. ದೀಪಕ್ ಮತ್ತು ಗ್ರೇಸಿ ಮೂರು ವರ್ಷಗಳ ಹಿಂದೆ ಜನವರಿ 18, 2019 ರಂದು ಎಲೆಕ್ಟ್ರಾನಿಕ್ಸ್ ಸಿಟಿಯ ದೇವಸ್ಥಾನದಲ್ಲಿ ಮದುವೆಯಾಗಿದ್ದರು, ಅದಕ್ಕೂ ಮುಂಚೆ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಪ್ರಸ್ತುತ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ.
ದೀಪಕ್ ಕೆಲಸ ನಿಮಿತ್ತ ಬೇರೆ ಬೇರೆ ರಾಜ್ಯಗಳಿಗೆ ಹೋಗುತ್ತಿರುತ್ತಾರೆ. ಹೋಗುವ ಮೊದಲು ಪತ್ನಿಗೆ ತಿಳಿಸಿದರೂ ತನ್ನ ಮೇಲೆ ಪತ್ನಿ ನಾಪತ್ತೆ ದೂರು ನೀಡುತ್ತಾಳೆ ಎಂದು ದೀಪಕ್ ಆರೋಪಿಸಿದ್ದಾರೆ. ಪತಿ ಹಣ ನೀಡಿದರೂ ಬಾಡಿಗೆ ಕೊಡಲು ಹಣ ನೀಡುತ್ತಿಲ್ಲ ಎಂದು ಆರೋಪಿಸುತ್ತಾಳೆ. ಪತಿಯ ಹೆಸರಿನಲ್ಲಿ ಸ್ನೇಹಿತರಲ್ಲಿ, ಪರಿಚಯಸ್ಥರಲ್ಲಿ ಸಾಲ ತೆಗೆದುಕೊಂಡು ಮರುಪಾವತಿಸುವ ಬೇಡಿಕೆಯು ಹೆಚ್ಚಾದಾಗ, ಗಂಡನ ಸ್ಥಳಕ್ಕೆ ಕಳುಹಿಸುತ್ತಾಳೆ, ಹೀಗೆ ಹತ್ತಾರು ಮಾನಸಿಕ ಕಿರುಕುಳ ನೀಡುತ್ತಾಳೆ ಎಂದು ಸಹ ದೀಪಕ್ ಪತ್ನಿಯ ಬಗ್ಗೆ ಆರೋಪಿಸಿದ್ದಾರೆ.
ನ್ಯಾಯಾಲಯದಲ್ಲಿ ಖಾಸಗಿ ದೂರಿನಲ್ಲಿ ದೀಪಕ್, ತನ್ನ ಪತ್ನಿ ತನಗೆ, ತನ್ನ ಹೆತ್ತವರು ಮತ್ತು ಸಹೋದರನನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳಿಸುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಮತಾಂತರವಾಗದಿದ್ದರೆ ಅವರ ಮೇಲೆ ಸುಳ್ಳು ಆರೋಪ ಹೊರಿಸುವುದಾಗಿ ಬೆದರಿಕೆ ಹಾಕಿದ್ದಾಳೆ. ಆಕೆಯ ಪೋಷಕರು ಮತ್ತು ಇತರ ಕುಟುಂಬ ಸದಸ್ಯರು ಆಕೆಗೆ ಬೆಂಬಲ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
“ದಂಪತಿಗಳು ಸೌಹಾರ್ದಯುತ ಸಂಬಂಧದಲ್ಲಿಲ್ಲ. ಪತಿ ಕೆಲಸದ ಮೇಲೆ ಹೊರಗೆ ಹೋದಾಗಲೂ ಗ್ರೇಸಿ ಮೂರು ನಾಪತ್ತೆ ದೂರುಗಳನ್ನು ದಾಖಲಿಸಿದ್ದಾರೆ. ದೀಪಕ್ ಕೂಡ ಪತ್ನಿ ತನ್ನ ಹೆಸರು ಬಳಸಿ ಹಲವರಿಂದ ಹಣ ಪಡೆದಿದ್ದರಿಂದ ಕಂಗಾಲಾಗಿ ಹೋಗಿದ್ದಾರೆ. ಅವರು ನಗರದ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದಾರೆ. ನ್ಯಾಯಾಲಯದ ನಿರ್ದೇಶನದ ಆಧಾರದ ಮೇಲೆ ಎಫ್ಐಆರ್ ದಾಖಲಿಸಲಾಗಿದೆ. ಬಲವಂತದ ಮತಾಂತರ ಆರೋಪದ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement